ಮುಖ್ಯ ಚುನಾವಣಾ ಆಯುಕ್ತ ಮತ್ತು ಇಬ್ಬರು ಚುನಾವಣಾ ಆಯುಕ್ತರ ನೇಮಕ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕೆಂದು ಸುಪ್ರೀಮ್ ಕೋರ್ಟ್ ಇರಾದೆಯಾಗಿತ್ತು. ಈ ಸಂಬಂಧದಲ್ಲಿ ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ನೀಡಿದ್ದ ತೀರ್ಪನ್ನು ಬದಿಗೆ ತಳ್ಳಲು ಮೋದಿ ಸರ್ಕಾರ ವಿಧೇಯಕ ರೂಪಿಸಿ, ಅದಕ್ಕೆ ಸಂಸತ್ತಿನ ಒಪ್ಪಿಗೆಯನ್ನು ಪಡೆದಿದೆ.
2023ರ ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರೆ ಆಯುಕ್ತರ (ನೇಮಕ, ಸೇವಾ ನಿಯಮಗಳು ಹಾಗೂ ಅಧಿಕಾರವಧಿ) ವಿಧೇಯಕವನ್ನು ಲೋಕಸಭೆ ಇಂದು ಅಂಗೀಕರಿಸಿತು. ಇದೇ 12ರಂದು ರಾಜ್ಯಸಭೆಯು ಪ್ರತಿಪಕ್ಷಗಳ ಸದಸ್ಯರ ವಿರೋಧ ಮತ್ತು ಸಭಾತ್ಯಾಗದ ನಂತರ ಈ ವಿಧೇಯಕಕ್ಕೆ ಒಪ್ಪಿಗೆ ನೀಡಿತ್ತು.
ಮುಖ್ಯ ಚುನಾವಣಾ ಆಯುಕ್ತ ಮತ್ತು ಇಬ್ಬರು ಚುನಾವಣಾ ಆಯುಕ್ತರ ನೇಮಕ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕೆಂದು ಸುಪ್ರೀಮ್ ಕೋರ್ಟ್ ಇರಾದೆಯಾಗಿತ್ತು. ಈ ಸಂಬಂಧದಲ್ಲಿ ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ನೀಡಿದ್ದ ತೀರ್ಪನ್ನು ಐತಿಹಾಸಿಕ ಎಂದು ಬಣ್ಣಿಸಲಾಗಿತ್ತು.
ಐವರು ಸದಸ್ಯರ ಈ ನ್ಯಾಯಪೀಠ ನೇಮಕಾತಿಯ ಜೊತೆಗೆ ಆಯೋಗದ ಬೆನ್ನುಮೂಳೆಯ ಕುರಿತು ಕೆಲ ಮೂಲಭೂತ ಪ್ರಶ್ನೆಗಳನ್ನು ಎತ್ತಿತ್ತು.
ಕೇಂದ್ರೀಯ ಚುನಾವಣಾ ಆಯೋಗ ಆಳುವವರ ಜೀತಕ್ಕೆ ಬೀಳುತ್ತ ಬಂದಿರುವುದು ಲಾಗಾಯ್ತಿನ ವಿದ್ಯಮಾನ. ಸರ್ಕಾರಗಳ ಮುಲಾಜಿಗೆ ಸಿಗದೆ ಅಕ್ರಮಗಳಿಗೆ ಸಿಂಹಸ್ವಪ್ನರಾಗಿ ಕೆಲಸ ಮಾಡಿದ ಮುಖ್ಯ ಚುನಾವಣಾ ಆಯುಕ್ತರನ್ನು ಹುಡುಕಿದರೆ ಅಲ್ಲಲ್ಲಿ ಒಬ್ಬ ಟಿ.ಎನ್.ಶೇಷನ್ ಮತ್ತೊಬ್ಬ ಜೆ.ಎಂ.ಲಿಂಗ್ಡೋ ಕಂಡಾರು. ಸದ್ದು ಮಾಡದೆ ತಟಸ್ಥರಾಗಿ ಕೆಲಸ ಮಾಡಿದವರೂ ಉಂಟು. ಆದರೆ ಆಳುವವರ ಮರ್ಜಿಯನ್ನು ಅನುಸರಿಸಿದವರೇ ಹೆಚ್ಚು.
