ಜನವರಿ 14 ರಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ದಟ್ಟ ಮಂಜು ಉಂಟಾದ ಕಾರಣದಿಂದ ದೆಹಲಿಯಿಂದ ಗೋವಾಕ್ಕೆ ತೆರಳಬೇಕಿದ್ದ ಇಂಡಿಗೋ ವಿಮಾನ 10 ಗಂಟೆಗಳ ಕಾಲ ತಡವಾಗಿತ್ತು. ಆಹಾರ, ವಸತಿ ಸೇರಿದಂತೆ ಹಲವು ಮೂಲಸೌಕರ್ಯಗಳಿಗೆ ತೊಂದರೆಯಾಗಿತ್ತು. ಇದರಿಂದ ಗಂಟೆಗಟ್ಟಲೆ ವಿಮಾನದಲ್ಲಿ ಕಾದು ಸಿಟ್ಟಾಗಿದ್ದ ಪ್ರಯಾಣಿಕನೊಬ್ಬ ನಿರಂತರವಾಗಿ ವಿಮಾನ ವಿಳಂಬವಾಗುತ್ತಿದೆ ಎಂದು ಘೋಷಿಸಿದ ಸಹ ಪೈಲಟ್ ಮೇಲೆ ಕಪಾಳ ಮೋಕ್ಷ ಮಾಡಿ ತನ್ನ ಕೋಪವನ್ನು ತೀರಿಸಿಕೊಂಡ. ನಂತರ ಆತನನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಬಳಿಕ ನ್ಯಾಯಾಲಯವು ಆತನಿಗೆ ಜಾಮೀನು ನೀಡಿತ್ತು.
ಸಹ ಪೈಲಟ್ ಹಲ್ಲೆ ಘಟನೆಯ ಬಗ್ಗೆ ಟೀಂ ಇಂಡಿಯಾ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡ ಬೇಸರ ವ್ಯಕ್ತಪಡಿಸಿದ್ದರು. ಸ್ನೇಹಿತರೆ ನಮಗೂ ಕೂಡ ವಿಮಾನಗಳು ತಡವಾದಾಗ ನಿರಾಸೆಯಾಗುತ್ತದೆ. ಆದರೆ ಈ ರೀತಿಯ ವರ್ತನೆ ಖಂಡಿತವಾಗಿಯೂ ಬೇಡ. ನಿಯಮಿತ ಪ್ರಯಾಣಿಕನಾಗಿ ಈ ರೀತಿಯ ಹಲವು ವಿಳಂಬಗಳನ್ನು ಎದುರಿಸಿದ್ದೇನೆ. ಆದರೆ ಎಲ್ಲರ ಸುರಕ್ಷತೆಯೂ ಮುಖ್ಯ. ಹವಾಮಾನದ ಕಾರಣದಿಂದ ನಾಗರಿಕರ ಸುರಕ್ಷತೆಗಾಗಿ ವಿಮಾನವನ್ನು ವಿಳಂಬಗೊಳಿಸುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ವಿಮಾನದ ಸಿಬ್ಬಂದಿ ಹಾಗೂ ಪೈಲೆಟ್ಗಳ ಮೇಲೆ ಕೈ ಮಾಡುವುದರಿಂದ ದೂರವಿರಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದರು.
ಈ ದೃಶ್ಯ ನಮ್ಮ ದೇಶ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈರಲ್ ಆಗಿತ್ತು. ಘಟನೆಗೆ ಸ್ವತಃ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧ್ಯಾ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ನಂತರದಲ್ಲಿ ದಟ್ಟ ಮಂಜಿನಿಂದ ವಿಮಾನಗಳು ತಡವಾದರೆ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಮಾರ್ಗಸೂಚಿಯ ವಿವರ
ಮಾರ್ಗಸೂಚಿಗಳ ಅನುಸಾರ ವೈಪರೀತ್ಯದಿಂದಾಗಿ ಮೂರು ಗಂಟೆಗೂ ಹೆಚ್ಚು ಕಾಲ ವಿಮಾನ ಹಾರಾಟ ವಿಳಂಬವಾದರೆ, ಮೊದಲೇ ಅವುಗಳನ್ನು ರದ್ದುಗೊಳಿಸಬಹುದು ಎಂದು ಡಿಜಿಸಿಎ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? 10 ಗಂಟೆ ಇಂಡಿಗೋ ವಿಮಾನ ವಿಳಂಬ: ಪೈಲಟ್ ಮೇಲೆ ಹಲ್ಲೆಗೈದ ಪ್ರಯಾಣಿಕ; ವಿಡಿಯೋ ವೈರಲ್
ವಿಮಾನಗಳ ರದ್ದತಿ, ಮುನ್ಸೂಚನೆ ಇಲ್ಲದೇ ವಿಳಂಬ ಮತ್ತು ಬೋರ್ಡಿಂಗ್ ನಿರಾಕರಣೆ ಪ್ರಕರಣಗಳಲ್ಲಿ ಪ್ರಯಾಣಿಕರಿಗೆ ಸಂಪೂರ್ಣ ರಕ್ಷಣೆ ಮತ್ತು ಸೌಲಭ್ಯಗಳನ್ನು ಒದಗಿಸಬೇಕು. ಮೂರು ಗಂಟೆಗಳಿಗಿಂತ ಹೆಚ್ಚು ವಿಳಂಬವಾಗುವ ಸಾಧ್ಯತೆ ಇದ್ದಾಗ ಅವುಗಳನ್ನು ಮುಂಚಿತವಾಗಿಯೇ ರದ್ದುಗೊಳಿಸಲು ಅನುಮತಿ ನೀಡಲಾಗಿದೆ.
