ರಾಜ್ಯ ರಾಜಧಾನಿ ಬೆಂಗಳೂರಿನ ರೌಡಿಗಳಿಗೆ ಪಿಸ್ತೂಲ್ ಪೂರೈಕೆ ಮಾಡುತ್ತಿದ್ದ ಇಬ್ಬರು ಅಂತರ್ ರಾಜ್ಯ ಆರೋಪಿಗಳನ್ನು ಸಿಸಿಬಿ ಪೊಲೀಸರು ನಗರದ ಉಲ್ಲಾಳ ಬಳಿ ಬಂಧಿಸಿದ್ದಾರೆ
ರಾಹುಲ್ ಸತೀಶ್ ಮಾನೆ, ಮಲ್ಲಿಕ್ ಬಂಧಿತರು. ಬಂಧಿತರಿಂದ 2 ಕಂಟ್ರಿಮೇಡ್ ಪಿಸ್ತೂಲ್, 9 ಜೀವಂತ ಗುಂಡುಗಳು, ಒಂದು ಸ್ವಿಫ್ಟ್ ಡಿಸೈರ್ ಕಾರ್ ಸೇರಿ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜನವರಿ 14ರಂದು ಬೆಳಗ್ಗೆ 11:30ರ ಸುಮಾರಿಗೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಳ ರಿಂಗ್ ರಸ್ತೆಯ ಕೆರೆ ಬಳಿ ಅಕ್ರಮ ಪಿಸ್ತೂಲ್ಗಳು ಮತ್ತು ಜೀವಂತ ಗುಂಡುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ದಾಳಿ ನಡೆಸಿದ ಸಿಸಿಬಿಯ ಸಂಘಟಿತ ಅಪರಾಧ ದಳ (ಪಶ್ಚಿಮ)ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಇಬ್ಬರು ಬಂಧಿತ ಆರೋಪಿಗಳು ಮೂಲತಃ ಮಹಾರಾಷ್ಟ್ರದವರು. ಪ್ರಕರಣವೊಂದರಲ್ಲಿ ಬಂಧನವಾಗಿ ನಗರದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರು. ಜೈಲಿನಲ್ಲಿದ್ದಾಗ ಕೆಲವು ರೌಡಿಗಳಿಗೆ ಪರಿಚಯವಾಗಿದ್ದರು. ಹೀಗಾಗಿ, ಜೈಲಿನಿಂದ ಹೊರಬಂದ ಬಳಿಕ ರೌಡಿಗಳ ಸಂಪರ್ಕದಲ್ಲಿದ್ದರು. ರೌಡಿಗಳಿಗೆ ಪಿಸ್ತೂಲ್ ಮಾರಾಟ ಮಾಡಲು ಬೆಂಗಳೂರಿಗೆ ಬಂದಿದ್ದರು.
ಈ ಸುದ್ದಿ ಓದಿದ್ದೀರಾ? ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಗೆ ಎಲ್ಲ ರೀತಿಯ ಸಿದ್ದತೆ: ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
ಪ್ರಮುಖ ಆರೋಪಿ ರಾಹುಲ್ ಸತೀಶ್ ಮಾನೆ ಮಹಾರಾಷ್ಟ್ರ, ಉತ್ತರಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಅಕ್ರಮ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವ ಏಜೆಂಟ್ ಆಗಿದ್ದನು. ಆತನ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಮಹಾರಾಷ್ಟ್ರದ ಮೀರಜ್ ಮಹಾತ್ಮಗಾಂಧಿ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ, ಮೀರಜ್ ಟೌನ್ ಪೊಲೀಸ್ ಠಾಣೆಯಲ್ಲಿ 1, ಸಾಂಗ್ಲಿ ವೆಲ್ವಾಡಿ ಪೊಲೀಸ್ ಠಾಣೆಯಲ್ಲಿ 1, ಮೀರಜ್ನ ಎಂಐಡಿಸಿ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ಹಾಗು ಕರ್ನಾಟಕದ ಬೆಂಗಳೂರು ನಗರ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ.
ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.