ಟ್ಯಾಂಕರ್ ಮಾಫಿಯಾದಲ್ಲಿ ಕಾರ್ಪೊರೇಟರ್ಗಳು, ಮಾಜಿ ಕಾರ್ಪೊರೇಟರ್ಗಳು, ಶಾಸಕರ ಸಂಬಂಧಿಗಳು ಮತ್ತು ಶಾಸಕರ ಹಿಂದೆ ಮುಂದೆ ತಿರುಗುವವರೇ ಇದ್ದಾರೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದೆಲ್ಲವೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮೂಗಿನ ನೇರಕ್ಕೆ ನಡೆಯುತ್ತಿದ್ದರೂ ಕಂಡೂ ಕಾಣದಂತಿರುವುದು ಅನುಮಾನ ಹುಟ್ಟಿಸುತ್ತಿದೆ. ಮಾಫಿಯಾದಲ್ಲಿ ಶಿವಕುಮಾರ್ ಪಾತ್ರದ ಬಗ್ಗೆ ಶಂಕೆ ಮೂಡುತ್ತದೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಹೇಳಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಾವೇರಿ ನೀರಿಗೆ ಪರ್ಯಾಯವಾಗಿ ಬಿಡಬ್ಲ್ಯುಎಸ್ಎಸ್ಬಿ ಏನನ್ನೂ ಮಾಡಿಲ್ಲ. ಇಡೀ ಬೆಂಗಳೂರಿನಲ್ಲಿ ಬಿಡಬ್ಲ್ಯುಎಸ್ಎಸ್ಬಿ 108 ಬೋರ್ವೆಲ್ಗಳನ್ನು ಮಾತ್ರ ಹಾಕಿಸಿದೆ ಎನ್ನುವುದು ಮಾಹಿತಿ ಹಕ್ಕು ಕಾಯ್ದೆಯಡಿ ತಿಳಿದುಬಂದಿದೆ. ಇದರರ್ಥ ಬಿಡಬ್ಲ್ಯುಎಸ್ಎಸ್ಬಿ ಬೆಂಗಳೂರಿಗೆ ಸಂಪೂರ್ಣವಾಗಿ ನೀರು ಸರಬರಾಜು ಮಾಡಲು ಕೆಲಸವನ್ನೇ ಮಾಡಿಲ್ಲ” ಎಂದರು.
“ಕಾವೇರಿ ನೀರು ಬೆಂಗಳೂರಿನ ಎಲ್ಲ ಮನೆಗಳಿಗೂ ತಲುಪುತ್ತಿಲ್ಲ. ಬಿಬಿಎಂಪಿ ಕೂಡ 1,534 ಬೋರ್ವೆಲ್ಗಳನ್ನು ಕೊರೆಸಿದ್ದು, ಈ ಎರಡೂ ಸಂಸ್ಥೆಗಳು ಎಲ್ಲ ಮನೆಗಳಿಗೂ ನೀರು ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಅನಧಿಕೃತ ಟ್ಯಾಂಕರ್ ಮಾಫಿಯಾದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿವೆ” ಎಂದರು.
“ಟ್ಯಾಂಕರ್ ನೀರು ಸರಬರಾಜು ಅನಧಿಕೃತ, ಇದಕ್ಕೆ ಕಾನೂನಿನಲ್ಲಿ ಅನುಮತಿಯೇ ಇಲ್ಲ. ಆದರೂ ಬೆಂಗಳೂರಿನಲ್ಲಿ ನೀರು ಸರಬರಾಜು ಮಾಫಿಯಾ ತೀವ್ರವಾಗಿದೆ ಎಂದರು. ಬೇಸಿಗೆ ಆರಂಭವಾಗುವ ಮುನ್ನವೇ ₹600 ಇರಬೇಕಿದ್ದ ಟ್ಯಾಂಕರ್ ನೀರಿನ ಬೆಲೆ ₹3000 ದವರೆಗೆ ಮುಟ್ಟಿದೆ” ಎಂದರು.
