ಸಿಐಟಿಯು ನೇತ್ರತ್ವದಲ್ಲಿ ದೇಶಾದ್ಯಂತ ಕಾರ್ಮಿಕರ ಪ್ರತಿಭಟನೆಗೆ ಕರೆ ನೀಡಿದ್ದು, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು) ಉಡುಪಿ ಜಿಲ್ಲಾ ಸಮಿತಿಯಿಂದ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ವಿರೋಧಿಸಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಕೇಂದ್ರ ಸರ್ಕಾರದ ಪ್ರತಿಕೃತಿ ದಹನ ಮಾಡಿ ಪ್ರತಿಭಟನೆ ನಡೆಸಿದರು.
ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಮುಖಾಂತರ ಪ್ರಧಾನ ಮಂತ್ರಿಯವರಿಗೆ ಮನವಿ ಸಲ್ಲಿಸಿದರು.
ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಭಾರತಿ ಮಾತನಾಡಿ, “ಕೇಂದ್ರ ಸರ್ಕಾರದ ನವ ಉದಾರೀಕರಣ ನೀತಿಗಳ ಜಾರಿಯ ವೇಗದಲ್ಲಿ ತನ್ನ ನೀತಿಗಳ ಪರಿಕಲ್ಪನೆಯನ್ನು ಬದಲಾಯಿಸಿ ದೇಶದ ಅಭಿವೃದ್ಧಿಯ ಸಂಕೇತಗಳಾದ ಮಕ್ಕಳು ಮತ್ತು ಮಹಿಳೆಯರಿಗಾಗಿ ಕೊಡುವ ಸವಲತ್ತುಗಳಿಗೆ ಶೇ.90ರಿಂದ ಶೇ.60ರಷ್ಟು ಪಾಲನ್ನು ಕಡಿತ ಮಾಡಿದೆ” ಎಂದು ಆರೋಪಿಸಿದರು.
“2021ರ ಬಜೆಟ್ನಲ್ಲಿ ₹8,542 ಕೋಟಿಯನ್ನು 2024ರ ಬಜೆಟ್ನಲ್ಲಿ 300 ಕೋಟಿ ರೂಗಳನ್ನು ಕಡಿತ ಮಾಡುವ ಮುಖಾಂತರ ಕಾರ್ಮಿಕರ ಬದುಕಿಗೆ ಕತ್ತರಿ ಹಾಕುತ್ತಿದೆ. ಇದರಿಂದ ದೇಶದ 11ರಿಂದ 12ಕೋಟಿ ಫಲಾನುಭವಿಗಳು ವಂಚಿತರಾಗುತ್ತಿದ್ದಾರೆ” ಎಂದರು.
“ದೇಶದ ಬಂಡವಾಳಗಾರರು ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ₹14.5 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. 100 ಕೋಟಿ ಒಡೆತನವಿರುವ ಶ್ರೀಮಂತರಿಗೆ ಶೇ.2ರಷ್ಟು ವಿಶೇಷ ತೆರಿಗೆಯನ್ನು ಹಾಕಿದರೆ, 134 ಲಕ್ಷ ಕೋಟಿ ಸರ್ಕಾರಕ್ಕೆ ಆದಾಯ ಬರುತ್ತದೆ. ಈ ಹಣದಲ್ಲಿ ಭಾರತದ 130 ಕೋಟಿ ಜನರಿಗೆ ಗುಣಮಟ್ಟದ ಆಹಾರ, ಆರೋಗ್ಯ ಮತ್ತು ಶಿಕ್ಷಣವನ್ನು ಉಚಿತವಾಗಿ ಮತ್ತು ಸಾರ್ವತ್ರಿಕವಾಗಿ ಕೊಡಬಹುದು. ಈ ಯೋಜನೆಗಳನ್ನು ಖಾಯಂ ಮಾಡಬಹುದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ಈ ಯೋಜನೆಗಳು ಕೆಲಸ ಮಾಡುವ 1 ಕೋಟಿ ನೌಕರರಿಗೆ ಕನಿಷ್ಠ ವೇತನ ಕೊಡಲು ಸಾಧ್ಯವಾಗುತ್ತದೆ. ಬಡವರ ಮತ್ತು ಜನಸಾಮಾನ್ಯರ ಮೇಲೆ ತೆರಿಗೆ ಹಾಕುವ ಸರ್ಕಾರ ಹಣವಂತರ ಮೇಲೆ ತೆರಿಗೆ ಹಾಕಲಿ” ಎಂದು ಹೇಳಿದರು.
ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಸುಶೀಲಾ ನಾಡ ಮಾತನಾಡಿ, “ಹಿಂದು ಮಹಿಳೆಯರ ಬಗ್ಗೆ ಮಾತಾನಾಡುವ ಕೇಂದ್ರ ಪ್ರಭುತ್ವ, ಅಂಗನವಾಡಿ ನೌಕರರಿಗೆ ₹4,500, ಸಹಾಯಕಿಯರಿಗೆ ₹2,250 ಬಿಸಿಯೂಟದವರಿಗೆ ₹600, ಆಶಾ ಕಾರ್ಯಕರ್ತೆರಿಗೆ ₹2,000 ಕೊಟ್ಟು ದುಡಿಸುವುದು ಸಾಮಾಜಿಕ ನ್ಯಾಯವೇ?” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಕ್ರಮ: ಸಚಿವ ಶಿವಾನಂದ ಪಾಟಿಲ್ ಭರವಸೆ
“2018ರಿಂದ ಈ ನೌಕರರಿಗೆ ಒಂದೇ ಒಂದು ರೂಪಾಯಿಯನ್ನೂ ಹೆಚ್ಚಳ ಮಾಡದೆ, ಚುನಾವಣೆಗಳು, ಮಾತೃವಂದನಾ, ಪೋಷಣ್ ಟ್ರ್ಯಾಕರ್, ಸರ್ವೆ, ಗೃಹಲಕ್ಷ್ಮಿ ಮುಂತಾದ ಕೆಲಸಗಳನ್ನು ಹೇರಿ ಈ ಮಹಿಳೆಯರನ್ನು ಹಿಂಡಿ ಹಿಪ್ಪೆ ಮಾಡುವುದು, “ಗೌರವಧನ” ಎಂಬ ಪಟ್ಟಕಟ್ಟಿ ಎಲ್ಲ ಸವಲತ್ತುಗಳಿಂದ ವಂಚನೆ ಮಾಡುವುದು ಧರ್ಮವೇ?. 5 ಟ್ರಿಲಿಯನ್ ಆರ್ಥಿಕತೆಯನ್ನು ಸಾಧಿಸಲು ಹೊರಟಿರುವ ಭಾರತ ಹಸಿವಿನ ಸೂಚ್ಯಂಕದಲ್ಲಿ 111ನೇ ಸ್ಥಾನ ಏಕೆ?. ಶೇ.100ಕ್ಕೆ ಶೇ.50ರಷ್ಟು ಗರ್ಭಿಣಿ ಬಾಣಂತಿಯರ ರಕ್ತಹೀನತೆ ಏಕೆ? 5 ವರ್ಷದ ಮಕ್ಕಳು ಸಾಯುತ್ತಿರುವುದೇಕೆ?. ಸರ್ಕಾರ ಕೂಡಲೇ ಈ ಎಲ್ಲ ವಿಷಯಗಳನ್ನು ಗಂಭಿರವಾಗಿ ತೆಗೆದುಕೊಂಡು ಜನಸಾಮಾನ್ಯರಿಗೆ ಮತ್ತು ನೌಕರರಿಗೆ ನ್ಯಾಯ ಒದಗಿಸಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಕೋಶಾಧಿಕಾರಿ ಯಶೋಧ, ಮುಖಂಡರುಗಳಾದ ಸುಕಲತಾ, ಆಶಾ, ಪ್ರಮೀಳಾ ಪಡುಬಿದ್ರಿ, ಲಲಿತ, ಸರೋಜ ಬ್ರಹ್ಮಾವರ, ಸಿಐಟಿಯು ಉಡುಪಿ ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಕವಿರಾಜ್ ಎಸ್, ಮುಖಂಡ ಮೋಹನ್ ಇದ್ದರು.