ಬೀದರ ಉತ್ತರ ವಿಭಾನಸಭಾ ಕ್ಷೇತ್ರಕ್ಕೆ ಪ್ರಸಕ್ತ ಸಾಲಿನಲ್ಲಿ ತಂದಿರುವ ಅನುದಾನ, ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಣೆ ನೀಡಲು ಸಚಿವ ರಹೀಂಖಾನ್ ಅವರಿಗೆ ಜಿಲ್ಲಾ ಬಿಜೆಪಿ ಘಟಕ ಒತ್ತಾಯಿಸಿದೆ.
ಜಿಲ್ಲಾ ಭಾರತೀಯ ಜನತಾ ಪಾರ್ಟಿ ವತಿಯಿಂದ ʼಮತದಾರರಿಗೆ ಉತ್ತರಿಸಿʼ ಅಭಿಯಾನದಡಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ನೇತೃತ್ವದಲ್ಲಿ ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಅವರ ಕಚೇರಿಗೆ ತೆರಳಿ 15 ಪ್ರಶ್ನೆಗಳಿಗೆ ಉತ್ತರಿಸಲು ಒತ್ತಾಯಿಸಿದರು. ಸಚಿವರ ಅನುಪಸ್ಥಿತಿಯಲ್ಲಿ ಸಚಿವರ ಆಪ್ತ ಸಹಾಯಕನಿಗೆ ಪತ್ರ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಹುಡಗಿ ಮಾತನಾಡಿ,”ಸಚಿವರಾದ ರಹೀಂ ಖಾನ್ ಅವರಿಗೆ ತಾವು ಬೀದರ್ ಉತ್ತರ ಕ್ಷೇತ್ರದ ಶಾಸಕರಾಗಿ ಒಂದು ವರ್ಷ ಪೂರೈಸುವ ಹೊಸ್ತಿಲಲ್ಲಿದ್ದೀರಿ, ನಮಗೆ ತಿಳಿದಂತೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಯಾವುದೇ ಅಭಿವೃದ್ಧಿ ಕಾರ್ಯಗಳು ಆರಂಭವಾಗಿಲ್ಲ. ಮತ ನೀಡಿದ ಮತದಾರರಿಗೆ ಕ್ಷೇತ್ರದ ಅಭಿವೃದ್ಧಿಯ ಕುರಿತು ಮಾಹಿತಿ ಒದಗಿಸಬೇಕಾಗಿರುವುದು ನಿಮ್ಮ ಕರ್ತವ್ಯವಾಗಿದ್ದು, ಮತದಾರರ ಧ್ವನಿಯಾಗಿ ಈ ಕೆಳಕಂಡ ಪ್ರಶ್ನೆಗಳಿಗೆ ತಾವು ಮಾಧ್ಯಮದ ಮೂಲಕ ಉತ್ತರಿಸಬೇಕೆಂದು 15 ಪ್ರಶ್ನೆಗಳು ಮುಂದಿಟ್ಟು ಉತ್ತರಿಸಿ” ಎಂದು ಒತ್ತಾಯಿಸಿದರು.
ಬೀದರ್ ಉತ್ತರ ವಿಧಾನ ಸಭಾ ಶಾಸಕರಾದ ನಂತರ ಕ್ಷೇತ್ರಕ್ಕೆ ತಂದ ಅನುದಾನ ಎಷ್ಟು, ಇದುವರೆಗೂ ಬಿಡುಗಡೆಯಾಗಿರುವ ಅನುದಾನ ಎಷ್ಟು? ಅನುದಾನ ಬಿಡುಗಡೆಗೊಂಡಿದ್ದರೆ ಅದರಿಂದ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಯಾವುವು? ಕ್ಷೇತ್ರದ ಅಭಿವೃದ್ಧಿಗಾಗಿ ತಾವು ರೂಪಿಸಿರುವ ಹಾಗೂ ತಾವು ಚುನಾವಣಾ ಸಂದರ್ಭದಲ್ಲಿ ತಾವು ಭರವಸೆಗಳಿಗೆ ಅನುಗುಣವಾಗಿ ರೂಪಿಸಿರುವ ಯೋಜನೆ ಹಾಗೂ ಅದು ಅನುಷ್ಠಾನದ ವಿವರ ನೀಡಿ. ಕ್ಷೇತ್ರದಲ್ಲಿ ಬರದ ದವಡೆಗೆ ಸಿಲುಕಿ ನಲುಗಿರುವ ರೈತರಿಗೆ ಸರ್ಕಾರದಿಂದ ಬಿಡುಗಡೆ ಮಾಡಿಸಿರುವ ಪರಿಹಾರ ಎಷ್ಟು? ಪರಿಹಾರ ಒದಗಿಸಿಕೊಟ್ಟಿದ್ದರೆ ಅದರ ವಿವರವನ್ನು ಒದಗಿಸಿ. ಕ್ಷೇತ್ರದಲ್ಲಿ ನಿರುದ್ಯೋಗಿ ನಿರ್ಮೂಲನೆಗೆ ಸ್ಪಷ್ಟಿಸಲಾಗಿರುವ ಉದ್ಯೋಗಗಳ ವಿವರ. ಶೈಕ್ಷಣಿಕ ಅಭಿವೃದ್ಧಿಯಲ್ಲಿ ತಾವು ಕೈಗೊಂಡ ಕ್ರಮಗಳೇನು? ಶೈಕ್ಷಣಿಕ ಬಡ ಜನರ ಕೈಗೂ ಎಟಕುವ ಉತ್ತಮ ದರ್ಜೆಯ ಆರೋಗ್ಯ ಸೇವೆ ಒದಗಿಸಲು ರೂಪಿಸಿರುವ ಹೊಸ ಯೋಜನೆಗಳು ಯಾವುವು? ಕ್ಷೇತ್ರದಲ್ಲಿ ಈ ವರೆಗೂ ಹೊಸದಾಗಿ ಎಷ್ಟು ಕಿ.