ಸಂವಿಧಾನದ 324 (2) ಕಲಮಿನ ಪ್ರಕಾರ ಈ ಹುದ್ದೆಗಳಿಗೆ ನೇಮಕ ಮಾಡುವ ಅಧಿಕಾರ ರಾಷ್ಟ್ರಪತಿಯವರದು. ಅರ್ಥಾತ್ ಪ್ರಧಾನಮಂತ್ರಿಯವರಿಗೆ ಸೇರಿದ್ದು. ನೇಮಕದ ಕುರಿತು ಸಂಸತ್ತು ಯಾವುದಾದರೂ ಕಾನೂನನ್ನು ರೂಪಿಸಿದರೆ, ಅಂತಹ ಕಾಯಿದೆ ಪ್ರಕಾರ ಈ ನೇಮಕಾತಿ ನಡೆಯತಕ್ಕದ್ದು. ಆದರೆ ಈ ಹಿಂದೆ ಆಡಳಿತ ನಡೆಸಿದ್ದ ಕಾಂಗ್ರೆಸ್ ಮತ್ತಿತರೆ ಸರ್ಕಾರಗಳು ಕಾನೂನನ್ನು ರೂಪಿಸುವ ಗೋಜಿಗೆ ಹೋಗಲಿಲ್ಲ. ನೇಮಕದ ನೇರ ಅಧಿಕಾರವನ್ನು ಬಿಟ್ಟುಕೊಡುವ ಮನಸ್ಸು ಮಾಡಲಿಲ್ಲ. ಆನಂತರ ಅಧಿಕಾರ ಹಿಡಿದ ಮೋದಿ ಸರ್ಕಾರಕ್ಕೂ ಹಳೆಯ ಸರ್ಕಾರಗಳು ಹಿಡಿದಿದ್ದ ದಾರಿಯೇ ಅನುಕೂಲವಾಗಿತ್ತು.
ಸಂವಿಧಾನ ಸೂಚಿಸಿದ್ದ ಕಾನೂನನ್ನು ರೂಪಿಸಲು ರಾಜಕೀಯ ಪಕ್ಷಗಳು ಆಸಕ್ತಿ ತೋರಲಿಲ್ಲ. ಸುಪ್ರೀಮ್ ಕೋರ್ಟ್ ತೀರ್ಪಿನ ಪ್ರಕಾರ ಕಾರಣಗಳು ನಿಚ್ಚಳ– ಅಧಿಕಾರದ ಬೆನ್ನಟ್ಟುವ ರಾಜಕೀಯ ಪಕ್ಷಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಚುನಾವಣಾ ಆಯೋಗವನ್ನು ಇಷ್ಟಪಡುವುದಿಲ್ಲ. ಈಗಾಗಲೇ ಅಧಿಕಾರವನ್ನು ಹಿಡಿದಿರುವ ಪಕ್ಷಕ್ಕೆ, ಆ ಅಧಿಕಾರವನ್ನು ಉಳಿಸಿಕೊಂಡು ಮುಂದುವರೆಯುವುದೇ ಪರಮಧ್ಯೇಯವಾಗಿರುತ್ತದೆ. ತನ್ನ ತಾಳಕ್ಕೆ ತಕ್ಕಂತೆ ಕುಣಿಯುವ ಚುನಾವಣಾ ಆಯೋಗವು ಅಧಿಕಾರ ಹಿಡಿಯಲು ಮತ್ತು ಅಧಿಕಾರದಲ್ಲಿ ಮುಂದುವರೆಯಲು ನಿಶ್ಚಿತ ದಾರಿ.
ಈಗಾಗಲೆ ಹೇಳಿರುವಂತೆ ಈ ಹುದ್ದೆಗಳಿಗೆ ಸೂಕ್ತ ವ್ಯಕ್ತಿಗಳನ್ನು ನೇಮಕ ಮಾಡುವ ಅಧಿಕಾರ ರಾಷ್ಟ್ರಪತಿಯವರದು. ರಾಷ್ಟ್ರಪತಿಯವರು ಪ್ರಧಾನಮಂತ್ರಿಯ ಶಿಫಾರಸನ್ನು ಅಂಗೀಕರಿಸುತ್ತಾರೆ. ಈ ರೂಢಿಯ ಬದಲಿಗೆ ಪ್ರಧಾನಮಂತ್ರಿ, ಲೋಕಸಭೆಯ ಪ್ರತಿಪಕ್ಷದ ನಾಯಕ ಹಾಗೂ ಸುಪ್ರೀಮ್ ಕೋರ್ಟಿನ ಮುಖ್ಯನ್ಯಾಯಮೂರ್ತಿಯವರನ್ನು ಒಳಗೊಂಡ ಸಮಿತಿಯನ್ನು ಸುಪ್ರೀಮ್ ಕೋರ್ಟು ಸೂಚಿಸಿತ್ತು.
