ಗಡಿ ಭಾಗದಲ್ಲಿ ಚನ್ನಬಸವ ಪಟ್ಟದ್ದೇವರು ಕೈಗೊಂಡಿರುವ ಸಮಾಜಮುಖಿ ಕಾರ್ಯಗಳು ಅಚ್ಚಳಿಯದಂತೆ ಉಳಿದಿವೆಗಡಿ. ಅವರು ಕೇವಲ ಮಾತನಾಡಲಿಲ್ಲ, ಉಪದೇಶ ಹೇಳಲಿಲ್ಲ. ಬದಲಾಗಿ ಜೀವನದುದ್ದಕ್ಕೂ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಆಧ್ಯಾತ್ಮಿಕ ಕ್ಷೇತ್ರಗಳ ಕಾರ್ಯ ಮೂಲಕ ಅದ್ಭುತ ಕ್ರಾಂತಿಗೈದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮ ಪರಿಸರದ ಹರ್ಡೇಕರ ಮಂಜಪ್ಪನವರ ವೇದಿಕೆಯಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಡಾ.ಚನ್ನಬಸವ ಪಟ್ಟದ್ದೇವರ 134ನೇ ಜಯಂತ್ಯುತ್ಸವ ಮತ್ತು ಮೂರ್ತಿ ಅನಾವರಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
“ಮಠ, ಮಾನ್ಯಗಳಿಂದ ಸ್ವಾಮೀಜಿ ಆದವರಿಗೆ ಗೌರವ ಸಿಗುವುದು ಸಾಮಾನ್ಯ. ಆದರೆ, ಪಟ್ಟದ್ದೇವರು ಸತ್ಯಶುದ್ಧ ಕಾಯಕದ ಮೂಲಕ ಶ್ರೀಮಠದ ಕೀರ್ತಿಯನ್ನು ಉತ್ತುಂಗೇರಿಸಿದವರು. ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ವಚನವನ್ನು ಪಟ್ಟದ್ದೇವರು ತಮ್ಮ ಜೀವನದಲ್ಲಿ ಅಕ್ಷರಶಃ ಪಾಲಿಸಿಕೊಂಡು ಬಂದಿದ್ದರು. ಬಸವಾದಿ ಶರಣರಂತೆ ಪಟ್ಟದ್ದೇವರು ಕೂಡ ಕಾಯಕಕ್ಕೆ ಹೆಚ್ಚು ಆದ್ಯತೆ ಪ್ರಾತಿನಿಧ್ಯ ನೀಡಿದ್ದರು. ಅವರು ಬಸವತತ್ವವನ್ನು ಕೇವಲ ಬೋಧನೆ ಮಾಡಲಿಲ್ಲ, ಅದರಂತೆ ನಡೆದುಕೊಂಡಿದ್ದರು. ಬಸವತತ್ವ ಪ್ರಚಾರ- ಪ್ರಸಾರದ ಜತೆಗೆ ಬಡವರು, ನಿರ್ಗತಿಕರ ಏಳಿಗೆ, ಅಸ್ಪೃಶ್ಯತೆ ನಿವಾರಣೆ, ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ನೀಡಿ ಜಾತಿರಹಿತ ಸಮಾಜ ಕಟ್ಟುವ ಪ್ರಯತ್ನ ಮಾಡಿದ್ದರು” ಎಂದು ಸ್ಮರಿಸಿದರು.
ನಿವೃತ್ತ ಐಪಿಎಸ್ ಅಧಿಕಾರಿ ಡಿ.ವಿ.ಗುರುಪ್ರಸಾದ ಮಾತನಾಡಿ, “ಬೀದರ್ ಜಿಲ್ಲೆಯಲ್ಲಿ ಕನ್ನಡ ಮತ್ತು ವಚನ ಪ್ರಸಾರ ಸೇರಿದಂತೆ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಭಾಲ್ಕಿಯ ಚನ್ನಬಸವ ಪಟ್ಟದ್ದೇವರ ಕೊಡುಗೆ ಅಪಾರವಾಗಿದೆ. ಬಸವಾದಿ ಶರಣರ ವಚನಗಳು ಬದುಕಿನಲ್ಲಿ ಅಳವಡಿಕೊಂಡರೆ ಬದುಕು ಸಾರ್ಥಕವಾಗುತ್ತದೆ” ಎಂದು ಹೇಳಿದರು.
ಸಚಿವ ರಹೀಂ ಖಾನ್ ಮಾತನಾಡಿ, “ಭಾಲ್ಕಿ ಹಾಗೂ ಬಸವಕಲ್ಯಾಣ ಬಸವಣ್ಣನವರ ಕ್ರಾಂತಿ ನಿಲವಾಗಿದೆ. ಈ ಭಾಗದಲ್ಲಿ ಚನ್ನಬಸವ ಪಟ್ಟದ್ದೇವರು ಮಾಡಿರುವ ವಚನ ಸಾಹಿತ್ಯ ಪ್ರಸಾರ ಹಾಗೂ ಶೈಕ್ಷಣಿಕ ಕ್ರಾಂತಿ ಅನನ್ಯವಾಗಿದೆ” ಎಂದರು.
