ದೇವದಾಸಿಯರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಂಗಳೂರಿನ ಭಾರತ ಮುಕ್ತಿ ಮೋರ್ಚಾ ರಾಜ್ಯ ಘಟಕ, ಯ್ಯುನಿಟಿ ಆಫ್ ಮೂಲನಿವಾಸಿ ಬಹುಜನ ಸಂಘಟನೆ ಮತ್ತು ದೇವದಾಸಿ ಪದ್ಧತಿ ನಿರ್ಮೂಲನೆ ವೇದಿಕೆ ಹಾಗೂ ಮಗಳಮುಖಿಯರ ಸ್ವಾಭಿಮಾನ ಸಂಘಟನೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ವೃತ್ತದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಬಸ್ ಡಿಪೋ ಕ್ರಾಸ್ವರೆಗೆ ಬಂದು ಚಿಂಚೋಳಿ ತಹಶೀಲ್ದಾರ್ ಮುಖಾಂತರ ಕಲಬುರಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
“ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿರುವ ದೇವದಾಸಿಯರನ್ನು ಸರ್ವೆ ಮಾಡಿ ಅವರಿಗೆ ದೇವದಾಸಿ ಪ್ರಮಾಣ ಪತ್ರ ನೀಡಿ, ಸರ್ಕಾರದಿಂದ ಸೌಲಭ್ಯ ಪಡೆಯಲು ಅನುಕೂಲ ಮಾಡಿಕೊಡಬೇಕು. ಲಿಂಗತ್ವ ಅಲ್ಪಸಂಖ್ಯಾತರಿಗೆ ಪ್ರಮಾಣ ಪತ್ರ ನೀಡಬೇಕು. ಗ್ರಾಮ ಪಂಚಾಯಿತಿಗಳಲ್ಲಿ ನಡೆಯುವ ಸಾಮಾನ್ಯ ಸಭೆಗಳು, ವರ್ಷದಲ್ಲಿ ಕನಿಷ್ಟ ಒಂದೆರಡು ಬಾರಿಯಾದರೂ ಅಂಬೇಡ್ಕರ ಭವನ ಮತ್ತು ಡಾ ಬಾಬು ಜಗಜೀವನರಾಂ ಭವನಗಳಲ್ಲಿ ಸಾಮಾನ್ಯ ಸಭೆ ನಡೆಸಬೇಕು” ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
“ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ನಡೆಯುತ್ತಿರುವ ಜೂಜಾಟ, ಮಟಕಾ ಆಟದ ಚಟಕ್ಕೆ ಒಳಗಾದವರ ಮನೆಯಲ್ಲಿ ಮಕ್ಕಳ ಶೈಕ್ಷಣಿಕ ಸಮಸ್ಯೆ ಮತ್ತು ಕುಟುಂಬದಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಆದ್ದರಿಂದ ಕೂಡಲೇ ಜೂಜಾಟ ಅಡ್ಡದ ಮೇಲೆ ಮಟಕಾ ಚೀಟಿ ಬರೆದುಕೊಳ್ಳುವವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದರು.
“ಚಿಂಚೋಳಿ ತಾಲೂಕಿನ ಸುಲೇಪೇಟ ಸಪ್ತಗಿರಿ ಮದ್ಯದ ಅಂಗಡಿಯಿಂದ ಮತ್ತು ಜೈ ಭವಾನಿ ಮದ್ಯದ ಅಂಗಡಿಗಳಿಂದ ಹೂವಿನಬಾವ, ಯಲಕಪಳ್ಳಿ, ರುಸ್ತಂಪೂರ, ಕುಪನೂರ, ಬೀರನಳ್ಳಿ, ರಾಮತೀರ್ಥ, ಯಾಕಪೂರ, ಗರಗಪಳ್ಳಿ, ಮೋತಕಪಳ್ಳಿ, ಬೇಡಕಪಳ್ಳಿ, ಪೆಂಚನಪಳ್ಳಿ ಗ್ರಾಮಗಳಿಗೆ ಹಾಡುಹಗಲೇ ದ್ವಿಚಕ್ರ ವಾಹನ, ಆಟೋಗಳಲ್ಲಿ ಅಕ್ರಮವಾಗಿ ಮದ್ಯ ಸರಬರಾಜು ಮಾಡುತ್ತಿದ್ದಾರೆ, ಇಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಮದ್ಯದ ಅಂಗಡಿಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಅಪ್ರಾಪ್ತ ಬಾಲಕಿಯ ಕತ್ತು ಕೊಯ್ದು ಪರಾರಿಯಾದ ಬಾಲಕರು
“ಚಿಂಚೋಳಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಮೌನೇಶ್ವರ ಗುಡಿಯ ಹತ್ತಿರ ಸುಮಾರು ಹತ್ತು ವರ್ಷಗಳಿಂದ ಜೋಪಡಿಗಳಲ್ಲಿ ವಾಸ ಮಾಡುತ್ತಿರುವ ಅಲೆಮಾರಿ ಕುಟುಂಬಗಳಿಗೆ ಮನೆ ಮಂಜೂರು ಮಾಡಬೇಕು. ಆಂಧ್ರ ಮತ್ತು ತೆಲಂಗಾಣ ಗಡಿಭಾಗಕ್ಕೆ ಹೊಂದಿಕೊಂಡಿರುವ ವೆಂಕಟಾಪೂರ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡಬೇಕು” ಎಂದು ಆಗ್ರಹಿಸಿದರು.
ಮಾರುತಿ ಗಂಜಗಿರಿ, ಗೋಪಾಲ್ ಗಾರಂಪಳ್ಳಿ, ರಾಜುಕುಮಾರ್, ಸುಭಾಷ್ ತಡಪಳ್ಳಿ, ಶರಣ ನಾಟಿಕರ್, ವಿಜಯ ತಡಪಳ್ಳಿ, ಮೊನೇಶ್ ಗಾರಂಪಳ್ಳಿ, ಮಲ್ಲಿಕಾರ್ಜುನ ಗಾರಂಪಳ್ಳಿ ಸೇರಿದಂತೆ ಇತರರು ಇದ್ದರು.