“ಡಿ.ಕೆ. ಶಿವಕುಮಾರ್ ಅವರೇ ಕುಡಿಯುವ ನೀರು ಅತ್ಯಗತ್ಯ ಎಷ್ಟಿದೆ ಎಂದು ಗೊತ್ತಿದೆ. ಕುಡಿಯುವ ನೀರಿದ್ದರೆ ಅಲ್ಲವೇ ಬ್ರ್ಯಾಂಡ್ ಬೆಂಗಳೂರು ಮಾಡಲು ಸಾಧ್ಯ. ಸರ್ಕಾರ ಟ್ಯಾಂಕರ್ ಮಾಫಿಯಾಗೆ ಕಡಿವಾಣ ಹಾಕಬೇಕು. ಅವರಿಗೆ ತೆರಿಗೆ ವಿಧಿಸಬೇಕು. ಉಚಿತವಾಗಿ ನೀರು ಕೊಡಲು ಆಗದೇ ಇದ್ದರೂ, ಕಡಿಮೆ ಬೆಲೆಯಲ್ಲಿ ನೀರು ಕೊಡುವ ವ್ಯವಸ್ಥೆ ಮಾಡಿ. ಇಲ್ಲವಾದರೆ ನಿಮ್ಮ ಮನೆ ಬಳಿಗೆ ಬಂದು ಜನ ನೀರು ಕೊಡಿ ಎನ್ನುತ್ತಾರೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಶೇ.60ರಷ್ಟು ಕನ್ನಡ ಭಾಷೆಯ ನಾಮಫಲಕ ಹಾಕಲು ಬುಧವಾರವೇ ಕೊನೆ ದಿನ
“ನೀವೇ ಒಂದು ಮೊಬೈಲ್ ಆಪ್ ಸಿದ್ದಮಾಡಿ ಟ್ಯಾಂಕರ್ ಬುಕ್ ಮಾಡಲು ಅವಕಾಶ ಕೊಡಿ. ಸಹಾಯವಾಣಿ ಸಂಖ್ಯೆಯನ್ನು ಕೊಟ್ಟು, ಜನರ ಸಮಸ್ಯೆಗೆ ಸ್ಪಂದಿಸಿ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನೀರಿಗಾಗಿ ದೊಡ್ಡ ಜಗಳವೇ ನಡೆದರೂ ಅಚ್ಚರಿ ಇಲ್ಲ” ಎಂದರು.
ಎಎಪಿಯ ಬೆಂಗಳೂರು ನಗರಾಧ್ಯಕ್ಷರಾದ ಡಾ. ಸತೀಶ್ ಮಾತನಾಡಿ, “ಜಲಮಂಡಳಿ ಅಧಿಕಾರಿಗಳು ಮತ್ತು ನಗರಾಭಿವೃದ್ಧಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 110 ಹಳ್ಳಿಗಳಿಗೆ 131 ಕೋಟಿ ರೂ.ಗಳನ್ನು ಕೊಳವೆಬಾವಿ ಕೊರೆಸಲು ಅನುದಾನ ಕೊಡುತ್ತಿರುವುದು ಸಾಕಾಗುವುದಿಲ್ಲ. ಬೆಂಗಳೂರಿನಲ್ಲಿ ಕೇವಲ 150 ಸ್ಥಳಗಳಲ್ಲಿ ಮಾತ್ರ ನೀರಿನ ಸಮಸ್ಯೆ ಇದೆ ಎಂದು ಹೇಳಿಕೆ ನೀಡಿದ್ದಾರೆ. ಇದು ಸುಳ್ಳು. ಒಂದು ವಿಧಾನಸಭೆ ಕ್ಷೇತ್ರದಲ್ಲಿ 50 ಕಡೆಗಳಲ್ಲಿ ನೀರಿನ ಸಮಸ್ಯೆ ಇದೆ” ಎಂದು ಹೇಳಿದರು.
ಎಎಪಿಯ ಬೆಂಗಳೂರು ಮಾಧ್ಯಮ ಉಸ್ತುವಾರಿ ಅನಿಲ್ ನಾಚಪ್ಪ, ಬೆಂಗಳೂರು ಸಂಘಟನಾ ಕಾರ್ಯದರ್ಶಿ ಅಶೋಕ್ ಮೃತ್ಯುಂಜಯ, ಮಹಿಳಾ ಮುಖಂಡ ಸತ್ಯವತಿ ಮಾಧ್ಯಮ ಗೋಷ್ಠಿಯಲ್ಲಿ ಹಾಜರಿದ್ದರು.