ಕನ್ನಡವೆಂಬುದು ಕೇವಲ ಬೋರ್ಡಿನಲ್ಲಿದ್ದರೆ ಸಾಲದು, ಅದು ಬದುಕಿಗೆ ಬರಬೇಕು.ಆಗ ಮಾತ್ರ ಜನ ತಮ್ಮ ತಾಯಿ ಭಾಷೆಯನ್ನು ಒಪ್ಪಿಕೊಂಡು,ಅಪ್ಪಿಕೊಳ್ಳಲು ಸಾಧ್ಯ ಎಂದು ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.
ತುಮಕೂರಿನಲ್ಲಿ ನಡೆದ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, “1962ರಲ್ಲಿಯೇ ಅಂದಿನ ಸರಕಾರ ಕನ್ನಡ ಭಾಷೆಯಲ್ಲಿ ನಾಮಫಲಕ ಅಳವಡಿಸಲು ಅವಕಾಶ ಕಲ್ಪಿಸಿದೆ.ಆದರೆ ಇದುವರೆಗೂ ನಮ್ಮನ್ನು ಆಳಿದ ಸರಕಾರಗಳು ನಿರ್ಲಕ್ಷ ಮಾಡಿಕೊಂಡು ಬಂದಿವೆ. ಹಾಗಾಗಿ ಇಂದು ನಾವು ಕನ್ನಡ ನಾಮಫಲಕಕ್ಕಾಗಿ ಪ್ರತಿಭಟನೆಗೆ ಇಳಿಯುವಂತಹ ಸ್ಥಿತಿ ಬಂದಿದೆ.ಸರಕಾರದ ನಿರ್ಧಾರ ಸ್ವಾಗಾತಾರ್ಹ.ಹಾಗೆಯೇ ಕನ್ನಡ ಭಾಷೆಯನ್ನು ಅನ್ನಭಾಷೆಯಾಗಿಸಿದರೆ ಮಾತ್ರ ಉಳಿಗಾಲ ಎಂಬುದನ್ನು ನಾವ್ಯಾರು ಮೆರೆಯುವಂತಿಲ್ಲ” ಎಂದರು.
“ಸಾಹಿತಿಯಾದವರು ಸತ್ಯವನ್ನು ಜನರಿಗೆ ಹೇಳುವ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಬೇಕಿದೆ.ಯಾವ ಸರಕಾರವಿದ್ದರೂ ದಿಟ್ಟವಾಗಿ ಸತ್ಯ ಹೇಳಿ, ಮರ್ಯಾದಸ್ತರಾಗಬೇಕು. ನಾವೆಲ್ಲರೂ ಈ ನಿಟ್ಟಿನಲ್ಲಿ ನಡೆಯೋಣ.ಕನ್ನಡ ನಾಡಿನ ಸಾಹಿತಿಗಳು ಸ್ವಾತಂತ್ರ ಪೂರ್ವದಲ್ಲಿಯೂ ಮತ್ತು ಸ್ವಾತಂತ್ರ ನಂತರದಲ್ಲಿಯೂ ಸಾಹಿತ್ಯದ ಸ್ವಾಯತ್ತತೆ, ಸಾಹಿತ್ಯದಲ್ಲಿ ಜಾತ್ಯಾತೀತತೆ ಹಾಗೂ ಪ್ರಜಾಸತ್ತಾತ್ಮಕತೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಇಕ್ಕಟ್ಟು, ಬಿಕ್ಕಟ್ಟುಗಳ ಸಂದರ್ಭದಲ್ಲಿ ಕೆಲವರು ತಮ್ಮ ಸಾಹಿತ್ಯದ ಮೂಲಕ ಮಾತನಾಡಿದರೆ, ಕೆಲವರು ಭಾಷಣದ ಮೂಲಕ ಮಾತನಾಡುತ್ತಿದ್ದಾರೆ. ಆದರೆ ಕೆಲವೊಮ್ಮೆ ಮೌನವೂ ಪ್ರತಿಭಟನೆಯ ಸಂಕೇತವಾಗಿರುತ್ತದೆ. ಕೆಲ ಲೇಖಕರು ಸರಕಾರ ವನ್ನು ನಾವೇ ತಂದಿದ್ದು ಎಂಬಂತೆ ಮಾತನಾಡುತಿದ್ದಾರೆ. ಇದು ಸಲ್ಲದು” ಎಂದರು.
