ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಗದಗ ಜಿಲ್ಲಾ ಸಮಿತಿ, ದೇವದಾಸಿ ಮಹಿಳೆಯರ ಬೇಡಿಕೆ ಈಡೇರಿಕೆಗಾಗಿ ಬೆಂಗಳೂರು ಚಲೋ ಹಮ್ಮಿಕೊಂಡಿದ್ದು, ಡಿಸೆಂಬರ್ 28, 29, 30ರಂದು ಪ್ರತಿಭಟನೆ ನಡೆಸಲಿದೆ. ಈ ಕುರಿತು ಗದಗ ನಗರಸಭೆ ಗಾರ್ಡನ್ ಆವರಣದಲ್ಲಿ ಜಿಲ್ಲಾ ಮಟ್ಟದ ಸಮಾವೇಶ ನಡೆಸಲಾಯಿತು.
ಈ ವೇಳೆ ರಾಜ್ಯ ಗೌರವಾಧ್ಯಕ್ಷರಾದ ಯು. ಬಸವರಾಜ ಮತನಾಡಿ, ರಾಜ್ಯ ಸರ್ಕಾರದ ವಶದಲ್ಲಿ ದಶಲಕ್ಷಾಂತರ ಎಕರೆ ಜಮೀನು ಇದ್ದರೂ ಮತ್ತು ದಲಿತರ ಅಭಿವೃದ್ಧಿಯ ಹೆಸರಿನಲ್ಲಿ ಪ್ರತಿ ವರ್ಷ 30,000ಕೋಟಿ ರೂ.ಗಳಿಗೂ ಅಧಿಕ ಮೊತ್ತ ಹೊಂದಿದ್ದರೂ ದೇವದಾಸಿ ಪದ್ಧತಿಯು ಈಗಲೂ ಮುಂದುವರಿಯುತ್ತಿರುವುದಕ್ಕೆ ಅವುಗಳ ಮೇಲ್ಜಾತಿ ಹಾಗೂ ಮೇಲ್ವರ್ಗಗಳ ಪರವಾದ ರಾಜಕಾರಣವೇ ಕಾರಣವಾಗಿದೆ.
ತಕ್ಷಣವೇ ಸರ್ಕಾರ ತಮ್ಮ ಹಳೆಯ ಹಳಸಲು ನಿಲುವನ್ನು ಕೈಬಿಟ್ಟು, ಕಾಲಮಿತಿಯೊಳಗೆ ದೇವದಾಸಿ ಪದ್ಧತಿಯನ್ನು ಬೇರು ಸಮೇತ ನಿರ್ಮೂಲನೆ ಮಾಡಲು ಗಂಭೀರ ಕ್ರಮ ವಹಿಸುವಂತೆ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಒತ್ತಾಯಿಸಿದೆ. ದೇವದಾಸಿ ಪದ್ಧತಿಯ ನಿರ್ಮೂಲನೆ ಮಾಡಬೇಕು ಹಾಗೂ ಸಾಮಾಜಿಕ ದೌರ್ಜನ್ಯದ ದೇವದಾಸಿ ಪದ್ಧತಿ ನಿಷೇಧ ಕಾಯ್ದೆಗೆ ಈ ಕೆಳಕಂಡ ಅಂಶಗಳ ಆಧಾರದಲ್ಲಿ ತಿದ್ದುಪಡಿ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈಗಾಗಲೇ ದೇವದಾಸಿ ಮಹಿಳೆಯರ ಜೊತೆ ಸಂಸಾರ ನಡೆಸಿದ್ದು ಅವರ ಸಂತಾನಕ್ಕೆ ಕಾರಣರಾದವರಿಗೆ ಹೊಣೆಗಾರಿಕೆ ನಿಗದಿಪಡಿಸಬೇಕು. ಅವರುಗಳ ಆಸ್ತಿಯಲ್ಲಿ ಮಕ್ಕಳಿಗೆ ಪಾಲು ದೊರೆಯುವಂತೆ ಕ್ರಮ ವಹಿಸಬೇಕು. ಈ ವಿಚಾರದ ದೂರುಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೊಣೆಗಾರಿಕೆ ವಹಿಸಿ ಕ್ರಮ ವಹಿಸಬೇಕು.
ಇನ್ನು ಮುಂದೆ ಯಾವುದೇ ದೌರ್ಜನ್ಯದಿಂದ ದೇವದಾಸಿ ಪದ್ಧತಿಯ ಫಲಾನುಭವಿಯಾಗುವ ವ್ಯಕ್ತಿಯು ದುರುದ್ದೇಶದಿಂದ ಈ ದೌರ್ಜ್ಯನ್ಯ ಎಸಗಿದರೆ ಕ್ರಮ ವಹಿಸುವ ಫಲಾನುಭವಿಯನ್ನು ಮುಖ್ಯ ಅಪರಾಧಿಯಾಗಿಸಿ ಬಂಧಿಸಬೇಕು. ಇದುವರೆಗಿನ ಎಲ್ಲ ವಯೋಮಾನದ ದೇವದಾಸಿ ಮಹಿಳೆಯರನ್ನು ಮತ್ತು ಅವರ ಕುಟುಂಬದ ಸದಸ್ಯರು ಹಾಗೂ ಆ ಕುಟುಂಬದ ಪರಿತ್ಯಕ್ತ ಮಹಿಳೆಯರನ್ನು ಪ್ರತ್ಯೇಕವಾಗಿ ಗಣತಿ ಮಾಡಿ ಪುನರ್ವಸತಿಗೆ ಕ್ರಮ ವಹಿಸಬೇಕು.
