ರಾಜ್ಯದಲ್ಲಿ ಶಂಕುಸ್ಥಾಪನೆಗೊಂಡ ಮೊದಲ ಸರ್ಕಾರಿ ಗೋಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ನಾಗರೆಡ್ಡಿಹಳ್ಳಿಯಲ್ಲಿರುವ ಸರ್ಕಾರಿ ಗೋಶಾಲೆ ಇದೀಗ ಉದ್ಘಾಟನೆಗೆ ಸಜ್ಜಾಗಿದೆ.
ಬಿಜೆಪಿ ಸರ್ಕಾರದ ಭರವಸೆಯಂತೆ 2021ರಲ್ಲಿ ಈ ಸರ್ಕಾರಿ ಗೋಶಾಲೆಯ ಶಂಕುಸ್ಥಾಪನೆಯಾಗಿತ್ತು. ಮಳೆ ಇತ್ಯಾದಿ ಸಮಸ್ಯೆಗಳಿಂದ ಕಳೆದ ಎರಡು ವರ್ಷಗಳಿಂದ ಗೋ ಶಾಲೆಯ ಕಾಮಗಾರಿ ಕುಂಠಿತಗೊಂಡಿತ್ತು. ಎರಡು ವರ್ಷಗಳ ಬಳಿಕ ಇದೀಗ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ.
ಶಿಡ್ಲಘಟ್ಟ ತಾಲೂಕಿನ ನಾಗರೆಡ್ಡಿಹಳ್ಳಿಯ ಸರ್ವೆ ನಂ.41ರಲ್ಲಿರುವ ಸುಮಾರು ಹತ್ತು ಎಕರೆ ವಿಸ್ತೀರ್ಣದಲ್ಲಿ, 50ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಸರ್ಕಾರಿ ಗೋಶಾಲೆಯನ್ನು ನಿರ್ಮಿಸಲಾಗಿದೆ. ಈ ಜಾಗದಲ್ಲಿ ಗೋವುಗಳಿಗಾಗಿ ಶೆಡ್, ಕಾವಲುಗಾರರಿಗೆ ಮನೆ, ಮೇವು ಸಂಗ್ರಹಣೆ, ಚಿಕಿತ್ಸೆ ಹಾಗೂ ಆಹಾರ ದಾಸ್ತಾನು ಮಾಡಲು ಸುಸಜ್ಜಿತ ಕೊಠಡಿಗಳನ್ನು ನಿರ್ಮಿಸಲಾಗಿದೆ.
ಸಾರ್ವಜನಿಕ ಸಹಭಾಗಿತ್ವದಲ್ಲಿ ನಿರ್ವಹಣೆ ಮಾಡಲು ಪಶುಪಾಲನಾ ಇಲಾಖೆ ಅನುಮತಿ ನೀಡಿದ್ದು, ಗೋಶಾಲೆ ನಿರ್ವಹಣೆಯಲ್ಲಿ ಅನುಭವವಿರುವ ಸಾರ್ವಜನಿಕರು, ಸಂಘ ಸಂಸ್ಥೆಗಳು ಅರ್ಜಿ ಸಲ್ಲಿಸಿ ನಿರ್ವಹಣೆ ಹೊಣೆ ಹೊರಬಹುದಾಗಿದೆ. ಪ್ರತೀ ರಾಸಿಗೆ 70ರೂ. ವೆಚ್ಚ ತಗುಲಲಿದ್ದು, ಸರ್ಕಾರದಿಂದ ಶೇ.25ರಷ್ಟು (17ರೂ.) ಹಣ ದೊರೆಯಲಿದೆ. ಬಿಡಾಡಿ ದನಗಳು, ನ್ಯಾಯಾಲಯದಿಂದ ನಿರ್ದೇಶಿಸಲ್ಪಟ್ಟ ರಾಸುಗಳನ್ನು ಇಲ್ಲಿ ಸಾಕಬಹುದಾಗಿದ್ದು, ಪುಣ್ಯಕೋಟಿ ಯೋಜನೆಯಡಿ ವಾರ್ಷಿಕ 11 ಸಾವಿರ ಭರಿಸಿ ಸಾರ್ವಜನಿಕರು ದತ್ತು ಪಡೆಯಬಹುದಾಗಿದೆ.
