ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ರಸ್ತೆ ಹಾಗೂ ಪಾದಚಾರಿ ಮಾರ್ಗಗಳಲ್ಲಿ ದೀರ್ಘಕಾಲದಿಂದ ನಿಲುಗಡೆ ಮಾಡಲಾಗಿರುವ ಅಪರಿಚಿತ ಹಾಗೂ ವಾರಸುದಾರರು ಪತ್ತೆಯಾಗದ ವಾಹನಗಳನ್ನು ಹರಾಜು ಹಾಕಲು ಹೈಕೋರ್ಟ್ ಕಾಲಮಿತಿ ನಿಗದಿಪಡಿಸಿ ಗುರುವಾರ ಮಧ್ಯಂತರ ಆದೇಶ ಹೊರಡಿಸಿದೆ.
ತ್ಯಾಗರಾಜ ನಗರದ ಸ್ಥಳೀಯ ನಿವಾಸಿ ಪ್ರಶಾಂತ್ ರಾವ್ ಅವರು ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಬೇಕು ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಜಂಟಿ ಪೊಲೀಸ್ ಆಯುಕ್ತರು (ಸಂಚಾರ) ಅವರು ಸಲ್ಲಿಸಿದ ಅಫಿಡವಿಟ್ಗಳನ್ನು ಪರಿಗಣಿಸಿ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಹಾಗೂ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿ ಈ ನಿರ್ದೇಶನ ನೀಡಿದೆ.
ನಗರದಲ್ಲಿನ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಹಾಗೂ ರಸ್ತೆಗಳಲ್ಲಿ ಬಿಟ್ಟು ಹೋಗಿರುವ ಅಪರಿಚಿತ, ವಾರಸುದಾರರು ಪತ್ತೆಯಾಗದ ವಾಹನಗಳ ಸ್ಥಳಾಂತರ, ಅವುಗಳ ಹರಾಜು ಹಾಕುವ ಸಂಬಂಧ 2024ರ ಜನವರಿ 31ರಂದು ಬಿಬಿಎಂಪಿ ಹಾಗೂ ಪೊಲೀಸ್ ಅಧಿಕಾರಿಗಳ ಜಂಟಿ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯದ ಪ್ರಮಾಣ ಪತ್ರಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ವಿಚಾರಣೆಯ ಸಂದರ್ಭದಲ್ಲಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು, “ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಪೊಲೀಸರು ರಸ್ತೆ ಮತ್ತು ಫುಟ್ಪಾತ್ಗಳಲ್ಲಿ ವಾಹನಗಳನ್ನು ನಿಲ್ಲಿಸುವ ಸಮಸ್ಯೆಯನ್ನು ಪರಿಹರಿಸಲು ಸಹಯೋಗದ ಪ್ರಯತ್ನ ನಡೆಸುತ್ತಿದ್ದಾರೆ” ಎಂದು ನ್ಯಾಯಾಲಯಕ್ಕೆ ತಿಳಿಸಿದರು.
“ಬಿಟ್ಟು ಹೋದ ವಾಹನಗಳನ್ನು ಎಳೆದುಕೊಂಡು ಹೋಗಿ ಗೊತ್ತುಪಡಿಸಿದ ಸ್ಥಳದಲ್ಲಿ ಸಂಗ್ರಹಿಸಲಾಗುತ್ತಿದೆ. ಆರ್ಟಿಒ ಮತ್ತು ಪೊಲೀಸ್ ಚಾನೆಲ್ಗಳ ಮೂಲಕ ಅವುಗಳ ಮಾಲೀಕರನ್ನು ಸಂಪರ್ಕಿಸುವ ಪ್ರಯತ್ನಗಳು ನಡೆಯುತ್ತಿವೆ. ಕಾನೂನಿನ ಪ್ರಕಾರ ಅಂತಹ ವಾಹನಗಳನ್ನು ಹರಾಜು ಮಾಡಲು ಅಥವಾ ಗುಜರಿಗೆ ಹಾಕಲು ನ್ಯಾಯವ್ಯಾಪ್ತಿಯ ಮ್ಯಾಜಿಸ್ಟ್ರೇಟ್ಗಳಿಂದ ಅನುಮತಿ ಪಡೆಯಲಾಗುತ್ತದೆ” ಎಂದು ಅವರು ಹೇಳಿದರು.
