ಹಲವಾರು ಭಾಗ್ಯಗಳನ್ನು ಕೊಟ್ಟಿರುವ ಮುಖ್ಯಮಂತ್ರಿಗಳು ಬಡವರಿಗೆ ಭೂಮಿಯ ಹಕ್ಕನ್ನೂ ನೀಡಬೇಕೆಂದು ಭರವಸೆಯನ್ನು ನೀಡಲಿ ಎಂದು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಆರ್ಯ ಈಡಿಗ ಸಮಾವೇಶದಲ್ಲಿ ಮಾತನಾಡಿದ ಅವರು, “ನಮ್ಮ ಸಮುದಾಯದವರಿಗೆ ಭೂ ಹಕ್ಕನ್ನು ನೀಡಬೇಕೆಂದು ಏಳೆಂಟು ಹೋರಾಟ ಮಾಡಿದ್ದೇವೆ. ದೇವರಾಜ ಅರಸು ನಂತರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪನವರು ಬಡವರಿಗೆ ಭೂಮಿ ಕೊಟ್ಟರು. ಹಲವಾರು ಭಾಗ್ಯಗಳನ್ನು ಕೊಟ್ಟಿರುವ ಮುಖ್ಯಮಂತ್ರಿಗಳು ನಮ್ಮ ಸಮುದಾಯದ ಬಡವರಿಗೆ ಬಗುರ್ ಹುಕುಂ ನೀಡಬೇಕು” ಎಂದು ಮನವಿ ಮಾಡಿದರು.
“ಶರಾವತಿ ಯೋಜನೆಯಿಂದ ಸಂತ್ರಸ್ತರಾಗಿ ಭೂಮಿಯನ್ನು ಕೊಟ್ಟವರು ಇಂದು ಕತ್ತಲಲ್ಲಿದ್ದಾರೆ. ರಾಜ್ಯಕ್ಕೆ ಬೆಳಕು ಕೊಟ್ಟು ಕತ್ತಲಲ್ಲಿ ಇರುವವರು ಇದ್ದಾರೆ. ಈ ಸಮುದಾಯಕ್ಕೆ ಹಕ್ಕುಪತ್ರವನ್ನು ನೀಡುವ ಕೆಲಸ ಮಾಡಬೇಕೆಂದು ಕೋರುತ್ತೇನೆ” ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
“ನಾವೆಲ್ಲ ಹೆಂಡವನ್ನು ಮಾರಿಕೊಂಡು ಬಂದ ಕುಟುಂಬದವರು. ಕುಲಕಸುಬವನ್ನು ನಂಬಿಕೊಂಡಿರುವುದರಿಂದ ಈಗ ಸಮುದಾಯದ ಅನೇಕರು ಬೀದಿಪಾಲಾಗಿದ್ದಾರೆ. ನಮ್ಮ ಸಮುದಾಯವನ್ನು ಮೇಲೆತ್ತುವ ಭರವಸೆಯನ್ನು ಸರ್ಕಾರ ನೀಡಬೇಕು. ಕಲ್ಯಾಣ ಕರ್ನಾಟಕದಲ್ಲಿ ಕುಲಕಸುಬನ್ನೇ ನಂಬಿಕೊಂಡಿದ್ದವರು ಬಡವರಾಗಿ ಕೂಲಿಕಾರರಾಗಿಯೇ ಇದ್ದಾರೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮೇಲುತ್ತುವ ಕೆಲಸ ಆಗಬೇಕಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ತೆಲಂಗಾಣ | ಅಂದು ಗನ್ ಹಿಡಿದಿದ್ದ ನಕ್ಸಲೈಟ್, ಇಂದು ಕ್ಯಾಬಿನೆಟ್ ಮಿನಿಸ್ಟರ್; ಸೀತಕ್ಕನ ರೋಚಕ ಪಯಣ
ಬಂಗಾರಪ್ಪನವರನ್ನು ನಿಮ್ಮಲ್ಲಿ ಕಾಣುತ್ತಿದ್ದೇನೆ
“ಒಬ್ಬರು ಬಂಗಾರಪ್ಪನವರನ್ನು ಕಳೆದುಕೊಂಡಿದ್ದಾರೆ. ಆದರೆ ಲಕ್ಷಾಂತರ ಬಂಗಾರಪ್ಪನವರು ನಮ್ಮಲ್ಲಿ ಇದ್ದಾರೆ. ನಿಮ್ಮಲ್ಲಿ ನಾನು ಬಂಗಾರಪ್ಪನವರನ್ನು ಕಾಣುತ್ತಿದ್ದೇನೆ. ನಿಮ್ಮಿಂದ ಬಡವರ ಪರ ಕಳಕಳಿ, ಚಿಂತನೆ ನೋಡುತ್ತಿದ್ದೇನೆ. ಬಂಗಾರಪ್ಪನವರ ಸ್ಥಾನದಲ್ಲಿ ನಿಮ್ಮನ್ನು ನೋಡುತ್ತಿದ್ದೇನೆ. ಈ ಒಗ್ಗಟ್ಟು ಮುಂದುವರಿಯಬೇಕು. ನಾರಾಯಣ ಗುರುಗಳು ಹೇಳಿಕೊಟ್ಟಿರುವಂತೆ ಸಂಘಟನೆಯಲ್ಲಿ ಶಕ್ತಿವಂತರಾಗಿರಿ”ಎಂದು ಕರೆ ನೀಡಿದರು.
“ನಾರಾಯಣ ಗುರುಗಳ ತತ್ವ ಸಿದ್ಧಾಂತವನ್ನು ಒಪ್ಪಿ ಬಂದಿರುವ 26 ಸಮಾಜದ ಬಂಧು ಮಿತ್ರರು ಬಂದಿದ್ದೀರಿ. ಸಂಘಟನೆಯಿಂದ ಶಕ್ತಿವಂತರಾಗಬಹುದು ಎಂಬುದನ್ನು ತೋರಿಸಿದ್ದೀರಿ. ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತಿಯನ್ನು ಮಾಡಿದವರು ಸಿದ್ದರಾಮಯ್ಯ. ಹಾಗೆಯೇ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠವನ್ನು ಮಾಡಿಕೊಡಬೇಕು. ಪಠ್ಯಪುಸ್ತಕದಲ್ಲಿ ನಾರಾಯಣ ಗುರುಗಳನ್ನು ಸೇರಿಸುವಂತೆ ಕೇಳಿದ್ದೆ, ಅದನ್ನು ಸಿಎಂ ನೆರವೇರಿಸಿದ್ದಾರೆ” ಎಂದು ಮಧು ಬಂಗಾರಪ್ಪ ಹೇಳಿದರು.