ಕೊಪ್ಪಳ ಜಿಲ್ಲೆ ಕನಕಗಿರಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ದೇಶದ ಮೊದಲ ಶಿಕ್ಷಕಿ ಮಾತೆ ಸಾವಿತ್ರಿಬಾಯಿ ಪುಲೆಯವರ ಜನ್ಮದಿನಾಚರಣೆಯನ್ನು ಪ್ರಗತಿಪರ ಮತ್ತು ದಲಿತಪರ ಸಂಘಟನೆಗಳು ಆಚರಿಸಿವೆ.
ಡಾ.ಬಾಬಾ ಸಾಹೇಬರ್ ಅಂಬೇಡ್ಕರ್ ಮತ್ತು ಮಾತೆ ಸಾವಿತ್ರಿಬಾಯಿ ಪುಲೆಯವರ ಫೋಟೋಗಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಸ್ವಾಮಿ ಕಲ್ಬಾಗಿಲ್ಮಠ, ಸಾವಿತ್ರಿಬಾಯಿ ಪುಲೆಯವರ ವಿಚಾರಧಾರೆಗಳು ಇಂದಿನ ಸಮಾಜಕ್ಕೆ ಪೂರಕವಾಗಿವೆ. ಪುಲೆಯ ವಿಚಾರಧಾರೆಯನ್ನು ನಮ್ಮ ಮಕ್ಕಳಿಗೆ ತಿಳಿಸುವಂತ ಕೆಲಸವಾಗಬೇಕು. ಅವರ ಆದರ್ಶದ ಬದುಕು ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದೆ ಎಂದರು. ʼಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆʼ ಎನ್ನುವ ಮಾತು ಅಕ್ಷರಶಃ ಫುಲೆಯವರಿಗೆ ಅನ್ವಯಿಸುತ್ತದೆ ಎಂದರು.
ಮತ್ತೋರ್ವ ಪ್ರಗತಿಪರ ಚಿಂತಕ ನೀಲಕಂಠ ಬಡಿಗೇರ್ ಮಾತನಾಡಿ ಈ ದೇಶದಲ್ಲಿನ ಮಹಿಳೆಯರ ಶಿಕ್ಷಣಕ್ಕಾಗಿ ದಿಟ್ಟವಾಗಿ ಹೋರಾಟ ಮಾಡಿದ ದೇಶದ ಮೊದಲ ಶಿಕ್ಷಕಿ ಎಂದರೆ, ಅದು ಮಾತೆ ಸಾವಿತ್ರಿಬಾಯಿ ಪುಲೆ. ದಲಿತರ ದಮನಿತರ, ಹಿಂದುಳಿದ ವರ್ಗದ ಜನರಿಗೆ ಶಿಕ್ಷಣಕ್ಕಾಗಿ ಅನೇಕ ಶಾಲೆಗಳನ್ನ ತೆರೆದು ಶೈಕ್ಷಣಿಕ ಕ್ರಾಂತಿ ಮಾಡಿದರು.
ಶಿಕ್ಷಕರ ದಿನಾಚರಣೆಯಲ್ಲಿ ಮಾತೆ ಸಾವಿತ್ರಿ ಬಾಯಿ ಪುಲೆ ಅವರ ಪಾತ್ರ ತುಂಬಾ ಅರ್ಥ ಪೂರ್ಣ ಆದರೆ, ಆ ದಿನದ ಮಹತ್ವದಲ್ಲಿ ಸಾವಿತ್ರಿಬಾಯಿ ಪುಲೆಯವರನ್ನ ಸ್ಮರಿಸದೇ ಇರುವುದು ಇತಿಹಾಸ ಮುಚ್ಚಿಟ್ಟ ದೊಡ್ಡ ಸುಳ್ಳು. ಶಿಕ್ಷಣಧಾತೆ ಸರಸ್ವತಿಯಲ್ಲಾ ಸಾವಿತ್ರಿ ಬಾ ಪುಲೆ. ಅಕ್ಷರಧಾತ ಗಣೇಶನಲ್ಲಾ ಜ್ಯೋತಿಬಾ ಪುಲೆ ಎನ್ನುವುದನ್ನು ನಾವು ಯಾರು ಮರೆಯುವಂತಿಲ್ಲ. ಹಾಗಾಗಿ ಶಿಕ್ಷರ ದಿನಾಚರಣೆ ಸಾವಿತ್ರಿಬಾಯಿ ಪುಲೆ ಅವರ ಹೆಸರಲ್ಲಿ ನಡೆಯಬೇಕು ಎಂಬುವುದು ನಮ್ಮೆಲ್ಲರ ಅಭಿಪ್ರಾಯ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಸ್ಥಳೀಯ ಸಂಶೋಧಕ ಡಾ. ನಾಗೇಶ್ ಪೂಜಾರ್ ಮಾತನಾಡಿ, ಸಾಮಾಜಿಕ ಕ್ರಾಂತಿಯಲ್ಲಿ ಅಕ್ಷರದ ಮೂಲಕ ಸಮಾಜವನ್ನ ತಿದ್ದಿದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಅವರ ಜನ್ಮದಿನ ತುಂಬಾ ಅರ್ಥಪೂರ್ಣ. ಅವರು ಸಾಮಾಜವನ್ನು ತಿದ್ದುವಲ್ಲಿ ಒಬ್ಬ ಸಾಮಾಜಿಕ ವಿಜ್ಞಾನಿಯಂತೆ ಕೆಲಸ ಮಾಡಿದ್ದಾರೆ. ಧಾರ್ಮಿಕ ಚೌಕ್ಕಟ್ಟುಗಳಿಗೆ ಬಂಧಿಯಾಗಿದ್ದ ಮಹಿಳೆರ ಶಿಕ್ಷಣಕ್ಕಾಗಿ ಅನೇಕ ಅಪಮಾನಗಳನ್ನು ನೋವುಗಳನ್ನು ಎದುರಿಸಿ ಸಾಮಾಜಿಕ ಶೈಕ್ಷಣಿಕ ಸುಧಾರಣೆಯಲ್ಲಿ ತುಂಬಾ ಮಹತ್ವದ ಪಾತ್ರ ವಹಿಸಿದರು ಎಂದರು.
ಈ ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಪಾಮಣ್ಣ ಅರಳಿಗನೂರು, ವೆಂಕಟೇಶ್ ನಿರಲೂಟಿ, ವೆಂಕಟೇಶ್ ಪೂಜಾರ, ಪಟ್ಟಣ ಪಂಚಾಯಿತಿ ಸದಸ್ಯ ಕಂಠಿರಂಗಪ್ಪ ನಾಯಕ, ಕಾಂಗ್ರೆಸ್ ವಕ್ತಾರ ಶರಣಬಸಪ್ಪ ಭತ್ತದ, ಹನುಮೇಶ್ ವಾಲೇಕರ, ಮಕ್ತುಂಸಾಬ ಚಳ್ಳಮರದ್, ಬುಷ್ಯಪ್ಪ ಬಡಿಗೇರ, ಪಟ್ಟಣ ಪಂಚಾಯಿತಿ ಪೌರಕಾರ್ಮಿಕರು ಮುಂತಾದವರು ಭಾಗವಹಿಸಿದ್ದರು.