“ಪ್ರಸ್ತುತ ಬೌದ್ಧಿಕ ವಲಯವನ್ನು ವಿಭಜಿಸುವ ಪ್ರಕ್ರಿಯೆ ನಡೆಯುತ್ತಿದ್ದು,ಇದು ಆತಂಕಕಾರಿ ವಿಷಯವಾಗಿದೆ. ಭಿನ್ನಾಭಿಪ್ರಾಯ ಗಳ ನಡುವೆ ಸಂವಾದ ನಡೆದರೆ,ಆಗಿರುವ ತಪ್ಪುಗಳನ್ನು ಸರಿ ಪಡಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಬಹುದು. ಪ್ರಗತಿಗಾಮಿಗಳು ಮತ್ತು ಪ್ರತಿಗಾಮಿಗಳ ನಡುವೆ ವಿಚಾರ ವಿನಿಮಯ ಆಗತ್ಯವಿದೆ” ಎಂದು ಬರಗೂರು ರಾಮಚಂದ್ರಪ್ಪ ಪ್ರತಿಪಾದಿಸಿದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, “ಕನ್ನಡ ಉಳಿಸುವ ಜವಾಬ್ದಾರಿ ಎಲ್ಲರ ಮೇಲೂ ಇದೆ.ಕೆಲವೇ ಸಂಘಟನೆ ಗಳಿಗೆ ಗುತ್ತಿಗೆ ನೀಡಿಲ್ಲ.ಕನ್ನಡದ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವುದು ಒಳ್ಳೆದಲ್ಲ.ಗುಂಡಾಗಿರಿ ಮಾಡುವುದು, ಸಾರ್ವಜನಿಕರ ಆಸ್ತಿ,ಪಾಸ್ತಿಗೆ ನಷ್ಟ ಉಂಟು ಮಾಡುವುದು ಕನ್ನಡಿಗರಿಗೆ ಮಾಡುವ ಅವಮಾನ” ಎಂದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, “ವಿದ್ಯಾರ್ಥಿಯಾಗಿದ್ದಾಗ ಸಿದ್ದಗಂಗಾ ಮಠದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸ್ವಯಂ ಸೇವಕನಾಗಿ ಭಾಗಿಯಾಗಿದ್ದು ನೆನಪಿಗೆ ಬಂತು. ೧೦೮ ವರ್ಷಗಳ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಆರಂಭಿಸಿ ಕನ್ನಡ ಭಾಷೆಗೆ ನೀಡಿದ ಗೌರವ ನಾವ್ಯಾರು ಮೆರೆಯು ವಂತಿಲ್ಲ. ವಿಷಾದ ಸಂಗತಿ ಎಂದರೆ, ಆದರೆ ದಕ್ಷಿಣ ಭಾರತದ ನಮ್ಮ ಅಕ್ಕಪಕ್ಕ ರಾಜ್ಯಗಳಲ್ಲಿ ಎಂದಿಗೂ ಆಯಾಯ ರಾಜ್ಯದ ಭಾಷೆಯ ಉಳಿವಿಗಾಗಿ ಹೋರಾಟ ನಡೆದಿಲ್ಲ. ಆದರೆ ಕರ್ನಾಟಕದಲ್ಲಿ ಮಾತ್ರ ಕನ್ನಡ ಭಾಷೆ ಉಳಿಸಲು ಹೋರಾಟ ನಡೆಸಬೇಕಿರುವುದು ದುರ್ದೈದ ಸಂಗತಿ.ಇದು ಕನ್ನಡಕ್ಕೂ ಒಳ್ಳೆಯದಲ್ಲ, ಕನ್ನಡಿಗರಿಗೂ ಶ್ರೇಯಸ್ಸು ತರುವಂತಹ ವಿಚಾರವಲ್ಲ” ಎಂದರು.
