ಕೃಷಿಗೆ ಪೂರಕವಾದ ರೂಢಿಗತ, ನಕಾಶೆ ದಾರಿಗಳನ್ನು ಒತ್ತುವರಿ ಮಾಡಿಕೊಂಡಿದ್ದಲ್ಲಿ, ಅವುಗಳನ್ನು ಬಿಡಿಸಿಕೊಡುವ ಮೂಲಕ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಸಾಗಣೆ ಮಾಡಲು ಅನುಕೂಲ ಕಲ್ಪಿಸುವುದು ಎಲ್ಲ ತಹಶೀಲ್ದಾರರ ಜವಾಬ್ದಾರಿ ಎಂದು ದಾವಣಗೆರೆ ಜಿಲ್ಲಾಧಿಕಾರಿ ಎಂ.ವಿ ವೆಂಕಟೇಶ್ ತಿಳಿಸಿದರು.
ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಂದಾಯ ಅಧಿಕಾರಿಗಳು ಹಾಗೂ ರೈತ ಮುಖಂಡರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ರೈತಸ್ನೇಹಿಯಾಗಿ ಕೆಲಸ ಮಾಡಲು ಸರ್ಕಾರ ಹೊರಡಿಸಿರುವ ಸುತ್ತೋಲೆಯಂತೆ ರೂಢಿಗತ, ನಕಾಶೆಗಳಲ್ಲಿ ರಸ್ತೆಗಳಿದ್ದು, ಅವುಗಳನ್ನು ಯಾರಾದರೂ ಮುಚ್ಚಿದ್ದರೆ, ಅಂತಹ ದಾರಿಯನ್ನು ಬಿಡಿಸಿಕೊಡುವ ಮೂಲಕ ರೈತರು ತಮ್ಮ ಹೊಲಗಳಿಗೆ ಹೋಗಲು ಅನುಕೂಲ ಕಲ್ಪಿಸಬೇಕು. ರೈತರು ಬೆಳೆದ ಬೆಳೆಗಳನ್ನು ಸಕಾಲದಲ್ಲಿ ಕಟಾವು ಮಾಡಿ ಹೊರ ತರದಿದ್ದಲ್ಲಿ ಹಾಳಾಗುವ ಸಂಭವವಿರುತ್ತದೆ. ಆದ್ದರಿಂದ ಸರ್ಕಾರದ ಸುತ್ತೋಲೆಯ ಮೂಲಕ ನಕಾಶೆಯಲ್ಲಿ ಇಲ್ಲದ ದಾರಿ ರೂಢಿಗತವಾಗಿದ್ದಲ್ಲಿ, ಅದನ್ನು ದಾರಿ ಎಂದು ಪರಿಗಣಿಸಿ ಯಾರಾದರೂ ಇದಕ್ಕೆ ಅಡ್ಡಿಪಡಿಸಿದಲ್ಲಿ ಇದನ್ನು ಬಿಡಿಸಿಕೊಡುವ ಜವಾಬ್ದಾರಿ ಕಂದಾಯ ಇಲಾಖೆ ಅಧಿಕಾರಿಗಳದ್ದಾಗಿರುತ್ತದೆ. ನಕಾಶೆ ದಾರಿಯನ್ನು ಯಾರಾದರೂ ಒತ್ತುವರಿ ಮಾಡಿಕೊಂಡಿದ್ದಲ್ಲಿ ಕೂಡಲೆ ಆ ದಾರಿಯನ್ನು ತೆರವು ಮಾಡಿಸುವ ಮೂಲಕ ಜನರು ಓಡಾಡಲು ಅವಕಾಶ ಕಲ್ಪಿಸಬೇಕು” ಎಂದರು.
“ರೈತರು ತಮ್ಮ ಜಮೀನುಗಳಿಗೆ ಹೋಗಲು ರೂಢಿಗತ, ನಕಾಶೆ ದಾರಿ ಇಲ್ಲದ ಕಾರಣ ಅನೇಕ ಸಮಸ್ಯೆ ಎದುರಿಸುತ್ತಿರುವುದನ್ನು ಮನಗಂಡು ಸುತ್ತೋಲೆಯ ಮೂಲಕ ಪರಿಹರಿಸುವ ಕ್ರಮಗಳ ಬಗ್ಗೆ ವಿವರಿಸಲಾಗಿದೆ. ಯಾವುದೇ ದೂರು ರೈತರಿಂದ ಬಂದಲ್ಲಿ ಕೂಡಲೇ ಕ್ರಮಕ್ಕೆ ಮುಂದಾಗಬೇಕು” ಎಂದು ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದರು.
