ಉಡುಪಿ ಜಿಲ್ಲೆಯ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಬೋಟೊಂದು ಡಿಸೆಂಬರ್ 19ರ ಬೆಳಿಗ್ಗೆ ಆಳ ಸಮುದ್ರದಲ್ಲಿ ಮುಳುಗಡೆಗೊಂಡಿದ್ದು, ಇದರಲ್ಲಿದ್ದ ಒಟ್ಟು ಎಂಟು ಮಂದಿ ಮೀನುಗಾರರು ರಕ್ಷಿಸಲ್ಪಟ್ಟಿದ್ದಾರೆ.
ಕಡೆಕಾರು ರಕ್ಷಾ ಎಂಬುವವರಿಗೆ ಸೇರಿದ ‘ಶ್ರೀ ನಾರಾಯಣ’ ಬೋಟು ಡಿಸೆಂಬರ್ 12ರ ರಾತ್ರಿ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದು, ಡಿಸೆಂಬರ್ 19ರ ಬೆಳಿಗ್ಗೆ 6:30ರ ಸುಮಾರಿಗೆ ಬಂದರಿನಿಂದ 26 ಮಾರು ಆಳ ದೂರದಲ್ಲಿ ಮೀನುಗಾರಿಕೆ ನಡೆಸುವಾಗ ನೀರಿನಡಿಯಲ್ಲಿದ್ದ ವಸ್ತುವೊಂದು ಬೋಟಿಗೆ ಬಡಿದಿತ್ತು ಎನ್ನಲಾಗಿದೆ.
ಬೋಟಿಗೆ ಹಾನಿಯಾದ ಕಾರಣ ನೀರು ಬೋಟಿನ ಒಳಗೆ ನುಗ್ಗಲು ಆರಂಭಿಸಿತು. ವಯರ್ಲೆಸ್ ಮೂಲಕ ಇತರ ಬೋಟಿನವರಿಗೆ ಸಂದೇಶ ರವಾನಿಸಿದರು. ಈ ವೇಳೆ ಸಮೀಪದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಶ್ರೀಮೂಕಾಂಬಿಕ ಅನುಗ್ರಹ ಬೋಟಿನವನರು ಧಾವಿಸಿದ್ದು, ಬೋಟನ್ನು ಮೇಲೆತ್ತಲು ಪ್ರಯತ್ನಿಸಿದರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಎನ್ಎಚ್66ರ ರಸ್ತೆ ಕಾಮಗಾರಿ ಮಾರ್ಚ್ ವೇಳೆಗೆ ಪೂರ್ಣ: ಮೇಯರ್ ಸುಧೀರ್ ಶೆಟ್ಟಿ
ನೀರಿನ ಅಬ್ಬರ ಹೆಚ್ಚಾದ ಪರಿಣಾಮ ನೀರು ಬೋಟಿನ ಒಳಗೆ ಬರುವುದನ್ನು ತಡೆಯಲು ಸಾಧ್ಯವಾಗಿಲ್ಲ. ಸುಮಾರು 8 ಗಂಟೆ ವೇಳೆಗೆ ಬೋಟು ಪೂರ್ಣ ಮುಳುಗಡೆಗೊಂಡಿತು. ಮೀನುಗಾರರನ್ನು ಮೂಕಾಂಬಿಕ ಬೋಟಿನವರು ರಕ್ಷಣೆ ಮಾಡಿ ಮಲ್ಪೆ ಬಂದರಿನ ದಡಕ್ಕೆ ಕರೆ ತಂದಿದ್ದಾರೆ. ಬೋಟು ಮುಳುಗಡೆಯಿಂದ ಸುಮಾರು ₹18 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಿದ್ದಾರೆ.