“15 ವರ್ಷ ಮೀರಿದ ವಾಹನಗಳನ್ನು 30 ದಿನಗಳ ನಂತರ ಕಾರ್ಯವಿಧಾನವನ್ನು ಅನುಸರಿಸಿ ನ್ಯಾಯವ್ಯಾಪ್ತಿಯ ಮ್ಯಾಜಿಸ್ಟ್ರೇಟ್ನಿಂದ ಅನುಮತಿಯನ್ನು ತೆಗೆದುಕೊಳ್ಳುವ ಮೂಲಕ ವಿಲೇವಾರಿ ಮಾಡಬಹುದು. ಅದೇ ರೀತಿ, 1-5 ವರ್ಷದೊಳಗಿನ ವಾಹನಗಳನ್ನು ಮೂರು ತಿಂಗಳಲ್ಲಿ ಹಾಗೂ 5-15 ವರ್ಷಗಳ ನಡುವಿನ ವಾಹನಗಳನ್ನು ಎರಡು ತಿಂಗಳೊಳಗೆ ಹರಾಜು ಹಾಕಬಹುದು. ವಿಷಯದ ಬೆಳವಣಿಗೆಯ ಆಧಾರದ ಮೇಲೆ ಸರ್ಕಾರವು ಸೂಕ್ತ ನಿರ್ದೇಶನಗಳನ್ನು ಪಡೆಯಬಹುದು” ಎಂದು ಪೀಠ ಹೇಳಿದೆ.
ವಾರಸುದಾರರು ಪತ್ತೆಯಾಗದ ಸಂದರ್ಭದಲ್ಲಿ ಸಂಬಂಧಿಸಿದ ಮ್ಯಾಜಿಸ್ಟ್ರೇಟ್ ಕೋರ್ಟ್ನಿಂದ ಅನುಮತಿ ಪಡೆದು ಅಂತಹ ವಾಹನಗಳನ್ನು ಹರಾಜು ಹಾಕಲಾಗುತ್ತದೆ. ಗೆಜೆಟ್ ಪ್ರಕಟಣೆಯ ದಿನಾಂಕದಿಂದ ಆರು ತಿಂಗಳ ಅವಧಿಯಲ್ಲಿ ವಾಹನಗಳನ್ನು ಹರಾಜು ಹಾಕಲು 2023ರ ಜುಲೈ 11ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸಿದೆ. ಆದರೆ, ರಾಜ್ಯ ಸರ್ಕಾರವು ಆಡಳಿತಾತ್ಮಕ ಕಾಳಜಿಯನ್ನು ಉಲ್ಲೇಖಿಸಿ ಈ ಕಾಲಮಿತಿಯನ್ನು ಕಡಿಮೆ ಮಾಡಲು ನ್ಯಾಯಾಲಯಕ್ಕೆ ಮನವಿ ಮಾಡಿದೆ.
ಫುಟ್ಪಾತ್ಗಳು, ಸಾರ್ವಜನಿಕ ಮಾರ್ಗಗಳು ಮತ್ತು ರಸ್ತೆಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುವ ವಾಹನಗಳನ್ನು ಗುರುತಿಸಲು ತಂಡಗಳನ್ನು ರಚಿಸುವ ಯೋಜನೆಗಳ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಫಿಡವಿಟ್ನಲ್ಲಿ ಉಲ್ಲೇಖಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪ್ರೀತಿಸಿದ ಯುವತಿಗೆ ಮತ್ತೊಬ್ಬನೊಂದಿಗೆ ವಿವಾಹೇತರ ಸಂಬಂಧ; ಮನನೊಂದ ಯುವಕ ಆತ್ಮಹತ್ಯೆ
ಯಾವುದೇ ವಾಹನವನ್ನು 15 ದಿನಗಳಿಗಿಂತ ಹೆಚ್ಚು ಕಾಲ ಫುಟ್ಪಾತ್ಗಳು ಅಥವಾ ರಸ್ತೆಗಳಲ್ಲಿ ನಿಲ್ಲಿಸಿದರೆ ಅದನ್ನು ಕೈಬಿಡಲಾಗಿದೆ ಎಂದು ಪರಿಗಣಿಸಲಾಗುತ್ತದೆ. ವಾರಸುದಾರರಿಲ್ಲದ ವಾಹನ ಮತ್ತು ಅದು ಇರುವ ಪ್ರದೇಶವನ್ನು ಪತ್ತೆಹಚ್ಚಲು ಗುರುತು ತಂಡ ರಚಿಸಲಾಗಿದೆ. ಈ ತಂಡವು ಅಂತಹ ವಾಹನಗಳನ್ನು ಮಹಜರು ಮಾಡಿದ ನಂತರ ಸಂಗ್ರಹಣಾ ಸ್ಥಳಕ್ಕೆ ಟೋಯಿಂಗ್ ಮಾಡಲಿದೆ.