“ಸರ್ಕಾರ ಐದನೇ ತರಗತಿಯ ವರೆಗೆ ಮಾತೃಭಾಷಾ ಶಿಕ್ಷಣವನ್ನು ಕಡ್ಡಾಯಗೊಳಿಸಿದೆ. ಇತ್ತೀಚಗೆ ಕನ್ನಡ ನಾಮಫಲಕದ ಹೆಸರಿನಲ್ಲಿ ನಡೆದ ಘಟನೆ ಕನ್ನಡಿಗರಿಗೆ ಗೌರವ ತರುವಂತಹದಲ್ಲ.ಸರಕಾರ ಕನ್ನಡಿಗರ ಪರವಾಗಿದೆ.ಇದನ್ನು ಒತ್ತಿ ಹೇಳಬೇಕಾದ ಅಗತ್ಯವಿಲ್ಲ. ಕಾನೂನು ಮೊದಲಿನಿಂದಲೂ ಇದೆ.ಅನುಷ್ಠಾನ ಮಾಡಿ ಎಂದು ಕೇಳಿದ ರೀತಿ ಸಹಿಸುವಂತಹದ್ದಲ್ಲ. ಕಾನೂನು ನಿಮ್ಮ ಕೈಗೆತ್ತಿಕೊಳ್ಳಲು ಬಿಡುವುದಿಲ್ಲ. ಶಾಂತಿ ಕದಡಲು ಅವಕಾಶ ನೀಡುವುದಿಲ್ಲ” ಎಂದರು.
“ಬೆಂಗಳೂರು ಕೇವಲ ಕನ್ನಡದ ನೆಲವಾಗಿಲ್ಲ. ಇಡೀ ವಿಶ್ವದಲ್ಲಿ ಬೆಂಗಳೂರಿಗೆ ಬಗ್ಗೆ ಮಾತನಾಡುತ್ತಾರೆ. ಈ ರೀತಿಯ ವರ್ತನೆ ಸರಿಯಲ್ಲ.ಅದನ್ನು ಸರಕಾರ ಸಹಿಸುವುದಿಲ್ಲ.ಸುಗ್ರಿವಾಜ್ಞೆಯ ಮೂಲಕ ಕನ್ನಡ ನಾಮಫಲಕ ಅಳವಡಿಸುವ ಕಾನೂನು ತಂದಿದ್ದೇವೆ. ನಮಗೆ ಯಾರು ಹೇಳಬೇಕಾಗಿಲ್ಲ. ಇದು ಕನ್ನಡಿಗರ ಸರಕಾರ. ಕನ್ನಡದ ನೆಲ, ಜಲ, ಭಾಷೆಯನ್ನು ರಕ್ಷಿಸದೇ ಹೋದರೆ ನಾವು ಯಾರು ಸರಕಾರದಲ್ಲಿ ಇರುವುದು ತರವಲ್ಲ.ಹಾಗಾಗಿ ಕನ್ನಡ ರಕ್ಷಣೆಗೆ ಸರಕಾರದ ಬದ್ದವಾಗಿದೆ. ಕನ್ನಡ ಕಲಾ ಗ್ರಾಮಕ್ಕೆ 5ಎಕರೆ ಭೂಮಿ ನೀಡಲು ಜಿಲ್ಲಾಡಳಿತ ಸಿದ್ದವಿದೆ.ನೀರಾವರಿಗೆ ಅನೇಕ ರೀತಿಯ ಹೋರಾಟ ನಡೆದಿದೆ. ಮೇಕೆದಾಟು ಯೋಜನೆಗೆ ಸಾವಿರಾರು ಜನ ಪಾದಯಾತ್ರೆ ನಡೆಸಿದ್ದೇವೆ.ಎತ್ತಿನಹೊಳೆ ಯೋಜನೆ ನಿಧಾನವಾದರೂ ನಿರ್ಧಿಷ್ಟ ಅವಧಿಯಲ್ಲಿ ಯೋಜನೆ ಪೂರ್ಣಗೊಳ್ಳಲಿದೆ. ಮುಂದಿನ ಎರಡು ವರ್ಷದಲ್ಲಿ ಎತ್ತಿನಹೊಳೆಯ ನೀರು ಈ ಭಾಗಕ್ಕೆ ಹರಿಯಲಿದೆ” ಎಂದು ಡಾ. ಜಿ ಪರಮೇಶ್ವರ್ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ಬಿ.ಸುರೇಶಗೌಡ, ಚಿದಾನಂದಗೌಡ, ಡಾ.ವೈ.ಎ.ನಾರಾಯಣಸ್ವಾಮಿ, ಎಸ್.ನಾಗಣ್ಣ, ಚಂದ್ರಶೇರ್ ಗೌಡ, ಇಕ್ಬಾಲ್ಅಹಮದ್, ಜಿಲ್ಲಾಧಿಕಾರಿ ಶ್ರೀಮತಿ ಶುಭಾ ಕಲ್ಯಾಣ, ಸಿಇಓ ಜಿ.ಪ್ರಭು, ಎಸ್.ಪಿ ಅಶೋಕ್ ಕೆ.ವಿ, ಮುರುಳಿಕೃಷ್ಣಪ್ಪ ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.