ಗೊಲ್ಲರ ಬೀದಿಗೆ ಹೋಗಿದ್ದಕ್ಕೆ ದಲಿತ ಯುವಕನ ಮೇಲೆ ಗೊಲ್ಲ ಸಮುದಾಯದವರು ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗೇರಮರಡಿ ಗ್ರಾಮದ ಶಿವರಾಮ್, ರಾಜಪ್ಪ, ಶಂಕರ್, ತಮ್ಮಯ್ಯ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ಜನವರಿ 1ರಂದು, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗೇರುಮರಡಿ ಗ್ರಾಮದಲ್ಲಿ ಮನೆ ಕೆಡವುವ ಕೆಲಸಕ್ಕೆ ಎಂ.ಸಿ ಹಳ್ಳಿ ಗ್ರಾಮದ ಮಾದಿಗ ಸಮುದಾಯದ ಯುವಕ ಮಾರುತಿ ತೆರಳಿದ್ದರು. ಈ ವೇಳೆ, ಜೆಸಿಬಿಗೆ ಡಿಶ್ ವೈರ್ ತಗುಲಿ, ವೈರ್ ತುಂಡಾಗಿತ್ತು. ಇದನ್ನೇ ನೆಪವಾಗಿಟ್ಟುಕೊಂಡು ಆತನ ಮೇಲೆ ಹಲ್ಲೆ ಗೊಲ್ಲ ಸಮುದಾಯದ ಗುಂಪು, ‘ಮಾದಿಗ ಸಮುದಾಯವರು ನಮ್ಮ ಬೀದಿಗೆ ಯಾಕೆ ಬಂದಿದ್ದೀರಿ. ನೀವು ಬಂದರೆ ನಮ್ಮ ದೇವರಿಗೆ ಮೈಲಿಗೆಯಾಗುತ್ತದೆ’ ಎಂದು ಹತ್ತಿ ಹಲ್ಲೆ ಮಾಡಿತ್ತು. ಕೆಲವರು ಚಪ್ಪಲಿ ಹಾಕಿದ್ದ ಕಾಲಿನಿಂದ ಒದ್ದಿದ್ದರು.
ಮಾತ್ರವಲ್ಲದೆ, ಆತನ ಜೇಬಿನಲ್ಲಿದ್ದ 20,000 ರೂಪಾಯಿಯನ್ನು ಕಸಿದುಕೊಂಡು, 1 ಲಕ್ಷ ರೂ. ದಂಡ ಕಟ್ಟಬೇಕು. ಇಲ್ಲವಾದಲ್ಲಿ ಬಟ್ಟೆ ಬಿಚ್ಚಿ ಮೆರವಣಿಗೆ ಮಾಡುತ್ತೇವೆಂದು ಬೆದರಿಕೆ ಹಾಕಿದ್ದರು.
ಸಂತ್ರಸ್ತ ಯುವಕ ಮಾರುತಿ ತರೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆತನ ದೂರಿನ ಆಧಾರದ ಮೇಲೆ 15 ಮಂದಿ ವಿರುದ್ಧ ಐಪಿಸಿ ಸೆಕ್ಷನ್ ಮತ್ತು ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಎಫ್ಐಆರ್ ದಾಖಲಾಗಿತ್ತು.
ತನಿಖೆ ನಡೆಸುತ್ತಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದ 11 ಮಂದಿ ಆರೋಪಿಗಳ ಬಂಧನಕ್ಕೆ ಹುಡುಕಾಟ ನಡೆಯುತ್ತಿದೆ.