- ಭಾರತದ ಜೊತೆ ಹಲವು ಒಪ್ಪಂದಕ್ಕೆ ಸಹಿ ಹಾಕಿರುವ ಫೂಮಿಯೋ ಕಿಶಿಡಾ
- 2022ರ ಜುಲೈನಲ್ಲಿ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಹತ್ಯೆ
ಜಪಾನ್ ಪ್ರಧಾನ ಮಂತ್ರಿ ಫ್ಯೂಮಿಯೋ ಕಿಶಿಡಾ ಅವರ ಕಾರ್ಯಕ್ರಮವೊಂದರಲ್ಲಿ ಶನಿವಾರ (ಏಪ್ರಿಲ್ 14) ಬಾಂಬ್ ಸ್ಪೋಟ ಸಂಭವಿಸಿದೆ.
ಭದ್ರತಾ ಅಧಿಕಾರಿಗಳು ಕಿಶಿಡಾ ಅವರನ್ನು ಕೂಡಲೇ ಸ್ಥಳದಿಂದ ಸುರಕ್ಷಿತವಾಗಿ ಕರೆದೊಯ್ದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಜಪಾನ್ನ ವಕಾಯಾಮಾ ಬಂದರು ಪಟ್ಟಣದಲ್ಲಿ ಫ್ಯೂಮಿಯೋ ಕಿಶಿಡಾ ಅವರ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಕಿಶಿಡಾ ಅವರು ಮಾತನಾಡಲು ಮುಂದಾಗುತ್ತಿದ್ದಂತೆ ಅವರೆಡೆಗೆ ಸ್ಫೋಟಕ ವಸ್ತುವೊಂದನ್ನು ಎಸೆಯಲಾಗಿದೆ. ಅದು ಭಾರೀ ಶಬ್ಧದೊಂದಿಗೆ ಸ್ಫೋಟಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಕೂಡಲೇ ಕಿಶಿಡಾ ಅವರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಘಟನೆ ಬಗ್ಗೆ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಬಾಂಬ್ ಸ್ಫೋಟದ ಕಾರಣಕ್ಕೆ ಸ್ಥಳದಲ್ಲಿ ದಟ್ಟವಾದ ಹೊಗೆ ಆವರಿಸಿತ್ತು. ಆದರೆ ಘಟನೆಯಲ್ಲಿ ಪ್ರಧಾನಿ ಕಿಶಿಡಾ ಸೇರಿದಂತೆ ಯಾರಿಗೂ ಗಂಭೀರವಾದ ಗಾಯಗಳಾಗಿಲ್ಲ ಎಂದು ಜಪಾನ್ನ ಕ್ಯೋಡೋ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಉತ್ತರ ಸಪ್ಪೊರೊ, ನಾಗಾನೊದ ಕರುಯಿಜಾವಾ ನಗರ ಮತ್ತು ಹಿರೋಷಿಮಾದಲ್ಲಿ ಜಪಾನ್ ಜಿ7 ಮಂತ್ರಿಗಳ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಜಪಾನ್ ಸಂಸತ್ತಿನ ಕೆಳಮನೆಯ ಕ್ಷೇತ್ರವೊಂದರ ಉಪ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರುವ ಕಿಶಿಡಾ ಸ್ವಲ್ಪ ಸಮಯದಲ್ಲೇ ಭಾಷಣ ಆರಂಭಿಸಬೇಕಿತ್ತು. ಅಷ್ಟರಲ್ಲಿ ಸ್ಫೋಟ ಸಂಭವಿಸಿದೆ.
“ನಾನು ಘಟನೆಯಿಂದ ದಿಗ್ಭ್ರಮೆಗೊಂಡಿದ್ದೇನೆ. ನನ್ನ ಹೃದಯ ಈಗಲೂ ಜೋರಾಗಿ ಬಡಿದುಕೊಳ್ಳುತ್ತಿದೆ” ಎಂದು ಪ್ರತ್ಯಕ್ಷದರ್ಶಿ ಮಹಿಳೆಯೊಬ್ಬರು ಹೇಳಿದ್ದಾರೆ.
ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಕಾಯಾಮಾ ಪೊಲೀಸರು ಶಂಕಿತನೊಬ್ಬನನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಪೊಲೀಸರು ಯಾವುದೇ ಸ್ಪಷ್ಟೀಕರಣ ನೀಡಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.
ಘಟನೆಯ ಕುರಿತು ಸರ್ಕಾರ, ಪೊಲೀಸ್ ಅಧಿಕಾರಿಗಳು ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ರಾಜಕೀಯ ದ್ವೇಷದ ಕಾರಣಕ್ಕೆ ಈ ದಾಳಿ ನಡೆದಿರಬಹುದು ಎಂದು ಶಂಕಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಶೃಂಗಸಭೆಗೂ ಮುನ್ನ ಜಪಾನ್ ಪ್ರಧಾನಿ ಮೇಲೆ ಈ ದಾಳಿ ನಡೆದಿರುವುದು ಆತಂಕಕ್ಕೆ ಕಾರಣವಾಗಿದ್ದು, ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.
“ಪ್ರಜಾಪ್ರಭುತ್ವದ ದೇಶದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರದ ಸಂದರ್ಭ ನಡೆದ ಈ ದಾಳಿಯು ವಿಷಾದನೀಯ ಮತ್ತು ಅಕ್ಷಮ್ಯ ಅಪರಾಧ” ಎಂದು ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷದ (ಎಲ್ಡಿಪಿ) ಚುನಾವಣಾ ಕಾರ್ಯತಂತ್ರ ಮುಖ್ಯಸ್ಥೆ ಹಿರೊಶಿ ಮರಿಯಾಮಾ ಹೇಳಿದ್ದಾರೆ.
ಶಿಂಜೋ ಅಬೆ ಅವರ ರಾಜಕೀಯ ನಿವೃತ್ತಿ ನಂತರ ಜಪಾನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದ ಫ್ಯೂಮಿಯೋ ಕಿಶಿಡಾ, ಭಾರತ, ಅಮೆರಿಕ, ಆಸ್ಟ್ರೇಲಿಯಾ ಹಾಗೂ ಜಪಾನ್ ಒಳಗೊಂಡ ಕ್ವಾಡ್ ಸಂಘಟನೆಯನ್ನು ಬಲಪಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ.
ಪ್ರಮುಖವಾಗಿ ಇಂಡೋ-ಪೆಸಿಫಿಕ್ ಭಾಗದಲ್ಲಿ ಚೀನಾವನ್ನು ನಿಯಂತ್ರಿಸುವ ಮತ್ತು ಮುಕ್ತ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ, ಕ್ವಾಡ್ ಸಂಘಟನೆಯನ್ನು ರಚನೆ ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ? 35 ಸೀಟು ಗೆಲ್ಲಿಸಿದರೆ ಸರ್ಕಾರ ಪತನಗೊಳಿಸುತ್ತೇವೆ ಎಂದ ಅಮಿತ್ ಶಾ; ನಿಮ್ಮ ಕೆಲಸ ನೋಡಿಕೊಳ್ಳಿ ಎಂದ ಟಿಎಂಸಿ
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಅತ್ಯಂತ ಆತ್ಮೀಯ ಸಂಬಂಧ ಹೊಂದಿರುವ ಫ್ಯೂಮಿಯೋ ಕಿಶಿಡಾ ಅವರು, ಇತ್ತೀಚಿಗಷ್ಟೇ ಭಾರತ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಉಭಯ ದೇಶಗಳ ನಡುವೆ ರಕ್ಷಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಒಡಂಬಡಿಕೆ ಏರ್ಪಟ್ಟಿತ್ತು.
2022ರ ಜುಲೈನಲ್ಲಿ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾತನಾಡುವಾಗ ಮಾಜಿ ಪ್ರಧಾನಿ ಶಿಂಜೋ ಅಬೆ ಅವರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಇದರ ನಂತರ ಜಪಾನ್ ಪ್ರಧಾನಿಗೆ ನೀಡಲಾಗುವ ಭದ್ರತೆಯನ್ನು ಹೆಚ್ಚಿಸಲಾಗಿದೆ.