ಈ ತೀರ್ಪನ್ನು ಬದಿಗೆ ತಳ್ಳಲು ಮೋದಿ ಸರ್ಕಾರ ವಿಧೇಯಕ ರೂಪಿಸಿ, ಅದಕ್ಕೆ ಸಂಸತ್ತಿನ ಒಪ್ಪಿಗೆಯನ್ನು ಪಡೆದಿದೆ. ಈ ವಿಧೇಯಕವು ನೇಮಕ ಪ್ರಕ್ರಿಯೆಯಿಂದ ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರನ್ನು ಹೊರಗಿಟ್ಟಿದೆ. ಅವರ ಜಾಗದಲ್ಲಿ ಕೇಂದ್ರ ಸರ್ಕಾರದ ಸಂಪುಟ ದರ್ಜೆಯ ಸಚಿವರೊಬ್ಬರು ಇರುತ್ತಾರೆ. ಈ ಸಚಿವರು ಯಾರೆಂಬುದನ್ನು ಪ್ರಧಾನಮಂತ್ರಿ ತೀರ್ಮಾನಿಸುತ್ತಾರೆ. ಹೀಗೆ ಮೂವರು ಸದಸ್ಯರ ಸಮಿತಿಯಲ್ಲಿ ಇಬ್ಬರ ತೀರ್ಮಾನ ಬಹುಮತದ ಮತ್ತು ಅಂತಿಮ ತೀರ್ಮಾನ. ಒಂದು ವೇಳೆ ಪ್ರತಿಪಕ್ಷದ ನಾಯಕ ಒಪ್ಪಿಗೆ ನೀಡದೆ ಹೋದರೂ ಆಳುವ ಸರ್ಕಾರ ಆರಿಸಿದವರೇ ಮುಖ್ಯ ಆಯುಕ್ತ ಮತ್ತು ಆಯುಕ್ತರಾಗಿ ನೇಮಕಗೊಳ್ಳುತ್ತಾರೆ.
ಅಷ್ಟೇ ಅಲ್ಲ, ಈ ವಿಧೇಯಕದಲ್ಲಿ ಮತ್ತೊಂದು ಹೊಸ ಅಂಶವನ್ನು ಸೇರಿಸಲಾಗಿದೆ. ಸೇವೆಯಲ್ಲಿರುವ ಮತ್ತು ನಿವೃತ್ತರಾಗಿರುವ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರಿಗೆ ಯಾವುದೇ ಸಿವಿಲ್ ಅಥವಾ ಕ್ರಿಮಿನಲ್ ವಿಚಾರಣೆಗಳಿಂದ ರಕ್ಷಣೆ ಒದಗಿಸಲಾಗಿದೆ. ತಮ್ಮ ಅಧಿಕೃತ ಕಾರ್ಯನಿರ್ವಹಣೆಯಲ್ಲಿ ಇವರು ಆಡುವ ಯಾವುದೇ ಮಾತು ಅಥವಾ ಕೈಗೊಳ್ಳುವ ಕ್ರಮಗಳ ವಿರುದ್ಧ ಯಾವುದೇ ಸಿವಿಲ್ ಅಥವಾ ಕ್ರಿಮಿನಲ್ ಕೇಸುಗಳನ್ನು ಯಾವ ನ್ಯಾಯಾಲಯವೂ ದಾಖಲಿಸುವಂತಿಲ್ಲ ಎಂದು ವಿಧಿಸಲಾಗಿದೆ.
ಪ್ರಧಾನಿ ನಿಯುಕ್ತ ಮುಖ್ಯ ಆಯುಕ್ತರು– ಆಯುಕ್ತರಿಗೆ ತಮ್ಮ ಅಧಿಕಾರವಧಿಯ ಯಾವುದೇ ತಪ್ಪುತಡೆಗಳಿಗೂ ನೀಡಿರುವ ರಕ್ಷಣೆಯಿದು. ನ್ಯಾಯಾಲಯಗಳಿಗೆ ಅಳುಕಬೇಕಿಲ್ಲ. ಆಳುವ ಸರ್ಕಾರಕ್ಕೆ ವಿಧೇಯತೆ, ನಿಷ್ಠೆ, ಕೃತಜ್ಞತೆಯನ್ನು ತಾಕೀತು ಮಾಡಿದರೆ ಸಾಕು.
ಆಯೋಗದ ಇಬ್ಬರು ಆಯುಕ್ತರ ಪೈಕಿ ಅನೂಪ್ ಚಂದ್ರ ಪಾಂಡೆ ಮುಂಬರುವ ಲೋಕಸಭಾ ಚುನಾವಣೆಗಳಿಗೆ ಮುನ್ನ (ಫೆಬ್ರವರಿ) ನಿವೃತ್ತರಾಗಲಿದ್ದಾರೆ. ಅವರಿಂದ ತೆರವಾಗುವ ಜಾಗಕ್ಕೆ ಹೊಸ ವ್ಯವಸ್ಥೆಯಡಿ ಮೊತ್ತಮೊದಲ ನೇಮಕ ನಡೆಯಲಿದೆ.
ಚುನಾವಣಾ ಆಯೋಗ ಆಳುವವರ ಪಂಜರದ ಗಿಳಿಯಾಗಿಯೇ ಮುಂದುವರೆಯಲಿದೆ. ಈ ಬೆಳವಣಿಗೆ “ಜನತಂತ್ರದ ಜನನಿ” ಭಾರತ ಹೆಮ್ಮೆಪಡುವ ಸಂಗತಿಯೇನೂ ಅಲ್ಲ.