ಈ ನಿಯಮಗಳನ್ನು ತಕ್ಷಣವೇ ಪಾಲಿಸಬೇಕು. ವಿಮಾನ ವಿಳಂಬದ ಬಗ್ಗೆ ನಿಖರ ಮಾಹಿತಿಯನ್ನು ಆಯಾ ವಿಮಾನಯಾನ ಸಂಸ್ಥೆಗಳ ವೆಬ್ಸೈಟ್ನಲ್ಲಿ ಬಹಿರಂಗಪಡಿಸಬೇಕು. ಮುಂಗಡ ಮಾಹಿತಿಯನ್ನು ಪ್ರಯಾಣಿಕರಿಗೆ ಎಸ್ಎಂಎಸ್/ವಾಟ್ಸಾಪ್ ಮತ್ತು ಇ-ಮೇಲ್ ಮೂಲಕ ತಿಳಿಸಬೇಕು. ವಿಳಂಬದ ಬಗ್ಗೆ ನೈಜ ಮಾಹಿತಿಯನ್ನು ನಿಲ್ದಾಣದಲ್ಲಿ ಕಾಯುತ್ತಿರುವ ಪ್ರಯಾಣಿಕರಿಗೆ ನೀಡಬೇಕು. ಪ್ರಯಾಣಿಕರೊಂದಿಗೆ ಸಮಾಲೋಚಿಸಲು ಮತ್ತು ಮಾರ್ಗದರ್ಶನ ನೀಡಲು ಸೂಕ್ತ ಸಿಬ್ಬಂದಿ ಲಭ್ಯವಿರಬೇಕು. ಇವೆಲ್ಲವೂ ವಿಮಾನ ನಿಲ್ದಾಣದಲ್ಲಿ ದಟ್ಟಣೆ ತಪ್ಪಿಸುವುದು, ಪ್ರಯಾಣಿಕರಿಗೆ ಅನನುಕೂಲತೆಯನ್ನು ಕಡಿಮೆ ಮಾಡುವ ಉದ್ದೇಶವಾಗಿದೆ ಎಂದು ಡಿಜಿಸಿಎ ಹೇಳಿದೆ.
650 ವಿಮಾನಗಳ ವಿಳಂಬ
ಜನವರಿ 16(ಇಂದು) ಒಳಗೊಂಡು ಕಳೆದ ಮೂರು ದಿನಗಳಿಂದ ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜು ಮತ್ತು ಕಳಪೆ ಗೋಚರತೆಯಿಂದಾಗಿ ಸುಮಾರು 650 ವಿಮಾನಗಳ ವಿಳಂಬವಾಗಿವೆ. 85 ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಈ ಘಟನೆಯಿಂದ ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಪರಿಣಾಮ ಉಂಟಾಗಿದೆ. ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಉತ್ತರ ಭಾರತದಾದ್ಯಂತ ಇನ್ನೂ ಮೂರು ದಿನಗಳು ದಟ್ಟ ಮಂಜು ಮುಂದುವರಿಯಲಿದೆ.
ಮಂಗಳವಾರ ರಾಷ್ಟ್ರ ರಾಜಧಾನಿಯನ್ನು ದಟ್ಟವಾದ ಮಂಜು ಆವರಿಸಿದ್ದರಿಂದ ದೆಹಲಿಯಲ್ಲಿ ಶೀತ ಅಲೆಯ ಪರಿಸ್ಥಿತಿ ಮುಂದುವರೆದಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ ತಾಪಮಾನವು ಸಫ್ದರ್ಜಂಗ್ನಲ್ಲಿ 4.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಪಾಲಂನಲ್ಲಿ ತಾಪಮಾನವು 7.2 ಡಿಗ್ರಿ ಸೆಲ್ಸಿಯಸ್ ಇದೆ. ಪಾಲಮ್ ವಿಮಾನ ನಿಲ್ದಾಣದಲ್ಲಿ 100 ಮೀ ಗೋಚರತೆಯನ್ನು ವರದಿ ಮಾಡಲಾಗಿದೆ. ಸಫ್ದರ್ಜಂಗ್ ವಿಮಾನ ನಿಲ್ದಾಣದಲ್ಲಿ, ಇಂದು ಬೆಳಗ್ಗೆ 7 ಗಂಟೆಗೆ 50 ಮೀ ಗೋಚರತೆ ಇತ್ತು ಎಂದು ಹವಾಮಾನ ಇಲಾಖೆ ಹೇಳಿದೆ.
ವಿಮಾನ ಮಾತ್ರವಲ್ಲದೆ ಇಂದು ದೆಹಲಿಗೆ ಬರಲಿದ್ದ 30 ರೈಲುಗಳು ತಡವಾಗಿ ಆಗಮಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಂಗಳವಾರ ದಟ್ಟವಾದ ಮಂಜು ವಿಮಾನ ಮತ್ತು ರೈಲು ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಿದ್ದರಿಂದ ದೆಹಲಿ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ಕಾಯುವಿಕೆ ಮುಂದುವರಿದಿದೆ.