ಮೀ. ನಿರ್ಮಿಸಲಾಗಿದೆ? ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆಗಳನ್ನು ಪರಿಪೂರ್ಣಗೊಳಿಸಲು ಹೊಸದಾಗಿ ಕೈಗೊಂಡ ಕಾಮಗಾರಿಗಳ ವಿವರ. ಬೀದರ ನಗರಸಭೆಯಲ್ಲಿ ಪ್ರಸ್ತುತ ಆದ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಣೆ ನೀಡಬೇಕು ಸೇರಿದಂತೆ 15 ಪ್ರಶ್ನೆಗಳು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ಬಿಜೆಪಿ ಕೇಳಲಾದ ಪ್ರಶ್ನೆಗಳಿಗೆ ವಿವರವಾದ ದಾಖಲೆ ಸಮೇತ ತಾವು ಮಾಧ್ಯಮದ ಮೂಲಕ ತಮ್ಮನ್ನು ಗೆಲ್ಲಿಸಿದ ಮತದಾರ ಬಂಧುಗಳಿಗೆ ಉತ್ತರಿಸಬೇಕು. ನಿಮ್ಮಿಂದ ಮಾಧ್ಯಮದ ಮೂಲಕ ಅಭಿವೃದ್ಧಿಯ ಕಾರ್ಯಗಳ ವಿವರಣೆಯನ್ನು ಮತದಾರರಿಗೆ ಒದಗಿಸಲು ಸಾಧ್ಯವಾಗದಿದ್ದಲ್ಲಿ ತಾವು ಅಭಿವೃದ್ದಿ ಮಾಡಿರುವ ದಾಖಲೆಗಳನ್ನು ನಮಗೆ ಒದಗಿಸಿ ನಾವು ಅದನ್ನು ಮಾಧ್ಯಮದ ಮೂಲಕ ಕ್ಷೇತ್ರದ ಮತದಾರರಿಗೆ ಒದಗಿಸುತ್ತೇವೆ” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಮಾದ; ಪ್ರಯಾಣಿಕರ ʼದಾರಿ ತಪ್ಪಿಸುವʼ ನಾಮಫಲಕ!
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ರಘುನಾಥರಾವ ಮಲ್ಕಾಪುರೆ, ಬೀದರ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರದೆ , ಬುಡಾ ಮಾಜಿ ಅಧ್ಯಕ್ಷ ಬಾಬು ವಾಲಿ, ಕಲಬುರಗಿ ವಿಭಾಗೀಯ ಸಂಘಟನಾ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ, ಕುಶಾಲ ಪಾಟೀಲ ಗಾದಗಿ, ಮಹೇಶ ಪಾಲಂ, ರಾಜಕುಮಾರ ಚಿದ್ರಿ , ಮಹೇಶ್ವರ ಸ್ವಾಮಿ, ಹಣುಮಂತ ಬುಳ್ಳಾ, ಸಂಗಮೇಶ ನಾಸಿಗರ, ರಾಜೇಂದ್ರ ಪುಜಾರಿ, ನಿತಿನ್ ನವಲ್ಕೆರೆ, ರಾಜಶೇಖರ ನಾಗಮೂರ್ತಿ, ಅಶೋಕ ಹೊಕ್ರಾಣೆ, ಜೈಕುಮಾರ ಕಾಂಗೆ, ನರೇಶ ಗೌಳಿ, ಬಸವರಾಜ ಜೋಜನಾ, ರಾಜುಕುಮಾರ ಪಾಟೀಲ ನೆಮತಾಬಾದ, ಗಣೇಶ ಭೋಸಲೆ, ರೋಷನ್ ವರ್ಮಾ, ವೀರೇಶ ಸ್ವಾಮಿ, ಶ್ರೀನಿವಾಸ ಚೌಧರಿ ಸೇರಿದಂತೆ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.