- ಕಾಂಗ್ರೆಸ್ ಸದಸ್ಯತ್ವ ಪಡೆದ ಮಾಜಿ ಶಾಸಕ ಗೌರಿಶಂಕರ್
- ʼಹಿರಿಯರ ಸಹಕಾರ ಪಡೆದು ಪಕ್ಷವನ್ನು ಬಲಪಡಿಸಲಾಗುವುದುʼ
ತುಮಕೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕೊರತೆಯಿಲ್ಲ. ಅವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಪಕ್ಷವನ್ನು ಕಟ್ಟಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳು ಕಾಂಗ್ರೆಸ್ ಪಕ್ಷ ಅಭ್ಯರ್ಥಿಗೆ ಬರುವಂತೆ ಮಾಡುವುದು ನಮ್ಮ ಮುಂದಿರುವ ಗುರಿ ಎಂದು ಮಾಜಿ ಶಾಸಕ ಡಿ ಸಿ ಗೌರಿಶಂಕರ್ ಅಭಿಪ್ರಾಯಪಟ್ಟರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಿ ಸಿ ಗೌರಿಶಂಕರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಮೊದಲ ಬಾರಿಗೆ ತಮ್ಮ ಅಪಾರ ಬೆಂಬಲಿಗರೊಂದಿಗೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದು ಮಾತನಾಡಿದರು.
“ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಗುರಿಯನ್ನು ತಲುಪಲು ಪಕ್ಷದ ಹಿರಿಯ ಮುಖಂಡರುಗಳಾದ ಡಾ. ಜಿ ಪರಮೇಶ್ವರ್, ಕೆ ಎನ್ ರಾಜಣ್ಣ ಹಾಗೂ ಇತರೆ ನಾಯಕರ ಸಲಹೆ ಪಡೆದು ಪಕ್ಷವನ್ನು ಬಲಪಡಿಸಲಾಗುವುದು” ಎಂದರು.
“ನನ್ನೊಂದಿಗೆ ಜೆಡಿಎಸ್ ಪಕ್ಷದ ಶೇ.80ರಷ್ಟು ಕಾರ್ಯಕರ್ತರು, ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ನಾವು ಹತ್ತಾರು ವರ್ಷಗಳಿಂದ ಯಾರ ವಿರುದ್ದ ಹೋರಾಟ ನಡೆಸುತ್ತಿದ್ದವೋ, ಅವರೊಂದಿಗೆ ಏಕಾಏಕಿ ರಾಜಕೀಯ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಕಂಗಾಲಾಗಿದ್ದರು. ಅವರಿಗೆ ರಾಜಕೀಯ ನೆಲೆ ಕಲ್ಪಿಸುವುದರ ಜತೆಗೆ, ನನ್ನ ರಾಜಕೀಯ ಅಸ್ಥಿತ್ವವನ್ನು ಅವಲೋಕಸಿ ಕಾರ್ಯಕರ್ತರ ಸಲಹೆಯಂತೆ ಕಾಂಗ್ರೆಸ್ ಸೇರಿದ್ದೇನೆ. ಪಕ್ಷವನ್ನು ಸದೃಢಗೊಳಿಸಿ, ಲೋಕಸಭೆ ಹಾಗೂ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿಯೂ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು, ಪಕ್ಷಕ್ಕೆ ಭದ್ರ ಬುನಾದಿ ಹಾಕಲಾಗುವುದು” ಎಂದು ಗೌರಿಶಂಕರ್ ನುಡಿದರು.
ಕಾಂಗ್ರೆಸ್ ಮುಖಂಡ ಕಲ್ಲಹಳ್ಳಿ ದೇವರಾಜು ಮಾತನಾಡಿ, “ಗೌರಿಶಂಕರ್ ಆಗಮನದಿಂದ ಗ್ರಾಮಾಂತರದಲ್ಲಿ ಪಕ್ಷಕ್ಕೆ ಬಲ ಬಂದಿದೆ. ಬೇರೆ ಪಕ್ಷದ ನಾಯಕರು ನಮ್ಮ ಪಕ್ಷಕ್ಕೆ ಬಂದಾಗ ಸಣ್ಣ-ಪುಟ್ಟ ಗೊಂದಲಗಳು ಸಹಜ. ಅವೆಲ್ಲವನ್ನೂ ಮರೆತು ಮುಂದಿನ ದಿನಗಳಲ್ಲಿ ಮತ್ತಷ್ಟು ಬಲಿಷ್ಠವಾಗಿ ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೌರಿಶಂಕರ್ ನೇತೃತ್ವದಲ್ಲಿ ಬಲಪಡಿಸುತ್ತೇವೆ. ಕ್ಷೇತ್ರದ ಕಾರ್ಯಕರ್ತರ ಸಹಕಾರ ಇರಲಿ” ಎಂದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಡಿಸೆಂಬರ್ 29 ರಿಂದ 15ನೇ ಕನ್ನಡ ಸಾಹಿತ್ಯ ಸಮ್ಮೇಳನ
ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮೊದಲ ಬಾರಿಗೆ ಆಗಮಿಸಿದ ಮಾಜಿ ಶಾಸಕ ಡಿ ಸಿ ಗೌರಿಶಂಕರ್ ಅವರನ್ನು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್ ರಾಮಕೃಷ್ಣ, ಕಾಂಗ್ರೆಸ್ ಮುಖಂಡ ಕಲ್ಲಹಳ್ಳಿ ದೇವರಾಜು, ಗ್ರಾಮಾಂತರದ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರುಗಳಾದ ನರಸಿಂಹಮೂರ್ತಿ, ಕೈದಾಳ ರಮೇಶ್ ಅವರುಗಳು ಬರಮಾಡಿಕೊಂಡು, ಪ್ರಾಥಮಿಕ ಸದಸ್ಯತ್ವದ ಅರ್ಜಿ ತುಂಬಿ, ಶುಲ್ಕು ಪಡೆದು, ಪ್ರಾಥಮಿಕ ಸದಸ್ಯತ್ವ ನೀಡಿದರು.
ಸಭೆಯಲ್ಲಿ ಮಾಜಿ ಕಾಂಗ್ರೆಸ್ ಅಧ್ಯಕ್ಷ ಆರ್ ರಾಮಕೃಷ್ಣ, ಪಾಲಿಕೆ ಸದಸ್ಯರುಗಳಾದ ನಯಾಜ್ ಅಹಮದ್, ಕೆ ಕುಮಾರ್, ಇನಾಯತ್, ಪಾಲನೇತ್ರಯ್ಯ, ವಿಜಯಕುಮಾರ್, ಸುಜಾತ, ನ್ಯಾತೇಗೌಡ ಸೇರಿದಂತೆ ಇತರರು ಇದ್ದರು.