ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಹಳ್ಳಿಗಳಲ್ಲಿ ಸಾರ್ವಜನಿಕ ಸ್ಮಶಾನಭೂಮಿ ಇದ್ದರೂ ಜನ ಇಲ್ಲಿ ಅಂತ್ಯಕ್ರಿಯೆ ಮಾಡುತ್ತಿಲ್ಲ. ಕಾರಣ ಇಲ್ಲಿನ ಕೆಲವು ಸ್ಮಶಾನಗಳಿಗೆ ದಾರಿ ಇಲ್ಲ, ಮತ್ತೆ ಕೆಲವು ಒತ್ತುವರಿಯಾಗಿವೆ. ಒಂದು ಸಮುದಾಯಕ್ಕೆ ಸ್ಮಶಾನ ಭೂಮಿಯ ಉತಾರ ಇದೆ ಆದರೆ ಸ್ಥಳವೇ ಇಲ್ಲ.
ಜನವಸತಿ ಇರುವ ಗ್ರಾಮಗಳಿಗೆ ಗೌರವಯುತ ಮತ್ತು ಸಾಂಪ್ರದಾಯಿಕ ಶವಸಂಸ್ಕಾರ ಮಾಡಲು ಸ್ಮಶಾನ ಭೂಮಿ ಒದಗಿಸಲು ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ತಾಲೂಕಿನ ಕೇಂದ್ರ ಸ್ಥಳ ಸೇರಿದಂತೆ ಎಲ್ಲ ಗ್ರಾಮಗಳಲ್ಲಿ ಸ್ಮಶಾನಭೂಮಿ ಇದೆ. ಆದರೆ, ಕೆಲವು ಕಡೆ ದಾಖಲಾತಿಗೆ ಮಾತ್ರ ಲಭ್ಯವಿದೆ ಬಳಕೆಗೆ ಯೋಗ್ಯವಿಲ್ಲ.
ಸಾತಿಹಾಳ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿಯಿಂದ ನೀಡಲಾದ ಭೂಮಿಯಲ್ಲಿ ಅಂತ್ಯಸಂಸ್ಕಾರ ಸಾಧ್ಯವೇ ಇಲ್ಲ. ಸ್ಮಶಾನಭೂಮಿ ಡೋಣಿ ನದಿಯ ತೀರದಲ್ಲಿ ಇರುವುದರಿಂದ ಮಳೆಗಾಲದಲ್ಲಿ ಇಲ್ಲಿಗೆ ತೆರಳಲು ಸಾಧ್ಯವೇ ಇಲ್ಲ. ಆದ್ದರಿಂದ ಇದು ಹೆಸರಿಗಷ್ಟೇ ಸಾರ್ವಜನಿಕ ಸ್ಮಶಾನಭೂಮಿ. ಈವರೆಗೆ ಯಾವುದೇ ಶವಸಂಸ್ಕಾರ ಇಲ್ಲಿ ನಡೆಸಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಮಳೆಗಾಲದಲ್ಲಿ ಇಲ್ಲಿ ತೆರಳಿ ಸಂಸ್ಕಾರ ನೆರವೇರಿಸುವುದು ಅತ್ಯಂತ ಕಠಿಣ ಕೆಲಸ, ಇಲ್ಲಿಯ ಭೂಮಿ ಎರೆಮಣ್ಣಿನಿಂದ ಕೂಡಿವೆ. ಈ ಗ್ರಾಮಗಳ ಜನರು ಕುಟುಂಬಸ್ಥರ ಅಂತ್ಯಸಂಸ್ಕಾರವನ್ನು ತಮ್ಮ ತಮ್ಮ ಜಮೀನುಗಳಲ್ಲಿಯೇ ಮಾಡುತ್ತಾರೆ.
ಡೋಣಿಬೂದಿಹಾಳ ಗ್ರಾಮದ ಪುನರ್ವಸತಿ ಕೇಂದ್ರದಲ್ಲಿ 4 ಎಕರೆಯಷ್ಟು ವಿಶಾಲವಾದ ಸ್ಮಶಾನಭೂಮಿ ಇದ್ದರೂ ಇದಕ್ಕೆ ದಾರಿಯ ಸಮಸ್ಯೆ ಇದೆ. ಇಲ್ಲಿ ತೆರಳಬೇಕೆಂದರೆ ಸುತ್ತಿಬಳಸಿ ಸಾಗಬೇಕು. ಆದ್ದರಿಂದ ಗ್ರಾಮಸ್ಥರು ಗ್ರಾಮದ ಹಳೆಯ ಸ್ಮಶಾನದಲ್ಲಿಯೇ ಶವಸಂಸ್ಕಾರ ನೆರವೇರಿಸುತ್ತಿದ್ದಾರೆ. ಹಳೆಯ ಸ್ಮಶಾನಭೂಮಿ ಈಗ ಡೋಣಿ ಪ್ರವಾಹಕ್ಕೆ ತುತ್ತಾಗಿ ಈಗ ಸ್ವಲ್ಪ ಉಳಿದಿದೆ ಎನ್ನುತ್ತಾರೆ ಡೋಣಿಬೂದಿಹಾಳ ಗ್ರಾಮದ ಜನ.