ಜಿಲ್ಲಾ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ರವಿ ಈ ಬಗ್ಗೆ ಮಾಹಿತಿ ನೀಡಿದ್ದು, ಜಿಲ್ಲೆಯ ಮೊದಲ ಸರ್ಕಾರಿ ಗೋಶಾಲೆ ಉದ್ಘಾಟನೆಗೆ ಸಜ್ಜಾಗಿದೆ. ಸಾರ್ವಜನಿಕರು, ಸಂಘ ಸಂಸ್ಥೆಗಳು ಜಿಲ್ಲಾ ಉಪನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆ, ಚಿಕ್ಕಬಳ್ಳಾಪುರ ಕಚೇರಿಗೆ ಭೇಟಿ ನೀಡಿ ಜ.15ರೊಳಗೆ ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದ ಅವರು, ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಎಂದಿದ್ದಾರೆ. ಮುಖ್ಯ ಪಶುವೈದ್ಯಾಧಿಕಾರಿ, ಚಿಕ್ಕಬಳ್ಳಾಪುರ-08151-272375, ಬಾಗೇಪಲ್ಲಿ-08150-282223, ಚಿಂತಾಮಣಿ-08154-252106, ಗೌರಿಬಿದನೂರು-08155-285301, ಗುಡಿಬಂಡೆ-08156-261031, ಶಿಡ್ಲಘಟ್ಟ-08158-256225.
ನಿರ್ವಹಣೆ ಷರತ್ತುಗಳು:
- ಗೋಶಾಲೆ ನಿರ್ವಹಣೆ ಮಾಡುವ ಯಾವುದೇ ವ್ಯಕ್ತಿ ಅಥವಾ ಸಂಘ ಸಂಸ್ಥೆಗಳು ಗೋಶಾಲೆಯಲ್ಲಿರುವ ಜಾನುವಾರುಗಳಿಗೆ ಕನಿಷ್ಠ 3 ತಿಂಗಳಿಗೆ ಅಗತ್ಯವಿರುವ ಮೇವು ಸಂಗ್ರಹಿಸಿಡಬೇಕು.
- ನಿರ್ವಹಣೆಗಾಗಿ ಅಗತ್ಯ ಸಿಬ್ಬಂದಿ ಇರಬೇಕು. ಸರ್ಕಾರ ಹೊರಡಿಸುವ ಷರತ್ತು ಮತ್ತು ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
- ಗೋಶಾಲೆ ಜಾಗ, ಕಟ್ಟಡ, ಅಲ್ಲಿನ ಉಪಕರಣಗಳನ್ನು ಅಡಮಾನ ಇಡುವಂತಿಲ್ಲ. ಗುತ್ತಿಗೆಯ ಅವಧಿ ಮುಕ್ತಾಯದ ನಂತರ ಯಥಾಸ್ಥಿತಿ ಜಿಲ್ಲಾ ಪ್ರಾಣಿದಯಾ ಸಂಘ ಸಂಸ್ಥೆಗೆ ಹಿಂದಿರುಗಿಸಬೇಕು.
- ಗೋಶಾಲೆಯಲ್ಲಿ ರಾಸುಗಳ ದಾಸ್ತಾನು ವಹಿ, ಜನನ ಮರಣ ವಹಿ, ಮೇವು ದಾಸ್ತಾನು ಪುಸ್ತಕ ಹಾಗೂ ಇತರೆ ಸಂಬಂಧಿತ ಎಲ್ಲಾ ದಾಖಲಾತಿಗಳನ್ನು ಚಾಚುತಪ್ಪದೆ ನಿರ್ವಹಿಸಬೇಕು.
ಒಪ್ಪಂದದಂತೆ ನಿರ್ವಹಣೆ ಮಾಡದಿದ್ದಲ್ಲಿ ಜಿಲ್ಲಾ ಪ್ರಾಣಿದಯಾ ಸಂಘದ ನಿರ್ದೇಶನದಂತೆ ಗೋಶಾಲೆಯನ್ನು ಇಲಾಖೆವ ವಶಕ್ಕೆ ಪಡೆಯಲಾಗುವುದು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.