- ಸಿಬಿಐ ಸಲ್ಲಿಸಿದ್ದ ದೋಷಾರೋಪ ಪಟ್ಟಿಯಲ್ಲಿ ಭಾಸ್ಕರ್ ರೆಡ್ಡಿ ಹೆಸರು
- ಈ ಮುನ್ನ ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣ ತನಿಖೆ ನಡೆಸಿದ್ದ ಎಸ್ಐಟಿ
ಮಾಜಿ ಸಂಸದ ವಿವೇಕಾನಂದ ರೆಡ್ಡಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಚಿಕ್ಕಪ್ಪ ವೈ. ಎಸ್ ಭಾಸ್ಕರ್ ರೆಡ್ಡಿ ಅವರನ್ನು ಭಾನುವಾರ (ಏಪ್ರಿಲ್ 16) ಬಂಧಿಸಿದ್ದಾರೆ.
ಹತ್ಯೆಯಾಗಿದ್ದ ವಿವೇಕಾನಂದ ರೆಡ್ಡಿ ಸಹ ಜಗನ್ ಮೋಹನ್ ರೆಡ್ಡಿ ಅವರ ಚಿಕ್ಕಪ್ಪನಾಗಿದ್ದ. ಅವರು ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ರಾಜಶೇಖರ್ ರೆಡ್ಡಿ ಅವರ ಸಹೋದರ.
ಕಡಪಾದ ಕಚೇರಿಯಿಂದ ಸಿಬಿಐ ಭಾಸ್ಕರ್ ರೆಡ್ಡಿ ಅವರನ್ನು ಬಂಧಿಸಿದೆ. ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 120ಬಿ (ಪಿತೂರಿ), 302 (ಕೊಲೆ), 201 (ತನ್ನ ವಿರುದ್ಧದ ಸಾಕ್ಷ್ಯ ನಾಶಪಡಿಸಿದ ಆರೋಪ) ಮೂಲಕ ಪ್ರಕರಣ ದಾಖಲಾಗಿದೆ.
2019ರ ಮಾರ್ಚ್ 15 ರಂದು ವಿವೇಕಾನಂದ ರೆಡ್ಡಿ ಅವರು ಆಂಧ್ರ ಪ್ರದೇಶದ ಪುಲಿವೆಂದುಲ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲೇ ಹತ್ಯೆಯಾಗಿದ್ದರು. ರಾಜ್ಯ ವಿಧಾನಸಭಾ ಚುನಾವಣೆಗೂ ಕೆಲ ದಿನಗಳ ಹಿಂದೆ ಈ ಘಟನೆ ನಡೆದಿತ್ತು.
ರಾಜ್ಯದ ಅಪರಾಧ ತನಿಖಾ ದಳದ ವಿಶೇಷ ತನಿಖಾ ತಂಡ (ಎಸ್ಐಟಿ) ಈ ಪ್ರಕರಣದ ಪ್ರಾಥಮಿಕ ವಿಚಾರಣೆ ನಡೆಸಿತ್ತು. ನಂತರ 2020ರ ಜುಲೈನಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಸಿಬಿಐ, ಇಡಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಮುಂದಾದ ಕೇಜ್ರಿವಾಲ್ ಸರ್ಕಾರ
ಈ ಕುರಿತು ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಇದರಲ್ಲಿ ಭಾಸ್ಕರ್ ರೆಡ್ಡಿ ಅವರನ್ನು ಪ್ರಮುಖ ಆರೋಪಿಯಾಗಿ ಹೆಸರಿಸಿತ್ತು.
ಹತ್ಯೆಯಾದ ವಿವೇಕಾನಂದ ರೆಡ್ಡಿ ಅವರು ಕಡಪಾ ಲೋಕಸಭೆಯಿಂದ ಹಾಲಿ ಸಂಸದನಾಗಿರುವ ಅವಿನಾಶ್ ರೆಡ್ಡಿ (ಅವಿನಾಶ್ ರೆಡ್ಡಿ ಈಗ ಬಂಧಿತನಾಗಿರುವ ಭಾಸ್ಕರ್ ರೆಡ್ಡಿ ಅವರ ಪುತ್ರ) ಬದಲಿಗೆ ತನಗೆ ಅಥವಾ ವೈ.ಎಸ್ ಶರ್ಮಿಳಾ (ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ) ಅಥವಾ ವೈ.ಎಸ್ ವಿಜಯಮ್ಮ (ಜಗನ್ ಮೋಹನ್ ರೆಡ್ಡಿ ಅವರ ತಾಯಿ) ಅವರಿಗೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಸಿಬಿಐ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.