ವಯೋಮಾನ ಭೇದವಿಲ್ಲದೆ ಮಾಸಿಕ ಸಹಾಯಧನವಾಗಿ ತಲಾ 5,000 ರೂ ಒದಗಿಸಬೇಕು ಎಂದು ಒತ್ತಾಯಿಸಲು ಇದೇ ಡಿಸೆಂಬರ್ ತಿಂಗಳು 28, 29, 30 ಮೂರು ದಿನಗಳ ಕಾಲ ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಹೋರಾಟ ನಡೆಸಲಾಗುವುದು ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಮಾಳಮ್ಮ ಮಾತನಾಡಿ, ಕೃಷಿಯಲ್ಲಿ ತೊಡಗಲು ಬಯಸುವ ಎಲ್ಲ ಮಹಿಳೆಯರಿಗೆ ಮತ್ತು ದಲಿತ ಕುಟುಂಬಗಳಿಗೆ ಮುಂದಿನ ಹತ್ತು ವರ್ಷಗಳೊಳಗೆ ಪ್ರತೀ ಕುಟುಂಬಕ್ಕೆ ಕನಿಷ್ಠ ತಲಾ ಐದು ಎಕರೆ ನೀರಾವರಿ ಜಮೀನನ್ನು ಒದಗಿಸಲು ಯೋಜಿಸಬೇಕು. ಇದಕ್ಕಾಗಿ ಪ್ರತಿಯೊಂದು ಗ್ರಾಮದಲ್ಲಿ ಹೆಚ್ಚು ಭೂಮಿ ಹೊಂದಿರುವವರ ಜಮೀನುಗಳನ್ನು ಭೂ ಸ್ವಾಧೀನ ಮಾಡಬೇಕು. ಕನಿಷ್ಠ ಒಂದು ಲಕ್ಷ ರೂ ಸಹಾಯಧನವಿರುವ ಎರಡು ಲಕ್ಷ ರೂಗಳ ಸ್ವಯಂ ಉದ್ಯೋಗದ ಸಾಲ ಸೌಲಭ್ಯ ಸರಕಾರದ ಗ್ಯಾರಂಟಿಯೊಂದಿಗೆ ಐದು ವರ್ಷಗಳ ಬಡ್ಡಿರಹಿತ ಸಾಲ ಒದಗಿಸಬೇಕು. ದೇವದಾಸಿ ಮಹಿಳೆಯರ ಮಕ್ಕಳು ಅವರ ನಡುವೆ ವಿವಾಹವಾದರೂ ತಲಾ ಮೂರು ಲಕ್ಷ ರೂ. ಸಹಾಯ ಒದಗಿಸಬೇಕು.
ವಿದ್ಯಾವಂತ ನಿರುದ್ಯೋಗಿ ಯುವಜನರಿಗೆ ಮಾಸಿಕ ತಲಾ 10,000 ರೂ ನಿರುದ್ಯೋಗ ಭತ್ಯೆ ಒದಗಿಸಬೇಕು. ಪುನರ್ವಸತಿ ಯೋಜನೆಯನ್ನು ಯಾವುದೇ ಸ್ವಯಂ ಸೇವಾ ಸಂಸ್ಥೆಗಳಿಗೆ ವಹಿಸಿಕೊಡಬಾರದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ನಡೆಸಬೇಕು. ಗಣತಿ ಪಟ್ಟಿಯಲ್ಲಿರುವ ಮಹಿಳೆಯರ ವಯೋ ಹಿರಿತನದ ಆಧಾರದಲ್ಲಿ ಎಲ್ಲಾ ಸೌಲಭ್ಯಗಳು ಕನಿಷ್ಠ 10 ವರ್ಷದ ಕಾಲ ಮಿತಿಯೊಳಗೆ ಯಾವುದೇ ಅರ್ಜಿಗಳನ್ನು ಪಡೆಯದೇ ಅವರ ಬ್ಯಾಂಕ್ ಖಾತೆಗೆ ನೇರ ಸೌಲಭ್ಯ ವಿತರಿಸಲು ಕ್ರಮ ವಹಿಸಬೇಕು ಮತ್ತು ಆ ಮೂಲಕ ಭ್ರಷ್ಠಾಚಾರವನ್ನು ತಡೆಯಬೇಕು ಎಂದು ಅವರು ಒತ್ತಾಯಿಸಿದರು.
ಬಾಲು ರಾಠೋಡ್, ದೇವಮ್ಮ ಜೋಗಣ್ಣವರ, ಹುಲಿಗೆಮ್ಮ, ಪಕ್ಕೀರಮ್ಮ ಪೂಜಾರ, ಮೈಲಾರಪ್ಪ ಮಾದರ, ಪರಶುರಾಮ ಮಾದರ, ಮರಿಯಮ್ಮ ಹುಲಕೋಟಿ, ಭೀಮವ್ವ ನರಗುಂದ, ಮಲ್ಲಿಕಾರ್ಜುನ ಮಾದರ ಹಾಗೂ ನೂರಾರು ಜನ ಹಾಜರಿದ್ದರು.