ಸೇವೆ ಖಾಯಮಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರು ಗುರುವಾರ(ಡಿ.14) ವಿಜಯಪುರದಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ.
ಜಿಲ್ಲಾಧಿಕಾರಿ ಕಛೇರಿ ಎದುರು ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿರುವ ಸರ್ಕಾರಿ ಪದವಿ ಕಾಲೇಜುಗಳ ಉಪನ್ಯಾಸಕರು, ನಗರದಲ್ಲಿ ಜಾಥಾ ಮಾಡಿದ್ದಲ್ಲದೇ, ಸರ್ಕಾರದದ ಮೇಲೆ ಒತ್ತಡ ಹೇರಲು ಅರೆ ಬೆತ್ತಲೆ ಪ್ರತಿಭಟನೆ ಕೈಗೊಂಡರು.
ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ಕಳೆದ 20ವರ್ಷಗಳಿಂದ ಯಾವುದೇ ಸೌಲಭ್ಯಗಳಿಲ್ಲದೇ ಅತ್ಯಂತ ಕಡಿಮೆ ಸಂಬಳಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದರೂ ಅತಿಥಿ ಉಪನ್ಯಾಸಕರು ಆರ್ಥಿಕ ಸಂಕಷ್ಟದಿಂದಾಗಿ ನಿತ್ಯದ ಜೀವನ ನಿರ್ವಹಣೆಗೆ ಪರದಾಡುವ ದುಸ್ಥಿತಿಯಲ್ಲಿದ್ದೇವೆ. ಇಷ್ಟಾದರೂ ಸರ್ಕಾರ ಮಾನವೀಯ ನೆಲೆಯಲ್ಲಿ ನಮ್ಮ ಸಮಸ್ಯೆಗಳನ್ನು ಆಲಿಸುವ ಹಾಗೂ ಪರಿಹರಿಸುವಲ್ಲಿ ಆಸಕ್ತಿ ತೋರಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸೇವೆ ಖಾಯಂ ಮಾಡುವುದು ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೂರು ವಾರಗಳಿಂದ ತರಗತಿ ಬಹಿಷ್ಕರಿಸಿ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದೇವೆ. ಆದರೂ ಸರ್ಕಾರ ತಮ್ಮ ಬೇಡಿಕೆಗಳ ಈಡೇರಿಕೆಗೆ ಸ್ಪಂದಿಸಿಲ್ಲ ಎಂದು ಪ್ರತಿಭಟನಾಕಾರರು ಕಿಡಿ ಕಾರಿದರು.
ಮುಷ್ಕರದಲ್ಲಿ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಡಬ್ಬಿ, ಕಾರ್ಯದರ್ಶಿ ಆರ್.ಎಲ್.ಕಡೆಮನಿ, ಡಾ.ಆನಂದ ಕುಲಕರ್ಣಿ, ಡಾ.ರಾಜು ಚವ್ಹಾಣ, ಡಾ.ಎಸ್.ಐ.ಎಂಬತ್ತನಾಳ, ಡಾ. ರಮೇಶ ತೇಲಿ, ಡಾ.ಆರ್.ಸಿ.ದಾಯಗೊಂಡ, ಡಾ.ರೇಣುಕಾ ಹೆಬ್ಬಾಳ, ಡಾ.ಅಶೋಕ ಬಿರಾದಾರ, ಡಾ.ಡಿ.ಬಿ.ಕುಲಕಣಿ, ಡಾ.ಎಸ್.ಎ.ಪಾಟೀಲ, ಡಾ.ಎಸ್.ಡಿ.ಬಿರಾದಾರ, ಡಾ.ಎಸ್.ಬಿ. ಗಂಗಮಾಲಿ, ಡಾ. ಎಸ್.ಎಸ್. ಗಡಿಗೆಪ್ಪಗೌಡರ, ಡಾ.ಎಸ್.ಪಿ.ತಳವಾರ, ಡಾ.ಆರ್.ಬಿ. ನಾಗರಡ್ಡಿ, ಡಾ.ಎಂ.ಎಸ್. ಶಿವಶರಣ, ಡಾ.ರಾಜೇಶ್ವರಿ ಅವಟಿ, ಡಾ.ರೇಣುಕಾ ಹೆಬ್ಬಾಳ, ಡಾ.ಎಚ್.ಕುಮಾರಸ್ವಾಮಿ, ಶಿವಾನಂದ ಸಿಂಹಾಸನಮಠ, ಗಜ್ಜು ರಾಠೋಡ, ಗೀತಾ ರಜಪೂತ, ಡಾ.ವಿಜಯಲಕ್ಷ್ಮೀ ಪಾಟೀಲ, ಡಾ.ವಿಕ್ರಮ ಬಿರಾದಾರ, ಡಾ. ಬೌರಮ್ಮ ಗಂಜಾರ. ಡಾ.ವಿಜಯಲಕ್ಷ್ಮೀ ಪಾಟೀಲ ಸೇರಿದಂತೆ ಇತರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.