ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕವಿತಾಳ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ವ್ಯಾಪ್ತಿಯಲ್ಲಿ ಬೆಂಕಿ ಅವಘಡದ ಪ್ರಕರಣಗಳು ಹೆಚ್ಚುತ್ತಿದು, ಸಕಾಲಕ್ಕೆ ಅಗ್ನಿ ಶಾಮಕ ವಾಹನದ ಸಹಾಯ ಸಿಗದೇ ಬಹುತೇಕ ಬೆಂಕಿ ಪ್ರರಕಣಗಳಲ್ಲಿ ಭಾರಿ ನಷ್ಟವಾಗುತ್ತಿದ್ದು ಅಗ್ನಿಶಾಮಕ ಠಾಣೆಗೆ ಸಾರ್ವಜನಿಕರು ಬೇಡಿಕೆ ಇಟ್ಟಿದ್ದಾರೆ.
ಸದ್ಯದ ಪೊಲೀಸ್ ಠಾಣಾ ವ್ಯಾಪ್ತಿಗೆ ಮಾನ್ವಿ, ಸಿರವಾರ ಮತ್ತು ಮಸ್ಕಿ ತಾಲೂಕಿನ ಸುಮಾರು 52 ಹಳ್ಳಿಗಳು ಮತ್ತು 19 ಕ್ಯಾಂಪ್ಗಳು ಬರುತ್ತವೆ. ನೂತನ ತಾಲೂಕು ರಚನೆಯಾಗಿ 7 ವರ್ಷಗಳು ಕಳೆದರೂ ಮಸ್ಕಿ ಮತ್ತು ಸಿರವಾರ ಪಟ್ಟಣಗಳಲ್ಲಿ ಅಗ್ನಿ ಶಾಮಕ ಠಾಣೆ ತೆರೆಯಲಾಗಿಲ್ಲ.
ಆದ್ದರಿಂದ, ಈ ಭಾಗದಲ್ಲಿ ಬೆಂಕಿ ಅವಘಡ ಸಂಭವಿಸಿದರೆ, ಲಿಂಗಸುಗೂರು ಪಟ್ಟಣದಿಂದಲೇ ವಾಹನ ಬರಬೇಕು. ಲಿಂಗಸುಗೂರುನಿಂದ ಕವಿತಾಳ 30 ಕಿ.ಮೀ. ದೂರದಲ್ಲಿದ್ದು, ಇಲ್ಲಿಂದ ಸುತ್ತಮುತ್ತಲಿನ ಹಳ್ಳಿಗಳಿಗೆ ತೆರಳಬೇಕಾದರೆ ಮತ್ತೆ 30 ಕಿ.ಮೀ. ಕ್ರಮಿಸಬೇಕು. ಹದಗೆಟ್ಟ ರಸ್ತೆಗಳು ಸೇರಿದಂತೆ ವಿವಿಧ ಕಾರಣಗಳಿಂದ ಅಗ್ನಿ ಶಾಮಕ ವಾಹನ ಘಟನಾ ಸ್ಥಳಕ್ಕೆ ತಲುಪಲು ಸಮಯವಾಗುತ್ತದೆ.
ಕವಿತಾಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 2023-24ಈ ಒಂದು ವರ್ಷದಲ್ಲಿ 24 ಬೆಂಕಿ ಅವಘಡಗಳು ಸಂಭವಿಸಿರುವ ಬಗ್ಗೆ ಅಗ್ನಿ ಶಾಮಕ ಠಾಣೆಯಲ್ಲಿ ಮಾಹಿತಿ ಇದೆ.
ಕವಿತಾಳದಲ್ಲಿ ಈಚೆಗೆ ಅಂದಾಜು 16 ಟ್ರ್ಯಾಕ್ಟರ್ನಷ್ಟು ಭತ್ತದ ಹುಲ್ಲಿನ ಬಣವಿಗೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟುಹೋಗಿದೆ. ಬಹುತೇಕ ಪ್ರಕರಣಗಳಲ್ಲಿ ಬೆಂಕಿ ಸಂಪೂರ್ಣ ಆವರಿಸಿದ ನಂತರವೇ ವಾಹನಗಳು ಸ್ಥಳಕ್ಕೆ ಆಗಮಿಸಿವೆ.
ತುಂಗಭದ್ರ ಎಡದಂಡೆ ಕಾಲುವೆಯ ನೀರನ್ನು ಬಳಕೆ ಮಾಡಲು ಅವಕಾಶವಿದ್ದು ಪಟ್ಟಣದಲ್ಲಿಯೇ ಅಗ್ನಿ ಶಾಮಕ ಠಾಣೆಯಾದರೆ, ಸುತ್ತಮುತ್ತಲಿನ 30 ಕಿ.ಮೀ. ವ್ಯಾಪ್ತಿಯಲ್ಲಿ ಸಂಭವಿಸುವ ಅವಘಡಗಳನ್ನು ನಿಯಂತ್ರಿಸಬಹುದು. ಆದ್ದರಿಂದ ಕವಿತಾಳದಲ್ಲಿ ಅಗ್ನಿ ಶಾಮಕ ಠಾಣೆ ತೆರೆಯಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.