ಕಡ್ಲೇವಾಡ ಪಿಸಿಎಚ್, ವರ್ಕಾನಳ್ಳಿ ಸೇರಿದಂತೆ ಕೆಲವು ಗ್ರಾಮಗಳ ಜನಸಂಖ್ಯೆಗೆ ಅನುಗುಣವಾಗಿ ಇರುವ ಸ್ಮಶಾನಭೂಮಿಗಳು ಒತ್ತುವರಿಗೆ ಒಳಗಾಗಿದ್ದು, ಯಾರೂ ಕೇಳದಂತಾಗಿವೆ. ಸರ್ವೆ ಸಂ.48ರಲ್ಲಿ ಒಂದೂವರೆ ಎಕರೆ ವಿಸ್ತಾರದ ಕಡ್ಲೇವಾಡ ಗ್ರಾಮದ ಭೂಮಿ ಅತಿಕ್ರಮಣಕ್ಕೆ ಒಳಗಾಗಿದೆ. ಜೊತೆಗೆ ವರ್ಕಾನಳ್ಳಿ ಗ್ರಾಮದಲ್ಲಿ ಕುರುಬ ಸಮುದಾಯ ಸೇರಿದಂತೆ ಸಾರ್ವಜನಿಕ ಸ್ಮಶಾನದ 2 ಎಕರೆ ಭೂಮಿ ಹಾಗೂ ಜಂಗಮ ಸಮುದಾಯದ 1 ಎಕರೆ ಭೂಮಿಗಳು ಒತ್ತುವರಿಯಿಂದ ಕಿರಿದಾಗಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ನಿವಾಳಖೇಡ ಗ್ರಾಮದ ಮುಸ್ಲಿಂ ಸಮುದಾಯಕ್ಕೆ ಸ್ಮಶಾನ ಜಾಗದ ಉತಾರ ಇದೆ. ಆದರೆ ಗ್ರಾಮದಲ್ಲಿ ಆ ಸ್ಥಳವೇ ಇಲ್ಲ. ಈ ಕುರಿತು ಎರಡು ವರ್ಷಗಳಿಂದ ಮನವಿ ಮಾಡಲಾಗುತ್ತಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸಮುದಾಯದವರು.
ತಾಲೂಕು ಹಾಗೂ ಜಿಲ್ಲೆಯ ಗಡಿಯ ಆನೆಮಡು ಗ್ರಾಮದಲ್ಲಿ ಸಹ ನಿಗದಿಪಡಿಸಿದ ಸ್ಮಶಾನಭೂಮಿ ಇಲ್ಲ. ಆದರೆ ಗ್ರಾಮದ ಮುಂದಿರುವ ಹಳ್ಳದ ದಂಡೆಯಲ್ಲಿ 20 ಗುಂಟೆ ಜಾಗವನ್ನು ಸ್ಮಶಾನಭೂಮಿ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಈವರೆಗೆ ಇಲ್ಲಿ ಒಮ್ಮೆಯೂ ಸಂಸ್ಕಾರ ಜರುಗಿಲ್ಲ.
ತಾಲೂಕು ಕೇಂದ್ರ ದೇವರಹಿಪ್ಪರಗಿಯಲ್ಲಿ ಮಾತ್ರ ಹಸಿರು ಗಿಡಗಳು, ವಿದ್ಯುತ್ ವ್ಯವಸ್ಥೆ, ರಸ್ತೆ ಸಂಪರ್ಕದ ಸ್ಮಶಾನಭೂಮಿ ಗಮನ ಸೆಳೆಯುವಂತಿವೆ. ಆದರೆ, ಗ್ರಾಮೀಣ ಪ್ರದೇಶದ ಬಹುತೇಕ ಸ್ಮಶಾನಭೂಮಿಗಳು ಮುಳ್ಳಿನ ಗಿಡಗಂಟಿಗಳ ನಡುವೆ ಯಾವುದೇ ತಂತಿಬೇಲಿ ಇಲ್ಲದೇ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಇವುಗಳ ಕುರಿತು ಸ್ಥಳೀಯ ಆಡಳಿತ ಕೇಂದ್ರಗಳಾದ ಗ್ರಾಮ ಪಂಚಾಯಿತಿಗಳೇ ಅಗತ್ಯ ಕ್ರಮ ಕೈಗೊಳ್ಳಬೇಕು ಎನ್ನುವುದು ಗ್ರಾಮಸ್ಥರ ಆಗ್ರಹ.