“ಬಹುಸಂಖ್ಯಾತರು. ಆದರೆ ಸಂಘಟಿತರಾಗಿಲ್ಲ. ಶೇ. 72ರಷ್ಟು ಇದ್ದೇವೆ. ಆದರೆ ನಮ್ಮಲ್ಲಿ ಒಡನಾಟ ಇಲ್ಲ. ಸಮಸ್ಯೆಗಳನ್ನು ಪರಸ್ಪರ ಚರ್ಚಿಸುತ್ತಿಲ್ಲ. ನಮ್ಮ ದೌರ್ಬಲ್ಯಗಳಿಂದಾಗಿ ನಮ್ಮ ಹಕ್ಕುಗಳನ್ನು ಕೇಳುವಲ್ಲಿ ಸೋತಿದ್ದೇವೆ” ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ಬೆಂಗಳೂರಿನ ವಸಂತನಗರ ಅಂಬೇಡ್ಕರ್ ಭವನದಲ್ಲಿ ಕುವೆಂಪು ಜನ್ಮದಿನಾಚರಣೆ ಹಾಗೂ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ‘ಸಂವಿಧಾನ ರಕ್ಷಣೆಗಾಗಿ ಪ್ರಜಾಪ್ರಭುತ್ವ ಉಳಿವಿಗಾಗಿ ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶ’ದಲ್ಲಿ ಅವರು ಮಾತನಾಡಿದರು.
ದಲಿತರು, ಅಲ್ಪಸಂಖ್ಯಾತರು ಒಂದಾದರೆ ನಮ್ಮನ್ನು ಬಿಟ್ಟು ಶಾಸಕರಾಗಲು, ಚುನಾವಣೆ ನಡೆಸಲು ಸಾಧ್ಯವಿಲ್ಲ. ಆದರೆ ನಮಲ್ಲಿ ಗುಂಪುಗಾರಿಕೆ ಹೆಚ್ಚಾಗಿದೆ. ಒಂದು ವೇದಿಕೆಗೆ ಬರುತ್ತಿಲ್ಲ ಎಂದು ವಿಷಾದಿಸಿದರು.
ಎಲ್ಲರಿಗೂ ಅವರವರ ಹಕ್ಕುಗಳು ದೊರಕಬೇಕೆಂಬ ಗುರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಟ್ಟುಕೊಂಡಿದ್ದಾರೆ. ಕಮಿಟ್ಮೆಂಟ್ ಸಿದ್ದರಾಮಯ್ಯನವರಿಗೆ ಇದೆ. ಅವರ ಕೈ ಬಲಪಡಿಸಲು ನಾವೆಲ್ಲ ಒಂದಾಗಬೇಕು. ಜಾತಿಗಣತಿಯಲ್ಲಿ ಒಂದು ಲಕ್ಷದ ಅರವತ್ತು ಸಾವಿರ ಶಿಕ್ಷಕರು ಭಾಗಿಯಾಗಿದ್ದಾರೆ. ಹೆಚ್ಚಿನ ಶಿಕ್ಷಕರು ಲಿಂಗಾಯತ, ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆ. ಜಾತಿ ಸಮೀಕ್ಷೆ ಅವೈಜ್ಞಾನಿಕ ಎಂದು ಹೇಳುವುದಾದರೆ ಅದಕ್ಕೆ ಈ ಶಿಕ್ಷಕರು ಕಾರಣವಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.
ಅಧ್ಯಾಪಕ, ಲೇಖಕ ರವಿಕುಮಾರ್ ಬಾಗಿ ಅವರು ರಾಷ್ಟ್ರಕವಿ ಕುವೆಂಪು ಅವರ ಚಿಂತನೆಗಳ ಕುರಿತು ಮಾತನಾಡಿದರು. “ಅಂದಿನ ಕಾಲಘಟ್ಟದಲ್ಲಿ ಬರೆಯುತ್ತಿದ್ದ ಸಾಹಿತಿಗಳೆಲ್ಲರೂ ಬ್ರಾಹ್ಮಣರು. ಅವರ ನಡುವೆ ಬೆಳೆದವ ಏಕೈಕ ಶೂದ್ರ ಪ್ರತಿಭೆ ಕುವೆಂಪು. ವೈದಿಕರು ಕುವೆಂಪು ಅವರನ್ನು ಗೇಲಿ ಮಾಡಿದರು. ಸಂಸ್ಕೃತ ಗೊತ್ತಿಲ್ಲ ಎಂದು ಹೀಯಾಳಿಸಿದಾಗ ಸಂಸ್ಕೃತ ಕಲಿತು ಸಾಹಿತ್ಯ ರಚಿಸಿದರು. ವೈದಿಕರು ಚಿತ್ರಿಸಿದ ಪಾತ್ರಗಳ ತಪ್ಪುಗಳನ್ನು ತಿದ್ದಿದರು” ಎಂದು ವಿವರಿಸಿದರು.
