ದೇಶದಲ್ಲಿ ತತ್ವಪದಕಾರರು, ಕವಿಗಳು, ವಿವಿಧ ಧಾರ್ಮಿಕ ಗುರುಗಳು, ಚಿಂತಕರು, ಕ್ರಿಯಾ ಶೀಲರು, ಸಮಾನತೆ ಮತ್ತು ಸಹಿಷ್ಣುತೆಯ ಆದರ್ಶ ಮಾದರಿಗಳನ್ನು ಬಿತ್ತಿ ಬೆಳೆದಿದ್ದಾರೆ. ಆದರೆ ಇತ್ತೀಚಿನ ಕೆಲವು ಅಹಿತಕರ ಘಟನೆಗಳು ನಮ್ಮ ಸೌಹಾರ್ದ ಸಂಸ್ಕೃತಿಗೆ ಧಕ್ಕೆ ತರುತ್ತಿವೆ ಎಂದು ಸೌಹಾರ್ದ ಸಂಘಟನೆಗಳ ಕಾರ್ಯಕರ್ತರು ಆರೋಪಿಸಿದರು.
ಸೌಹಾರ್ದ ಸಂಘಟನೆಗಳು, ವಿವಿಧ ಪ್ರಗತಿಪರ, ಜನಪರ ಸಂಘಟನೆಗಳು, ಸಮಾನ ಮನಸ್ಕರು ವತಿಯಿಂದ ಸೌಹಾರ್ದ ಪರಂಪರೆಯ ಅಭಿಯಾನದ ಮೂಲಕ ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ಸೌಹಾರ್ದತಾ ಮಾನವ ಸರಪಳಿ ರಚಿಸಿದವೇಳೆ ಮಾತನಾಡಿದರು.
“ದ್ವೇಷದ ದಾಹವನ್ನು ಹೆಚ್ಚಿಸುತ್ತಿವೆ. ಮಾನವೀಯ ಮೌಲ್ಯಗಳನ್ನು ಮಣ್ಣು ಮಾಡುತ್ತಿವೆ. ಆದರೂ ನಮ್ಮ ಮಣ್ಣಿನಲ್ಲಿ ಸೌಹಾರ್ದದ ಬೆಳೆ ಹಾಳಾಗುವುದಿಲ್ಲ. ಬದಲಾಗಿ ಬೆಂಕಿಯನ್ನು ಬೆಳಕಾಗಿಸುತ್ತದೆ. ಕೆಂಡವನ್ನೂ ಕರುಳಾಗಿಸುತ್ತದೆ. ಇಂಥ ಪರಂಪರೆಯ ಭರವಸೆಯನ್ನು ಬಿತ್ತರಿಸುವುದು ಎಲ್ಲ ಮಾನವೀಯ ಮನಸ್ಸುಗಳ ನೈತಿಕ ಹೊಣೆಯಾಗಿದೆ” ಎಂದರು.
“ನಮ್ಮ ಸಂವಿಧಾನದಲ್ಲಿರುವ ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಮಾನತೆಯ ಅಂಶಗಳನ್ನು ಸೌಹಾರ್ದದ ಸಕಾರಾತ್ಮಕ ಸಾಧನವಾಗಿ ಜನರಿಗೆ ಮನವರಿಕೆ ಮಾಡಿಕೊಡುವುದು ಇಂದು ಎಂದಿಗಿಂತ ಹೆಚ್ಚು ಅಗತ್ಯವಾಗಿದೆ. ಧರ್ಮ-ಧರ್ಮಗಳ ನಡುವೆ ದ್ವೇಷ ಹುಟ್ಟು ಹಾಕುವುದು ಹೇಗೆ ಸಂವಿಧಾನ ವಿರೋಧಿಯೆಂದು ಸಾರ್ವಜನಿಕರಿಗೆ ಮತ್ತಷ್ಟು ಮನದಟ್ಟು ಮಾಡಬೇಕಾಗಿದೆ” ಎಂದು ತಿಳಿಸಿದರಿ.
“ನಮ್ಮ ದೇಶದಲ್ಲಿ ಸೌಹಾರ್ದತೆಯ ಗಟ್ಟಿ ಪರಂಪರೆಯಿದೆ. ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೂ ಈ ಸೌಹಾರ್ದ ಪರಂಪರೆಯು ಸಂಕುಚಿತ ಸವಾಲುಗಳನ್ನು ಮೆಟ್ಟಿ ಮುಂದುವರೆಯುತ್ತ ಬಂದಿದೆ. ಹೀಗೆ ಮುಂದುವರೆಯುತ್ತ, ವಿವಿಧ ಧರ್ಮಗಳ ಜನಸಮುದಾಯಗಳ ನಡುವೆ ಭಾವನಾತ್ಮಕ ಬೆಸುಗೆಯಾಗುತ್ತಾ ಬಂದ ಸೌಹಾರ್ದ ಸಂವೇದನೆಗೆ ಧಕ್ಕೆ ತರಲು ಯಾವುದೇ ಧರ್ಮ ಮೂಲದವರು ಪ್ರಯತ್ನಿಸಿದರೂ ಅದನ್ನು ವಿರೋಧಿಸಬೇಕಾಗುತ್ತದೆ. ಇಲ್ಲದಿದ್ದರೆ ಜನಸಾಮಾನ್ಯರು ನಮ್ಮಲ್ಲಿ ಪೂರ್ವಗ್ರಹ ಮತ್ತು ಪಕ್ಷಪಾತವನ್ನು ಕಾಣುತ್ತಾರೆ. ಕೆಲವು ಹಿತಾಸಕ್ತಿಗಳು ಧರ್ಮದ ಹೆಸರಿನಲ್ಲಿ ಜನಸಮುದಾಯದ ನಡುವೆ ಕಂದಕ ಮೂಡಿಸುತ್ತ ಕಲುಷಿತ ವಾತಾವರಣಕ್ಕೆ ಕಾರಣವಾಗುತ್ತಿರುವಾಗ, ಜನಸಮುದಾಯಕ್ಕೆ ಸತ್ಯವನ್ನು ಮನವರಿಕೆ ಮಾಡಿಕೊಡುವುದು ನಮ್ಮ ಅಭಿಯಾನದ ಉದ್ದೇಶವಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಸಿದ್ದ; ಪ್ರಮೋದ್ ಮಧ್ವರಾಜ್
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ವೀರ ಹನುಮಾನ, ಚಾಮರಸ ಮಾಲೀ ಪಾಟೀಲ್, ವೆಂಕಟೇಶ ಬೇವಿನಬೆಂಚಿ, ಕರಿಯಪ್ಪ ಅಚ್ಚೊಳ್ಳಿ, ಹೆಚ್.ಪದ್ಮಾ, ಡಿ ಎಸ್ ಶರಣಬಸವ, ಕೆ ಜಿ ವೀರೇಶ, ಪ್ರವೀಣ್ ರೆಡ್ಡಿ ಗುಂಜಳ್ಳಿ, ಬಷೀರ್ ಅಹ್ಮದ್, ಖಾಜಾ ಅಸ್ಲಾ ಪಾಷಾ, ಸುಲೋಚನಾ, ಜಾನ್ ವೆಸ್ಲಿ, ಗೋಕುರಮ್ಮ, ಆಂಜನೇಯ ಸೇರಿದಂತೆ ಇತರರು ಇದ್ದರು.
ವರದಿ : ಹಫೀಜುಲ್ಲ