ಹಾಸನ ಜಿಲ್ಲೆ ಆಲೂರು ತಾಲೂಕಿನ ಹಂತನಮನೆ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ನಡೆದ ಹಿನ್ನೆಲೆಯಲ್ಲಿ ಸಕಲೇಶಪುರ ಉಪ ವಿಭಾಗಾಧಿಕಾರಿ ಡಾ ಶೃತಿ ಅವರು ಗುರುವಾರ ಹಂತನಮನೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ಪಡೆದಿದ್ದಾರೆ.
“ಈಗಾಗಲೇ ಘಟನೆ ಬಗ್ಗೆ ಪೂರ್ಣ ಮಾಹಿತಿ ಪಡೆಯಲಾಗಿದೆ. ಘಟನೆ ಸೂಕ್ಷ್ಮವಾಗಿದ್ದು, ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಘಟನೆಗೆ ಕಾರಣರಾದವರನ್ನು ಕರೆಸಿ ಎಚ್ಚರಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಈ ರೀತಿ ನಡೆದುಕೊಂಡರೆ ಜಾತಿನಿಂದನೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಘಟನೆ ಹಿನ್ನೆಲೆ
ಫೆಬ್ರವರಿ 27ರಂದು ಬೆಳಿಗ್ಗೆ 11ರ ವೇಳೆ ದಲಿತ ಮಹಿಳೆಯರು ಕೆರೆಯಲ್ಲಿ ಬಟ್ಟೆ ತೊಳೆಯುತ್ತಿದ್ದರು. ಅದೇ ಗ್ರಾಮದ ಮಣಿಯಮ್ಮ, ಹೊನ್ನಮ್ಮ ರಾಧಮ್ಮ, ಗೌರಮ್ಮ, ಸುನಂದ ಹಾಗೂ ಕಮಲಮ್ಮ ಎಂಬುವರು ನೀವು ಕೆರೆಯಲ್ಲಿ ಬಟ್ಟೆ ತೊಳೆಯುವಂತಿಲ್ಲ. ಈ ಕೆರೆ ನಮಗೇ ಹಿಂದಿನಿಂದಲೂ ಮೀಸಲಾಗಿದೆ” ಎಂದು ಸೋಪಾನ ಕಟ್ಟೆಯ ಮೇಲಿದ್ದ ಬಟ್ಟೆ ತೆಗೆದು ಎಸೆದಿದ್ದಾರೆ.
ಇದನ್ನು ಪ್ರಶ್ನಿಸಿದ್ದಕ್ಕೆ ಜಾತಿನಿಂದನೆ ಮಾಡಿ ಅವಮಾನ ಮಾಡಿದ್ದಲ್ಲದೆ, ಹಲ್ಲೆ ನಡೆಸಲು ಮುಂದಾಗಿ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿದ್ದಾರೆ. ನಂತರ ದಲಿತ ಮಹಿಳೆಯರು ಸ್ಥಳೀಯ ಠಾಣೆಗೆ ದೂರು ನೀಡಿದ್ದರು.
ಸಿಪಿಐ ಗಂಗಾಧರ್ ಮತ್ತು ಪಿಎಸ್ಐ ಜನಬಾಯಿ ಕಡಪಟ್ಟಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಅದರೂ ಸವರ್ಣೀಯ ಮಹಿಳೆಯರು ಈ ಕೆರೆಯಲ್ಲಿ ಹಿಂದಿನಿಂದಲೂ ದಲಿತರಿಗೆ ನೀರು ಬಳಸಲು ಅವಕಾಶ ನೀಡುತ್ತಿಲ್ಲ. ಈಗಲೂ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
“ಗ್ರಾಮದಲ್ಲೂ ನಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಆದರೆ ಸೇದುವ ಬಾವಿಯಲ್ಲಿ ನೀರು ತರಲು ದಲಿತರು ಹೋದಾಗ ಸವರ್ಣೀಯರ ಬಿಂದಿಗೆಯಿಂದಲೇ ನೀರು ಸುರಿಸಿಕೊಳ್ಳಬೇಕು. ನೇರವಾಗಿ ದಲಿತರೇ ಬಾವಿ ಬಳಸುವಂತಿಲ್ಲ. ಈ ಮೂಲಕ ಅಸ್ಪೃಶ್ಯತೆ ಆಚರಣೆ ಇಂದಿಗೂ ಜೀವಂತವಾಗಿರುವುದು ದುರ್ದೈವ. ಆದರೆ ಈ ಬಗ್ಗೆ ಇನ್ನೂ ದೂರು ದಾಖಲಾಗಿಲ್ಲ” ಎಂದು ಸ್ಥಳೀಯ ಸಾರ್ವಜನಿಕರು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ನಾಲ್ಕು ವರ್ಷದ ಪದವಿ ಕೋರ್ಸ್ನ ನಿರ್ಧಾರ ಘೋಷಣೆ ವಿಳಂಬ; ಎನ್ಇಪಿ ಹಿಂಪಡೆಗೆ ಆಗ್ರಹ
ಮಾನವ ಬಂಧುತ್ವ ವೇದಿಕೆ ತಾಲೂಕು ಅಧ್ಯಕ್ಷ ಪ್ರತಾಪ್ ಕುಮಾರ್ ಮಾತನಾಡಿ, “ಇಂತಹ ಹತ್ತಾರು ಪ್ರಕರಣ ಪೊಲೀಸ್ ಠಾಣೆಗೆ ಬರುತ್ತವೆ. ಆದರೆ ಅಧಿಕಾರಿಗಳು ಹಣ ಮಾಡುವ ಉದ್ದೇಶದಿಂದ ಮಧ್ಯವರ್ತಿಗಳ ಮೂಲಕ ರಾಜಿ ಸಂಧಾನ ಮಾಡಿಸಿ ಹಣ ಪೀಕುತ್ತಿದ್ದಾರೆ. ಆದ್ದರಿಂದಲೇ ಇಂತಹ ಪ್ರಕರಣಗಳು ತಾಲೂಕಿನಲ್ಲಿ ಹೆಚ್ಚುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಸ್ಪೃಶ್ಯತೆ ಆಚರಣೆ ಅಡಿ ಕೇಸು ದಾಖಲಿಸಲು ಪೊಲೀಸರು ಮೀನಮೇಷ ಎಣಿಸುತ್ತಿದ್ದಾರೆ. ಇದನ್ನೂ ಮಧ್ಯವರ್ತಿಗಳ ಸಮ್ಮುಖದಲ್ಲಿ ರಾಜಿ ಮಾಡಿಸಿದರೆ ಪೊಲೀಸ್ ಠಾಣೆ ಏಕೆ ಬೇಕೆಂಬ ಪ್ರಶ್ನೆ ಸಾರ್ವಜನರಿಕರಲ್ಲಿ ಮೂಡಿದೆ.
