ಭಾರತ ಚುನಾವಣಾ ಆಯೋಗವು, ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ ಜನವರಿ 1 ರ ಅರ್ಹತಾ ದಿನಾಂಕದ ಮತದಾರರ ಪಟ್ಟಿ ಪರಿಷ್ಕರಣೆಯ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊಡಿಸಿರುವ ಅವರು, “ಪರಿಷ್ಕೃತ ವೇಳಾಪಟ್ಟಿಯಂತೆ ಆಕ್ಷೇಪಣೆಗಳ ವಿಲೇವಾರಿ ಅವಧಿಯನ್ನು 2024ರ ಜನವರಿ 12ಕ್ಕೆ ವಿಸ್ತರಿಸಲಾಗಿದ್ದು, ದತ್ತಾಂಶಗಳನ್ನು ಕ್ರೋಢೀರಣ, ನವೀಕರಣ ಹಾಗೂ ಮುದ್ರಣ ಕಾರ್ಯದ ಅವಧಿಯನ್ನು ಜನವರಿ 17ಕ್ಕೆ ನಿಗದಿಪಡಿಸಲಾಗಿದೆ. ಮತದಾರರ ಪಟ್ಟಿ ಪ್ರಕಟಣೆ ಅಂತಿಮ ದಿನಾಂಕವನ್ನು ಜನವರಿ 22ಕ್ಕೆ ವಿಸ್ತರಿಸಲಾಗಿದೆ” ಎಂದು ತಿಳಿಸಿದ್ದಾರೆ.
“ಮುಂಬರುವ ಲೋಕಸಭಾ ಚುನಾವಣೆ-2024ರ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು 2024 ಜನವರಿ 01ಕ್ಕೆ 18ವರ್ಷ ಪೂರ್ಣಗೊಂಡ ಎಲ್ಲ ಅರ್ಹ ಮತದಾರರೂ ನಮೂನೆ-6 ಅರ್ಜಿಯನ್ನು ಸಲ್ಲಿಸಬಹುದು. ಹೆಸರು, ವಿಳಾಸ ಮತ್ತು ಭಾವಚಿತ್ರ ತಿದ್ದುಪಡಿಗಾಗಿ ನಮೂನೆ-8 ಅರ್ಜಿಯನ್ನು ಸಲ್ಲಿಸಬಹುದು ಹಾಗೂ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು (ಮರಣ ಹೊಂದಿದ ಮನೆಯ ಸಂಬಂಧಿಕರು) ನಮೂನೆ-7 ಅರ್ಜಿಯನ್ನು ಸಲ್ಲಿಸಬಹುದು. ಆಯೋಗದ ಅಧಿಸೂಚನೆಯಲ್ಲಿ ನಿಗದಿಪಡಿಸಿದಂತೆ 2023 ಡಿಸೆಂಬರ್ 27ರಿಂದ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದವರೆಗೆ ಅರ್ಹ ಮತದಾರರು ನಮೂನೆ-6, 7 ಮತ್ತು 8 ರಲ್ಲಿ ಅರ್ಜಿಯನ್ನು ಸಲ್ಲಿಸಬಹುದು” ಎಂದು ಹೇಳಿದ್ದಾರೆ.
“ಸಾರ್ವಜನಿಕರು ವೋಟರ್ ಹೆಲ್ಪ್ ಲೈನ್ ಅಪ್ಲಿಕೇಶನ್ (VHA App) ಬಳಸಿ, www.nvsp.in ಹಾಗೂ ಮುಖ್ಯ ಚುನಾವಣಾಧಿಕಾರಿಗಳ ವೆಬ್ಸೈಟ್ https://ceo.karnataka.gov.in ಮೂಲಕ ವೋಟರ್ ಐಡಿ ನಮೂದಿಸಿ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವ ಬಗ್ಗೆ ಖಾತರಿ ಪಡಿಸಿಕೊಳ್ಳಬಹುದಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಶಿಕ್ಷಣ ನೀತಿ ಕುರಿತು ರಾಜ್ಯಾದ್ಯಂತ ಸಮೀಕ್ಷೆ; ಎಐಡಿಎಸ್ಒ ವರದಿ
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿ ಕಾರ್ಯಾಲಯದ ಹೆಲ್ಪ್ಲೈನ್ ನಂ. 1950ಗೆ ಕರೆ ಮಾಡಿ ಹೆಚ್ಚಿನ ವಿವರ ಪಡೆಯಬಹುದಾಗಿದೆ. ಒಂದು ವೇಳೆ ತಮ್ಮ ಹೆಸರು ಮತದಾರರ ಪಟ್ಟಿಯಿಂದ ಬಿಟ್ಟು ಹೋಗಿದ್ದಲ್ಲಿ ಅರ್ಜಿ ನಮೂನೆ-6ನ್ನು ಭರ್ತಿಮಾಡಿ ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶವಿರುತ್ತದೆ” ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.