ವಾಹನ ಸಂಚಾರ ದಟ್ಟಣೆಯಲ್ಲಿ ಕುಖ್ಯಾತಿ ಪಡೆದಿದ್ದ ರಾಜ್ಯ ರಾಜಧಾನಿ ಬೆಂಗಳೂರು ಇದೀಗ ಸಂಚಾರ ವ್ಯವಸ್ಥೆಯಲ್ಲಿ ಗಣನೀಯ ಬದಲಾವಣೆ ಹೊಂದಿದೆ. ಡಚ್ ಸಂಸ್ಥೆಯ ಟಾಮ್ ಬಿಡುಗಡೆ ಮಾಡುವ ಸರ್ವೆ ವರದಿ ಪ್ರಕಾರ ಜಾಗತಿಕ ಸಂಚಾರ ದಟ್ಟಣೆಯ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿದ್ದ ಬೆಂಗಳೂರು ಇದೀಗ ಆರನೇ ಸ್ಥಾನಕ್ಕೆ ಇಳಿದಿದೆ.
“ಬೆಂಗಳೂರಿನ ಸಂಚಾರ ವ್ಯವಸ್ಥೆಯಲ್ಲಿ ಗಣನೀಯ ಬದಲಾವಣೆಯಾಗಿದೆ. ಡಚ್ ಸಂಸ್ಥೆಯ ಟಾಮ್ ಇತ್ತೀಚೆಗೆ 2023 ಸರ್ವೆ ವರದಿ ಬಿಡುಗಡೆ ಮಾಡಿದೆ. ಟಾಮ್ ಸರ್ವೆ ವರದಿ ಪ್ರಕಾರ ಜಾಗತಿಕ ಸಂಚಾರ ದಟ್ಟಣೆ ಶ್ರೇಯಾಂಕದಲ್ಲಿ ಬೆಂಗಳೂರು ಆರನೇ ಸ್ಥಾನಕ್ಕೆ ಇಳಿದಿದೆ” ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಹೇಳಿದರು.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “2022ರಲ್ಲಿ ವಾಹನ ಸಂಚಾರ ದಟ್ಟಣೆಯಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿತ್ತು. ಇದೀಗ, 2023ಕ್ಕೆ ಆರನೇ ಸ್ಥಾನಕ್ಕೆ ಇಳಿದಿದೆ ಎಂದು ಟಾಮ್ ಸಂಸ್ಥೆ ವರದಿ ನೀಡಿದೆ” ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು ನಿಯತ್ರಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ನಗರದ ಜಂಕ್ಷನ್ಗಳಲ್ಲಿ ಸುಗಮ ಸಂಚಾರಕ್ಕೆ ಕರ್ತವ್ಯ ನಿರತ ಸಿಬ್ಬಂದಿ ಅಥವಾ ಅಧಿಕಾರಿಗಳು ಹೆಚ್ಚಿನ ಆದ್ಯತೆ ನೀಡಿದ್ದಾರೆ. ಅಲ್ಲದೇ, ಅತ್ಯಾಧುನಿಕ ಡ್ರೋನ್, ಸಿಸಿಟಿವಿ ಸೇರಿದಂತೆ ಇನ್ನಿತರೆ ಸುಧಾರಿತ ತಂತ್ರಜ್ಞಾನಗಳನ್ನು ಬಳಸಲಾಗಿದೆ” ಎಂದು ವಿವರಿಸಿದರು.
“ಬೆಂಗಳೂರಿನಲ್ಲಿ ಈಗ ನಮ್ಮ ಮೆಟ್ರೋ ಜಾಲ ಸುಧಾರಿಸಿದೆ. ಟ್ರಾಫಿಕ್ ಬಸ್ ಸ್ಟಾಪ್ ಸ್ಥಳಾಂತರ, ಯೂಟರ್ನ್ ಮುಚ್ಚುವಿಕೆ, ಸಿಗ್ನಲ್ ಹಂತ ಬದಲಾವಣೆ ಹೀಗೆ ನಾನಾ ಕ್ರಮಗಳಿಂದ ವಾಹನ ದಟ್ಟಣೆ ಪ್ರಮಾಣ ಕಡಿಮೆಯಾಗಿದೆ. ಪ್ರಯಾಣದ ಸಮಯ ಕಡಿಮೆ ಮಾಡಿದ ಟಾಪ್ 10 ಪಟ್ಟಿಯಲ್ಲಿ ಬೆಂಗಳೂರು ನಂಬರ್ ಒನ್ನಲ್ಲಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ತಂದೆಯನ್ನು ರಕ್ಷಿಸಲು ಕೊಲೆ ಆರೋಪಿಯಾದ ಮಗ: ತಂದೆ-ಮಗನ ಬಂಧನ
ಇಬ್ಬರು ವಂಚಕರ ಬಂಧನ
“ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಿಂದ ಸಬ್ಸಿಡಿ ದರದಲ್ಲಿ ಕಾರು, ಸೈಟ್, ಯುವಕರಿಗೆ ಕೆಲಸ, ವಿಧವೆಯರಿಗೆ ಮಾಸಾಶನ ಮತ್ತು ಪಾಲಿಕೆ ಕೇಂದ್ರ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸ ಕೊಡಿಸುವುದಾಗಿ 60ಕ್ಕೂ ಹೆಚ್ಚು ಜನರಿಂದ ಹಣ ಪಡೆದು ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ” ಎಂದು ಮಾಹಿತಿ ನೀಡಿದರು.
“ಆರೋಪಿಗಳು ಹಣವನ್ನು ನೇರವಾಗಿ ತಮ್ಮ ಅಕೌಂಟ್ಗಳಿಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು. ಆರೋಪಿಗಳು ಸುಮಾರು ₹15ಲಕ್ಷಕ್ಕೂ ಅಧಿಕ ಹಣ ಪಡೆದು ವಂಚನೆ ಮಾಡಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಮುಂದುವರೆದಿದೆ. ಈ ಬಗ್ಗೆ ಉತ್ತರ ವಿಭಾಗ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು” ಎಂದರು.