ಮುಸ್ಲಿಂ ಮಹಿಳೆಯರನ್ನು ನಿಂದಿಸಿರುವ ಆರೆಸ್ಸೆಸ್ಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸಬೇಕು ಎಂದು ಅಂಜುಮಾನ್ ಇಸ್ಲಾಂ ಕಮೀಟಿ ಮಾಜಿ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ ಅಗ್ರಹಿಸಿದರು.
ಕಲ್ಲಡ್ಕ ಪ್ರಭಾಕರ ಭಟ್ಟನನ್ನ ಬಂಧಿಸಲು ಒತ್ತಾಯಿಸಿ ಅಂಜುಮಾನ್ ಇಸ್ಲಾಂ ಕಮೀಟಿಯಿಂದ ಗಜೇಂದ್ರಗಡ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ʼಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ದೇವತಾಃʼ ಎಲ್ಲಿ ನಾರಿಯನ್ನು ಪೂಜಿಸಲಾಗುವುದೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂದು ನಮ್ಮ ಪರಂಪರೆ ಹೇಳುತ್ತದೆ. ಆದರೆ, ಇಂತಹ ಪರಂಪರೆಗೆ ದಕ್ಕೆ ಉಂಟು ಮಾಡಿದ, ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಅವಮಾನ ಮಾಡಿದ ಕಲ್ಲಡ್ಕ ಪ್ರಭಾಕರ ಭಟ್ಟನನ್ನು ಕೂಡಲೇ ಬಂಧಿಸುವಂತೆ ಅಗ್ರಹಿಸಿದರು.
ಮಹಿಳೆಯರ ಕುರಿತು ಅವಮಾನಕರ ಹೇಳಿಕೆ ನೀಡಿದ ಮುಸ್ಲಿಂ ಸಮುದಾಯದ ಮಹಿಳೆಯರ ಬಗ್ಗೆ ಅವಮಾನಕರ ಹೇಳಿಕೆಯನ್ನು ನೀಡಿದ ಮಹಿಳಾ ವಿರೋಧಿ ಕಲ್ಲಡ್ಕ ಪ್ರಭಾಕರ ಭಟ್ಟನನ್ನ ತಕ್ಷಣವೇ ಸರ್ಕಾರ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕಿತ್ತು ಆದರೆ ಸರ್ಕಾರ ಕಣ್ಮುಚ್ಚಿ ಕುಳಿತುಕೊಂಡಿದೆ.
ಸಿದ್ದರಾಮಯ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿ ಅಲ್ಪಸಂಖ್ಯಾತರ ಹಿತ ಕಾಯವುದಾಗಿ ವಚನ ನೀಡಿದ್ದು ಇದೀಗ ಅಲ್ಪಸಂಖ್ಯಾತರ ಮಹಿಳಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಸೌಹಾರ್ದತೆಗೆ ದಕ್ಕೆ ತರುವ ಹೇಳಿಕೆಯ ವಿರುದ್ಧವಾಗಿ ತುಟಿಪಿಟಕ್ಕ ಎನ್ನುತ್ತಿಲ್ಲ. ಇದು ಅತ್ಯಂತ ಖಂಡನೀಯ. ಕೂಡಲೇ ಸರ್ಕಾರ ಈ ವ್ಯಕ್ತಿಯ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಒದ್ದು ಒಳಗಡೆ ಹಾಕಬೇಕಿತ್ತು. ಆದರೆ, ಇದನ್ನು ಮಾಡದೇ ಆರೋಪಿಯನ್ನು ಬಂಧಿಸುವುದಿಲ್ಲ ಎಂದು ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದ ರೀತಿಯನ್ನು ಬಲವಾಗಿ ಖಂಡಿಸುವೆ ಎಂದರು.
ಪುರಸಭಾ ಸದಸ್ಯ ರಾಜು ಸಾಂಗ್ಲೀಕಾರ ಮಾತನಾಡಿ ಮಹಿಳೆಯರ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡುವ ಇಂತಹ ವ್ಯಕ್ತಿಗಳಿಗೆ ಸರ್ಕಾರ ತಕ್ಕಪಾಠ ಕಲಿಸಬೇಕು. ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಲು ಮುಂದಾಗಬೇಕಿದೆ ಎಂದರು.
ಈ ವೇಳೆ ಅಂಜುಮಾನ್ ಇಸ್ಲಾಂ ಕಮೀಟಿ ಚೇರಮನ್ನ ಹಸನಸಾಬ ತಟಗಾರ, ನಾಸೀರ್ ಸುರಪುರ, ಶಾಮೀದಸಾಬ ದಿಂಡವಾಡ, ದಾದು ಹಣಗಿ, ಮುರ್ತುಜಾ ಡಾಲಾಯತ, ಭಾಷೇಸಾಬ ಮುದಗಲ್ಲ, ಸೇರಿದಂತೆ ಇತರರು ಉಪಸ್ಥಿತರಿದ್ದರು.