ಇವಿಎಂ ಸಮಸ್ಯೆ ಪರಿಹರಿಸದಿದ್ದರೆ 2024ರ ಚುನಾವಣೆಯಲ್ಲಿ ಬಿಜೆಪಿ 400 ಸೀಟುಗಳನ್ನು ಗೆಲ್ಲಬಹುದು ಎಂದು ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಭಾರತೀಯ ಟೆಲಿ ಕಮ್ಯೂನಿಕೇಷನ್ ಕ್ರಾಂತಿಯ ಪ್ರಮುಖ ನಾಯಕರಾದ ಸ್ಯಾಮ್ ಪಿತ್ರೋಡಾ, ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶರಾದ ಮದನ್ ಲೋಕೂರ್ ನೇತೃತ್ವದ ಸರ್ಕಾರೇತರ ಸಂಸ್ಥೆ ಕೂಡ ಸದ್ಯದ ವಿವಿಪ್ಯಾಟ್ ಪದ್ಧತಿಯ ವಿನ್ಯಾಸವನ್ನು ಬದಲಿಸಲು ಶಿಫಾರಸ್ಸು ಮಾಡಿತ್ತು ಎಂದು ಹೇಳಿದರು.
“ಚುನಾವಣಾ ಆಯೋಗದ ಪ್ರತಿಕ್ರಿಯೆಗಾಗಿ ನಾನು ಕಾಯುತ್ತಿದ್ದೆ ಆದರೆ ಏನೂ ಹೇಳದ ಕಾರಣ ನಾನು ಮಾತನಾಡಲು ನಿರ್ಧಿರಿಸಿದೆ. ಐದು ರಾಜ್ಯಗಳ ಚುನಾವಣೆ ಮುಗಿದಿದ್ದು, 2024ರ ಚುನಾವಣೆ ಹತ್ತಿರ ಬರುತ್ತಿದೆ. ಈ ವರದಿಯ ಅಧಾರದ ಮೇಲೆ ನಂಬಿಕೆಯ ಕೊರತೆಯಿದೆ ಎಂದು ನಾನು ಭಾವಿಸುತ್ತೇನೆ. ಚುನಾವಣಾ ಆಯೋಗವು ನಂಬಿಕೆಯನ್ನು ಉಳಿಸಿಕೊಳ್ಳಲು ಇದಕ್ಕೆ ಪ್ರತಿಕ್ರಿಯಿಸಬೇಕು” ಎಂದು ಹೇಳಿದರು.
“ಒಂದು ವೇಳೆ ಇವಿಎಂ ಅನ್ನು ಸರಿಪಡಿಸಲು ಸಾಧ್ಯವಿಲ್ಲದಿದ್ದರೆ, ಬಿಜೆಪಿ 400ರ ಗಡಿಯನ್ನು ಮುಟ್ಟುತ್ತದೆ. ಆಯೋಗವು ಹಾಗೆ ಮಾಡಲು ಬಯಸಿದರೆ ಅವರಿಗೆ ಶುಭವಾಗಲಿ. ದೇಶ ಇದನ್ನು ನಿರ್ಧರಿಸಬೇಕಾಗಿದೆ. ಇವಿಎಂ ಅನ್ನು ಸರಿಪಡಿಸದಿದ್ದರೆ 400 ಸಂಖ್ಯೆ ನಿಜವಾಗಬಹುದು. ಇವಿಎಂ ಸರಿಪಡಿಸಿದರೆ 400 ನಿಜವಾಗುವುದಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ₹40 ಸಾವಿರ ಕೋಟಿ ಲೂಟಿ ಆರೋಪ; ಪ್ರಧಾನಿ ಮೋದಿ ಏನು ಹೇಳುತ್ತಾರೆ?
ಇದೇ ಸಂದರ್ಭದಲ್ಲಿ ರಾಮ ಮಂದಿರದ ಬಗ್ಗೆ ಮಾತನಾಡಿದ ಸ್ಯಾಮ್ ಪಿತ್ರೋಡಾ, “ರಾಮಮಂದಿರದ ಬಗ್ಗೆ ನನ್ನ ಹೇಳಿಕೆಗಳನ್ನು ತಿರುಚಲಾಗಿದೆ. ನಾನು ಮುಖ್ಯವಾಗಿ ಸಂವಿಧಾನವನ್ನು ರಕ್ಷಿಸುತ್ತೇನೆ. ಧರ್ಮವು ಪ್ರತಿಯೊಬ್ಬರ ವೈಯಕ್ತಿಕ ವಿಷಯ, ಇದನ್ನು ಜನರಿಗೆ ಬಿಟ್ಟುಬಿಡಿ. ಖಂಡಿತಾವಾಗಿ ನೀವು ಆಚರಿಸಿ, ಜನರು ಅವರಿಗೆ ಬೇಕಾದಂತೆ ಆಚರಿಸಲಿ. ಆದರೆ ಇದನ್ನು ರಾಜಕೀಯದೊದಿಗೆ ಸಂಕೀರ್ಣಗೊಳಿಸಬೇಡಿ” ಎಂದು ಹೇಳಿದರು.
ಇದಕ್ಕೂ ಮೊದಲು ರಾಮ ಮಂದಿರದ ಬಗ್ಗೆ ಮಾತನಾಡಿದ್ದ ಸ್ಯಾಮ್ ಪಿತ್ರೋಡಾ, “ನನಗೆ ಯಾವುದೇ ಧರ್ಮದ ಸಮಸ್ಯೆ ಇಲ್ಲ. ಒಮ್ಮೆ ದೇವಸ್ಥಾನಕ್ಕೆ ಹೋಗುವುದು ಸರಿ, ಆದರೆ ನೀವು ಅದನ್ನು ಮುಖ್ಯ ವೇದಿಕೆಯನ್ನಾಗಿ ಮಾಡಲು ಸಾಧ್ಯವಿಲ್ಲ. ಶೇ. 40 ರಷ್ಟು ಜನರು ಬಿಜೆಪಿಗೆ ಮತ ಹಾಕಿದರೆ, ಉಳಿದ ಶೇಕಡಾ 60 ರಷ್ಟು ಜನರು ಬಿಜೆಪಿಗೆ ಮತ ಹಾಕಿಲ್ಲ. ಮೋದಿ ಪ್ರತಿಯೊಬ್ಬರ ಪ್ರಧಾನ ಮಂತ್ರಿಯೇ ಹೊರತು ಬಿಜೆಪಿಯ ಪ್ರಧಾನಿಯಲ್ಲ. ಇದು ಭಾರತದ ಜನರು ಬಯಸಿದ ಸಂದೇಶವಾಗಿದೆ. ಉದ್ಯೋಗದ ಬಗ್ಗೆ ಮಾತನಾಡಿ, ಹಣದುಬ್ಬರದ ಬಗ್ಗೆ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಸವಾಲುಗಳ ಬಗ್ಗೆ ಮಾತನಾಡಿ. ಜನರು ನಿಜವಾದ ಸಮಸ್ಯೆಗಳೇನು ಎಂಬುದನ್ನು ನಿರ್ಧರಿಸಬೇಕು. ರಾಮಮಂದಿರ ನಿಜವಾದ ಸಮಸ್ಯೆಯೇ? ಅಥವಾ ನಿರುದ್ಯೋಗ ನಿಜವಾದ ಸಮಸ್ಯೆಯೇ” ಎಂದು ಹೇಳಿದ್ದರು.