“ಬಗರ್ ಹುಕುಂ ಅಡಿ ಜಮೀನು ಮಂಜೂರು ಮಾಡಲು ಮಾಯಕೊಂಡ ಕ್ಷೇತ್ರ ಹೊರತುಪಡಿಸಿ ಉಳಿದ ಎಲ್ಲ ತಾಲೂಕುಗಳಲ್ಲಿ ಬಗರ್ ಹುಕುಂ ಸಮಿತಿಗಳನ್ನು ರಚಿಸಲಾಗಿದೆ. ಎಲ್ಲ ತಾಲೂಕುಗಳಲ್ಲಿ ಭೂ ಮಂಜೂರಾತಿಗೆ ನಮೂನೆ-57ರಲ್ಲಿ ಸಲ್ಲಿಸಿದ ಅರ್ಜಿಗಳ ಪರಿಶೀಲನೆ ಮಾಡಲು ಸಮಿತಿ ಕಾರ್ಯಾರಂಭ ಮಾಡಬೇಕಾಗಿದೆ. ಈ ಹಿಂದಿಗಿಂತ ಈಗ ಡಿಜಿಟೆಲ್ ಮಾದರಿಯಲ್ಲಿ ಭೂ ಮಂಜೂರಾತಿಗೆ ಕ್ರಮ ವಹಿಸಲಾಗುತ್ತಿದೆ” ಎಂದರು.
“ಸಾಗುವಳಿ ಮಾಡಲಾಗುತ್ತಿರುವ ಜಮೀನಿಗೆ ಜಿಯೋಫೆನ್ಸಿಂಗ್, ಎಷ್ಟು ವರ್ಷಗಳಿಂದ ಸಾಗುವಳಿ ಮಾಡಲಾಗುತ್ತಿದೆ ಎಂಬ ಸ್ಯಾಟಲೈಟ್ ಛಾಯಾಚಿತ್ರ, ಸರ್ವೆ ಇಲಾಖೆಯಿಂದ ಸಾಗುವಳಿ ಭೂಮಿಗೆ ಸ್ಕೆಚ್ ಪಡೆದು ಸಮಿತಿಯಲ್ಲಿ ಪರಿಶೀಲನೆ ಮಾಡಿದ ನಂತರ ಭೂ ಮಂಜೂರಾತಿ ಮಾಡಲು ನಿಯಮಾವಳಿ ರೂಪಿಸಲಾಗಿದೆ. ಸಮಿತಿ ಸಭೆಯ ನಡಾವಳಿಯನ್ನು ದಾಖಲಿಸುವಾಗ ಡಿಜಿಟಲ್ ಮಾದರಿಯಲ್ಲಿ ದಾಖಲಿಸುವ ಮೂಲಕ ಸಭೆಯಲ್ಲಿ ಭಾಗವಹಿಸುವ ಸದಸ್ಯರ ಹಾಜರಾತಿಯನ್ನು ಬಯೋಮೆಟ್ರಿಕ್ ಮೂಲಕ ಪಡೆದುಕೊಳ್ಳಲಾಗುತ್ತದೆ” ಎಂದು ಜಿಲ್ಲಾಧಿಕಾರಿ ತಿಳಿಸಿದರು.
“ರೈತ ಮುಖಂಡರು ಗ್ರಾಮಗಳಲ್ಲಿ ಸ್ಮಶಾನ ಜಾಗದ ಸಮಸ್ಯೆ ಇದೆ ಎಂದಾಗ, ಸ್ಮಶಾನ ಭೂಮಿಯ ಅಭಿವೃದ್ದಿಗೆ ಸ್ಥಳೀಯ ಗ್ರಾಮ ಪಂಚಾಯಿತಿ ಮೂಲಕ ಅಭಿವೃದ್ದಿಪಡಿಸಲು ಸಿಇಒ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲೇ ಸ್ಪರ್ಧೆ: ಶೋಭಾ ಕರಂದ್ಲಾಜೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಉಪವಿಭಾಗಾಧಿಕಾರಿ ದುಗಾಶ್ರೀ, ಹೊನ್ನಾಳಿ ಉಪವಿಭಾಗಾಧಿಕಾರಿ ಹುಲುಮನಿ ತಿಮ್ಮಣ್ಣ, ತಹಶೀಲ್ದಾರ್ ಅಶ್ವಥ್, ಎಲ್ಲ ತಾಲೂಕಿನ ಎಡಿಎಲ್ಆರ್ ಹಾಗೂ ರೈತ ಮುಖಂಡರುಗಳಾದ ರವಿಕುಮಾರ್, ಕೊಳೆನಹಳ್ಳಿ ಸತೀಶ್ ಸೇರಿದಂತೆ ಹಲವು ರೈತ ಮುಖಂಡರು ಇದ್ದರು.