ಇಂದು ಸದನದಲ್ಲಿ (ಡಿಸೆಂಬರ್ 13) ಭಾರೀ ಭದ್ರತಾ ಲೋಪವಾದ ನಂತರ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಸಂದರ್ಶಕರ ಪಾಸ್ಅನ್ನು ರದ್ದುಗೊಳಿಸಿದ್ದಾರೆ. ಇಂದಿನ ಕಲಾಪದ ನಂತರ ಸದನದ ಸರ್ವಪಕ್ಷದ ನಾಯಕರ ಸಭೆಗೆ ಕರೆ ನೀಡಿದ್ದಾರೆ.
ಲೋಕಸಭೆಯಲ್ಲಿ ಭಾರಿ ಭದ್ರತಾ ಲೋಪದ ನಂತರ ಇಬ್ಬರು ವ್ಯಕ್ತಿಗಳು ಸದನದ ಸಂದರ್ಶಕರ ಗ್ಯಾಲರಿಯಿಂದ ಜಿಗಿದು ಗದ್ದಲವುಂಟು ಮಾಡಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸದನದೊಳಗೆ ನುಗ್ಗಿದ ಇಬ್ಬರು ವ್ಯಕ್ತಿಗಳು ಗ್ಯಾಸ್ ಸ್ಪ್ರೇ ಹರಡಿದ್ದಾರೆ. 2001ರ ಸಂಸತ್ ದಾಳಿಯ 22 ನೇ ವಾರ್ಷಿಕೋತ್ಸವದಂದು ಈ ಭದ್ರತಾ ಲೋಪ ಹೇಗೆ ಸಂಭವಿಸಿತು ಎಂಬುದರ ಕುರಿತು ವಿವರವಾದ ವರದಿಯನ್ನು ಲೋಕಸಭೆ ಸ್ಪೀಕರ್ ಕೇಳಿದ್ದಾರೆ.
ಏತನ್ಮಧ್ಯೆ, ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಮತ್ತು ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಕೂಡ ಪರಿಸ್ಥಿತಿಯನ್ನು ಅವಲೋಕಿಸಲು ಸಂಸತ್ತಿಗೆ ಆಗಮಿಸಿದ್ದಾರೆ. 2001 ರ ಸಂಸತ್ತಿನ ದಾಳಿಯ ವಾರ್ಷಿಕೋತ್ಸವದಂದು ಭಯವನ್ನು ಹರಡುವ ಹಳದಿ ಅನಿಲವನ್ನು ಸಿಂಪಡಿಸುತ್ತಾ ಸದನದೊಳಗೆ ಓಡುತ್ತಿರುವಾಗ ನೀಲಿ ಜಾಕೆಟ್ ಧರಿಸಿದ್ದ ವ್ಯಕ್ತಿಯೊಬ್ಬರು ಟೇಬಲ್ಗಳ ಮೇಲೆ ಹತ್ತುತ್ತಿರುವುದು ಕಂಡುಬಂದಿದೆ.
ಲೋಕಸಭೆ ಎಲ್ಲ ಗ್ಯಾಲರಿಗಳಲ್ಲಿ ಇಬ್ಬರು ಭದ್ರತಾ ಅಧಿಕಾರಿಗಳು ಕಲಾಪದಲ್ಲಿ ಹಾಜರಿದ್ದರು. ದೆಹಲಿ ಪೊಲೀಸ್ ಮೂಲಗಳ ಪ್ರಕಾರ, ಲೋಕಸಭೆಯ ಸಂದರ್ಶಕರ ಗ್ಯಾಲರಿಯಿಂದ ಜಿಗಿದ ವ್ಯಕ್ತಿಗಳನ್ನು ಉತ್ತರ ಪ್ರದೇಶದ ಸಾಗರ್ ಶರ್ಮಾ ಮತ್ತು ಮೈಸೂರು ಮೂಲದ ಮನೋರಂಜನ್ ಎಂದು ಗುರುತಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಲೋಕಸಭೆಯಲ್ಲಿ ಭದ್ರತಾಲೋಪ | ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೆಸರಲ್ಲಿ ಪಾಸ್ ಪಡೆದಿದ್ದ ಅಪರಿಚಿತರು
2016ರಲ್ಲಿ ನಡೆದಿದ್ದ ಘಟನೆ
ಇದೇ ರೀತಿಯ ಲೋಕಸಭೆಗೆ ನುಗ್ಗಿದ ಘಟನೆ 2016ರಲ್ಲೂ ನಡೆದಿತ್ತು. ಹಳೆಯ 500 ಮತ್ತು 1000 ರೂಪಾಯಿ ನೋಟುಗಳನ್ನು ನಿಷೇಧಿಸಿದ ಸರ್ಕಾರದ ಕ್ರಮವನ್ನು ಖಂಡಿಸಿ 2016ರ ನವೆಂಬರ್ 25 ರಂದು ಲೋಕಸಭೆಯ ಸಂದರ್ಶಕರ ಗ್ಯಾಲರಿಯಿಂದ ವ್ಯಕ್ತಿಯೊಬ್ಬರು ಸದನಕ್ಕೆ ಜಿಗಿಯಲು ಪ್ರಯತ್ನಿಸಿದ್ದರು.
ಮಧ್ಯಪ್ರದೇಶದ ಬುಲಂದ್ಶಹರ್ನ ಬಿಜೆಪಿ ಸಂಸದ ಭೋಲಾ ಸಿಂಗ್ ಅವರ ಪಾಸ್ ಪಡೆದು ರಾಕೇಶ್ ಸಿಂಗ್ ಬಘೇಲ್ ಎಂಬಾತ ಅಂದು ಸಂಸತ್ತಿಗೆ ಪ್ರವೇಶಿಸಿ ಗ್ಯಾಲರಿಯಿಂದ ಜಿಗಿಯಲು ಪ್ರಯತ್ನಿಸಿದ್ದ. ಪೊಲೀಸರು ಆತನ ಯತ್ನವನ್ನು ವಿಫಲಗೊಳಿಸಿ ಬಂಧಿಸಿದ್ದರು.