ಅಧ್ಯಕ್ಷತೆ ವಹಿಸಿದ ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, “12ನೇ ಶತಮಾನದ ಶರಣರ ಕ್ರಾಂತಿಯನ್ನು 12ನೇ ಶತಮಾನದಲ್ಲಿಗೈದು ಸಮ ಸಮಾಜ ನಿರ್ಮಿಸಲು, ಸರ್ವ ಕ್ಷೇತ್ರಗಳ ಉದ್ಧಾರಕ್ಕೆ ಶ್ರಮಿಸಿದವರು ಚನ್ನಬಸವ ಪಟ್ಟದ್ದೇವರು. ವಿಶೇಷವಾಗಿ ಮಹಿಳೆಯರನ್ನು
ಶೈಕ್ಷಣಿಕ, ಸಾಮಾಜಿಕವಾಗಿ ಮೇಲೆತ್ತಲು ಅಪಾರವಾಗಿ ದುಡಿದಿದ್ದಾರೆ. ಎಲ್ಲರೂ ಅವರ ತತ್ವಗಳನ್ನು ಪಾಲಿಸಿ ಉತ್ತಮ ಬದುಕು ನಡೆಸಬೇಕು” ಎಂದರು

ನೇತೃತ್ವ ವಹಿಸಿದ ಗುರುಬಸವ ಪಟ್ಟದ್ದೇವರು ಮಾತನಾಡಿ, “ವಿಶ್ವಗುರು ಬಸವಣ್ಣನವರನ್ನು ಧರ್ಮಗುರು ಎಂದು ಒಪ್ಪಿಕೊಂಡುವರಲ್ಲಿ ಪಟ್ಟದ್ದೇವರು ಮೊದಲಿಗರು. ಮಠದ ಸಂಪ್ರದಾಯವನ್ನು ಮುರಿದು ಪಲ್ಲಕ್ಕಿಯಲ್ಲಿ ವಚನ ಸಾಹಿತ್ಯದ ಮೆರವಣಿಗೆ ನಡೆಸಿ ಬಸವತತ್ವದ ಮಹತ್ವ ಸಾರಿದ ಮಹಾನ ಚೇತನ. ಪಟ್ಟದ್ದೇವರು ಬಸವತತ್ವ-ಕನ್ನಡ ಎರಡು ಕಣ್ಣಾಗಿಸಿಕೊಂಡು ಈ ಭಾಗಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ” ಎಂದರು.
ಕಾಯಕ ಪ್ರಶಸ್ತಿ ಪುರಸ್ಕೃತ ಶಿವಶರಣಪ್ಪ ಹುಗ್ಗೆ ಪಾಟೀಲ, ಸಾನ್ನಿಧ್ಯ ವಹಿಸಿದ ನಿಡಸೋಸಿ ಮಠದ ಜಗದ್ಗುರು ಪಂಚಮಲಿಂಗೇಶ್ವರ ಸ್ವಾಮೀಜಿ ಮಾತನಾಡಿದರು. ಬಸವಕಲ್ಯಾಣ ಅನುಭವ ಮಂಟಪ ಸಂಚಾಲಕ ವಿ.ಸಿದ್ಧರಾಮಣ್ಣ ಶರಣರು ದಿವ್ಯ ಸಮ್ಮುಖ ವಹಿಸಿದರು.
ಈ ಸುದ್ದಿ ಓದಿದ್ದೀರಾ? ಕಲ್ಪಿಸಿಕೊಂಡು, ಊಹಿಸಿಕೊಂಡು ಸುದ್ದಿ ಮಾಡುವವರು ಹೆಚ್ಚಾಗಿರುವುದು ಕೆಟ್ಟ ಬೆಳವಣಿಗೆ: ಸಿದ್ದರಾಮಯ್ಯ ಬೇಸರ
ಇದೇ ಸಂದರ್ಭದಲ್ಲಿ ಉಪನ್ಯಾಸಕ ಶಿವಶರಣಪ್ಪ ಹುಗ್ಗೆ ಪಾಟೀಲ್ ಅವರಿಗೆ ಡಾ.ಚನ್ನಬಸವ
ಪಟ್ಟದ್ದೇವರ ಕಾಯಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಗುರುನಾಥ ಕೊಳ್ಳುರ ಬಸವ ಗುರುವಿನ ಪೂಜೆ ನೆರವೇರಿಸಿದರು. ನಾರಂಜಾ ಸಕ್ಕರೆ ಕಾರಖಾನೆ ಅಧ್ಯಕ್ಷ ಡಿ.ಕೆ.ಸಿದ್ರಾಮ, ಭಾರತೀಯ ಬಸವಬಳಗದ ರಾಜ್ಯಾಧ್ಯಕ್ಷ ಬಾಬು ವಾಲಿ, ರಾಷ್ಟ್ರೀಯ ಬಸವದಳದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಯುವ ಮುಖಂಡ ಚನ್ನಬಸವಣ್ಣ ಬಳತೆ, ಪ್ರಸನ್ನಕುಮಾರ ಚೌಕಿಮಠ, ಶಕುಂತಲಾ ಬೆಲ್ದಾಳೆ, ನೀಲಮ್ಮ ವಿಕೆ ಪಾಟೀಲ್, ಬೀದರ್ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಆರ್ ಪಾಟೀಲ್, ಡಾ.ಸಂತೋಷಕುಮಾರ ಓಂಕಾರ ಬಲ್ಲೂರೆ, ಪುಣೆಯ ಸುಧಾ ಸಚಿನ ಕುಂಬಾರ ಸೇರಿದಂತೆ ಪೂಜ್ಯರು, ಗಣ್ಯರು, ಬಸವ ಭಕ್ತರು ಉಪಸ್ಥಿತರಿದ್ದರು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಸ್ವಾಗತಿಸಿದರು. ಆಕಾಶವಾಣಿ ಕಲಾವಿದ ನವಲಿಂಗ ಪಾಟೀಲ್ ನಿರೂಪಿಸಿದರು. ಮಲ್ಲಮ್ಮ ನಾಗನಕೇರೆ ವಂದಿಸಿದರು.