“ಕುವೆಂಪು ಅವರು ನಮ್ಮವರೆಂದು ಕ್ಲೈಮ್ ಮಾಡುವವರು ಅವರ ಫೋಟೋವನ್ನಷ್ಟೇ ಆರಾಧಿಸದೆ ವಿಚಾರಗಳನ್ನು ಅನುಸರಿಸಲಿ. ಬಸವಣ್ಣ, ಕುವೆಂಪು, ಬಸವಲಿಂಗಯ್ಯ, ಬಿ.ಕೃಷ್ಣಪ್ಪ ಅವರು ಈ ನಾಡಿನ ಸಾಂಸ್ಕೃತಿಕ ನಾಯಕರು” ಎಂದು ಬಣ್ಣಿಸಿದರು.
ಶೋಷಿತ ಸಮುದಾಯಗಳ ಒಕ್ಕೂಟದ ಕೆ.ಎಂ.ರಾಮಚಂದ್ರಪ್ಪ ಮಾತನಾಡಿ, “ಸಂವಿಧಾನ ರಕ್ಷಣೆಯಲ್ಲಿ ನಾವು ಇದ್ದೇವೆ. ಸರ್ಕಾರ ನಡೆಸುತ್ತಿರುವ ಜನರಿಗೆ ಇದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಸಂವಿಧಾನವನ್ನು ದುರ್ಬಲಗೊಳಿಸಿ, ಸಮುದಾಯಗಳನ್ನು ಹಿಂದೆ ಇದ್ದ ತಾರತಮ್ಯದ ಸ್ಥಿತಿಗೆ ತರಬೇಕೆಂದು ಕೆಲ ಶಕ್ತಿಗಳು ಬಯಸಿವೆ” ಎಂದು ಎಚ್ಚರಿಸಿದರು.
“ಇತ್ತೀಚಿನ ದಿನಗಳಲ್ಲಿ ಮನುಸ್ಮೃತಿಯನ್ನು ಜಾರಿಗೆ ತರುವ ಹುನ್ನಾರ ನಡೆಯುತ್ತಿದೆ. ಮೀಸಲಾತಿ ತೆಗೆದು ಹಾಕಲು ಯತ್ನಿಸುತ್ತಿದ್ದಾರೆ. ಗುತ್ತಿಗೆ ಪದ್ಧತಿಯ ಮೂಲಕ ಮೀಸಲಾತಿಯನ್ನು ದುರ್ಬಲಗೊಳಿಸುತ್ತಿದ್ದಾರೆ. ಜಾತಿ ಗಣತಿ ವರದಿ ವಿರೋಧ ಮಾಡುತ್ತಿರುವವರಿಗೆ ಪಾಠ ಕಲಿಸಬೇಕಿದೆ. ಇವರು ನಮ್ಮ ವೋಟಿನಿಂದ ಗೆದ್ದಿದ್ದಾರೆ” ಎಂದು ಹೇಳಿದರು.
“ಕಾಂತರಾಜ ಆಯೋಗದ ವರದಿ ಅವೈಜ್ಞಾನಿಕ ಅನ್ನುತ್ತಾರೆ. ಅದನ್ನು ತೆಗೆದು ನೋಡುದ್ರೆ ತಾನೇ ಅದು ವೈಜ್ಞಾನಿಕವೋ ಅವೈಜ್ಞಾನಿಕವೋ ಎಂದು ಗೊತ್ತಾಗೋದು? ಮನೆಮನೆಗೆ ಹೋಗಿ ಸಮೀಕ್ಷೆ ಮಾಡಿದ್ದರೂ ಮನೆಯಲ್ಲಿ ಕೂತು ಬರೆಯಲಾಗಿದೆ ಅಂತೀರಲ್ಲ; ಯಾವ ಮನಸ್ಥಿತಿಯಲ್ಲಿ ನೀವು ಇದನ್ನು ಹೇಳುತ್ತಿದ್ದೀರಿ” ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಎಚ್.ಆಂಜನೇಯ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ದಸಂಸ ರಾಜ್ಯ ಸಂಚಾಲಕರಾದ ಮಾವಳ್ಳಿ ಶಂಕರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯರಾದ ಇಂದಿರಾ ಕೃಷ್ಣಪ್ಪ, ರಮೇಶ್ ಡಾಕುಳಗಿ, ಶಿಕ್ಷಣ ತಜ್ಞ ಶ್ರೀಪಾದ ಭಟ್, ಪ್ರಕಾಶಕ ರಾಜಶೇಖರ ಮೂರ್ತಿ, ಮುಖಂಡರಾದ ರಾಜಣ್ಣ ಬಡಿಗೇರ, ನಿರ್ಮಲಾ, ಕಾರಳ್ಳಿ ಶ್ರಿನಿವಾಸ್ ಮೊದಲಾದವರು ಹಾಜರಿದ್ದರು.