ಪ್ರಾದೇಶಿಕ ಸಾರಿಗೆ ಇಲಾಖೆಯನ್ನು ಸಂಪರ್ಕಿಸಿ ಆಯಾ ವಾಹನಗಳ ಮಾಲೀಕರು ಅವರ ವಿಳಾಸ ಹಾಗೂ ಅವುಗಳ ವಿರುದ್ಧದ ಪ್ರಕರಣಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ. ನೋಂದಾಯಿತ ಮಾಲೀಕರಿಗೆ ದಂಡವನ್ನು ವಿಧಿಸಿ, ಪಾವತಿಸುವಂತೆ ಸೂಚಿಸಲಾಗುತ್ತದೆ. ದಂಡವನ್ನು ಪಾವತಿ ಮಾಡದಿದ್ದರೇ, ಹರಾಜು ಹಾಕಲು ಅಥವಾ ಗುಜರಿಗೆ ಹಾಕುವ ಮೂಲಕ ವಿಲೇವಾರಿ ಮಾಡಲಾಗುತ್ತದೆ.
ಪ್ರತ್ಯೇಕ ಅಫಿಡವಿಟ್ನಲ್ಲಿ, ಬೆಂಗಳೂರು ನಗರ ಜಂಟಿ ಆಯುಕ್ತ (ಸಂಚಾರ), ಎಂ.ಎನ್.ಅನುಚೇತ್ ಅವರು ಬೆಂಗಳೂರು ಉತ್ತರ ತಾಲ್ಲೂಕಿನ ಮಲ್ಲಸಂದ್ರ ಗ್ರಾಮದಲ್ಲಿ ಎರಡು ಎಕರೆ ಭೂಮಿಯನ್ನು ಹಕ್ಕು ಪಡೆಯದ ಮತ್ತು ಕೈಬಿಟ್ಟ ವಾಹನಗಳನ್ನು ನಿಲ್ಲಿಸಲು ಗುರುತಿಸಲಾಗಿದೆ. ಫುಟ್ಪಾತ್ ಪಾರ್ಕಿಂಗ್ ಮತ್ತು ರೈಡಿಂಗ್ಗಾಗಿ ಎಷ್ಟು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂಬುದನ್ನು ಅಫಿಡವಿಟ್ನಲ್ಲಿ ವಿವರಿಸಲಾಗಿದೆ.
ಪಾದಚಾರಿ ಮಾರ್ಗಗಳಲ್ಲಿ ವಾಹನ ನಿಲುಗಡೆ ಮಾಡಿದ ಸಂಬಂಧ 2021ರಲ್ಲಿ 74,851, 2022ರಲ್ಲಿ 1,53,983, 2023ರಲ್ಲಿ 78,238 ಮತ್ತು 2024ರಲ್ಲಿ 479 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪಾದಚಾರಿ ಮಾರ್ಗಗಳಲ್ಲಿ ವಾಹನ ಚಲಾಯಿಸಿದ್ದಕ್ಕೆ ಸಂಬಂಧಿಸಿದಂತೆ 2021ರಲ್ಲಿ 8,422, 2022ರಲ್ಲಿ 18,144, 2023ರಲ್ಲಿ 9,547 2024ರಲ್ಲಿ 113 ಪ್ರಕರಣ ದಾಖಲಿಸಲಾಗಿದೆ.