ಪ್ರಸ್ತುತ ಸಮಾಜದಲ್ಲಿ ಧರ್ಮ, ಜಾತಿ, ವರ್ಗ ಗೋಡೆಗಳನ್ನು ದಾಟಿ ಸಮಾನತೆ ತತ್ವದಿಂದ ನಡೆದು ಸಾಮರಸ್ಯದಿಂದ ಎಲ್ಲರೂ ಕೂಡಿ ಇದ್ದರೆ ಮಾತ್ರ ದೇಶ ಬಲಿಷ್ಠವಾಗುತ್ತದೆ, ಸರ್ವಜನಾಂಗದ ಶಾಂತಿಯ ತೋಟ ನೆಲೆಸುತ್ತದೆ ಎಂದು ಪೂಜ್ಯ ಡಾ.ಬೆಲ್ದಾಳ ಸಿದ್ದರಾಮ ಶರಣರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಅರವಿಂದ ಕುಮಾರ ಅರಳಿಯವರ ಕಚೇರಿಯಲ್ಲಿ ಬೆಲ್ದಾಳ ಶರಣರ ಸಾನಿಧ್ಯದಲ್ಲಿ ಸಮಾನತಾ ಸಮಾವೇಶ ಆಯೋಜಿಸುವ ಕುರಿತು ನಡೆದ ಪೂರ್ವಸಿದ್ದತಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, “ಬಸವಕಲ್ಯಾಣ ಬಸವ ಮಹಾಮನೆ ಟ್ರಸ್ಟ್ ವತಿಯಿಂದ ಜ.7ರಂದು ಬೃಹತ್ ಸಮಾನತೆ ಸಮಾವೇಶ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ” ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಮಾತನಾಡಿ, “ಬಸವಕಲ್ಯಾಣ ನಗರದ ಬಸವ ಮಹಾಮನೆ ಆವರಣದಲ್ಲಿ ಹಮ್ಮಿಕೊಂಡಿರುವ ಸಮಾನತಾ ಸಮಾವೇಶ ಧರ್ಮಾತೀತ, ಜಾತ್ಯಾತೀತ, ಪಕ್ಷಾತೀತ ಹಾಗೂ ಶುದ್ಧ ರಾಜಕೀಯೇತರ ತಳಹದಿಯ ಮೇಲೆ ನಡೆಯಬೇಕು” ಎಂದು ಸಲಹೆ ನೀಡಿದರು.
ಹಿರಿಯ ಮುಖಂಡ ಶ್ರೀಕಾಂತ ಸ್ವಾಮಿ ಮಾತನಾಡಿ, “ಸಮಾನತಾ ಸಮಾವೇಶಕ್ಕೆ ಪೂಜ್ಯ ಬೆಲ್ದಾಳ ಶರಣರು ನಿರ್ಧರಿಸಿದಂತೆ ಪೂಜ್ಯರು, ಸಚಿವರು, ಗಣರನ್ನು ಆಹ್ವಾನಿಸುವ ಬಗ್ಗೆ ಕಾಲಮಿತಿಯಲ್ಲಿ ಆಹ್ವಾನಿಸುವಂತೆ” ತಿಳಿಸಿದರು.
ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಮಾತನಾಡಿ, “ಬೃಹತ್ ಪ್ರಮಾಣದಲ್ಲಿ ಹಮ್ಮಿಕೊಂಡಿರುವ ಸಮಾನತಾ ಸಮಾವೇಶ ಕಾರ್ಯಕ್ರಮದ ಯಶಸ್ವಿಗೆ ಬಸವಕಲ್ಯಾಣ ಸೇರಿದಂತೆ ಬೀದರ, ಕಲಬುರಗಿ ಭಾಗದ ಕ್ರಿಯಾಶೀಲ ನಾಯಕರ, ಸಾಮಾಜಿಕ ಕಾರ್ಯಕರ್ತರ ಉಪಸಮಿತಿಗಳನ್ನು ರಚಿಸಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಭೀಮಾ ಕೋರೆಗಾಂವ ವಿಜಯೊತ್ಸವ : ಜ.7ರಂದು ಕುಸ್ತಿ ಪಂದ್ಯಾವಳಿ
ಸಭೆಯಲ್ಲಿ ಶಾಹಿನ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ.ಅಬ್ದುಲ್ ಖದೀರ್, ಪ್ರಮುಖರಾದ ವಿನಯ ಮಾಳಗೆ, ಚಂದ್ರಶೇಖರ ಪಾಟೀಲ, ಶಿವಶಂಕರ ಟೋಕರೆ, ಮಹಾಲಿಂಗ, ಕೇದಾರನಾಥ ಪಾಟೀಲ, ರೋಹನ, ಉದಯಕುಮಾರ ಉಪಸ್ಥಿತರಿದ್ದರು.