ಬಳ್ಳಾರಿ ಜಿಲ್ಲೆಯಲ್ಲಿ ರಾಜಕಾರಣಿಗಳು ಮಾತ್ರ ಗೂಂಡಾಗಳಲ್ಲ. ಅಧಿಕಾರಿಗಳೂ ಗೂಂಡಾಗಳೇ. ಇಲ್ಲಿನ ಎಸ್ಪಿಗೆ ಕರ್ನಾಟಕದ ಪರಂಪರೆ ತಿಳಿದಂತಿಲ್ಲ. ಪಕ್ಷದ ಸಭೆಗೆ ಅನುಮತಿ ಪಡೆಯಲು ಹೋದರೆ ‘ಗೆಟ್ ಲಾಸ್ಟ್’ ಎಂದಿದ್ದಾರೆ ಎಂದು ಕೆಆರ್ಎಸ್ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಅವರು ಪೊಲೀಸರ ನಡೆಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ಕರ್ನಾಟಕಕ್ಕಾಗಿ ನಾವು’ ಹೆಸರಲ್ಲಿ ಕೆಆರ್ಎಸ್ ಪಕ್ಷ ಬೈಕ್ ಜಾಥಾ ಆರಂಭಿಸಿದ್ದು, ಈ ಜಾಥಾ ಮಂಗಳವಾರ (ಫೆ.27) ಬಳ್ಳಾರಿ ತಲುಪಿದೆ. ಈ ವೇಳೆ ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು. ಬಳ್ಳಾರಿಯೇನು ಅವರ ಅಪ್ಪನದ್ದಾ ಎಂದು ಗುಡುಗಿದ ಅವರು, ಇಲ್ಲಿನ ಅಧಿಕಾರಿಗಳಿಗೆ ಅಹಂಕಾರವಿದೆ ಎಂದರು.
ಇದು ಯಾರ ಅಪ್ಪನ ಆಸ್ತಿಯಲ್ಲ, ಜಹಗೀರಲ್ಲ. ಇದು ಕನ್ನಡಿಗರ ರಾಜ್ಯ. ಯಾವುದೋ ರಾಜ್ಯದಿಂದ ಬಂದು ಇಲ್ಲಿ ಗೂಂಡಾಗಿರಿ ಮಾಡುವುದನ್ನು ಅಧಿಕಾರಿಗಳು ನಿಲ್ಲಿಸಬೇಕು. ಕೆಆರ್ಎಸ್ ಪಕ್ಷ ಖಾಕಿಗೆ ಹೆದರುವುದಿಲ್ಲ ಎಂದು ಗುಡುಗಿದ ಅವರು, ಸ್ವಲ್ಪ ಅಹಂಕಾರ ಬಿಟ್ಟು ನಡೆಯಬೇಕು. ಈ ರಾಜ್ಯದಲ್ಲಿ ಐಪಿಎಸ್ ಅಧಿಕಾರಿಗಳೂ ಜೈಲು ನೋಡಿರುವ ಉದಾಹರಣೆಗಳಿವೆ. ಇದು ಎಸ್ಪಿ ಗಮನದಲ್ಲಿರಬೇಕು ಎಂದು ಎಚ್ಚರಿಸಿದರು.