ರೈತ ನಮ್ಮೆಲ್ಲರಿಗೂ ಆಹಾರ ನೀಡುವ ಅನ್ನದಾತರ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಅರಣ್ಯ, ಜೈವಿಕ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ಶನಿವಾರ ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಬೀದರ ಸಹಯೋಗದಲ್ಲಿ ಬೀದರ ನಗರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮತ್ತು ರಿಧಾನ್ಯ ಕಿರು ಹೊತ್ತಿಗೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
“ಸಿರಿಧಾನ್ಯಗಳಿಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಮ್ಮ ಬೀದರ ಜಿಲ್ಲೆಯಲ್ಲಿ ಶೇ.70 ರಷ್ಟು ಜನ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಸಾವಯವ ಕೃಷಿಯ ಆಹಾರಗಳಾದ ಸಜ್ಜೆ, ಬರಗು, ರಾಗಿ, ನವಣೆ, ಹಾರಕ, ಸಾವೆಗಳ ಸೇವನೆಯಿಂದ ಬಿಪಿ, ಶುಗರ್ ಸೇರಿದಂತೆ ಇತರೆ ಕಾಯಿಲೆಗಳು ಬರದಂತೆ ನಿಯಂತ್ರಿಸಬಹುದು” ಎಂದರು.
“ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ಸಾವಯವ ಹೆಚ್ಚಾಗಿ ಬೆಳೆಯುತ್ತಿರುವ ಮೊದಲ ರಾಜ್ಯವಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಸಿರಿಧಾನ್ಯ ವಾಣಿಜ್ಯ ಮೇಳವನ್ನು ಆಯೋಜಿಸಲಾಗಿತ್ತು. ಕೃಷಿ ಲಾಭದಾಯಕವಾಗಲು ಅದಕ್ಕೆ ಸೂಕ್ತ ಬೆಲೆ ಸಿಗುವದರ ಜೊತೆಗೆ ವ್ಯವಸ್ಥಿತ ಮಾರುಕಟ್ಟೆಯು ಬೇಕು. ಮುಂದೊಂದು ದಿನ ಎಲ್ಲರೂ ಕೃಷಿಯ ಕಡೆ ನೋಡುವ ಕಾಲ ಬರುತ್ತದೆ” ಎಂದರು.
“ನಮ್ಮ ಸರ್ಕಾರ ಈ ಹಿಂದೆ ಸಾವಯವ ಪರಿಷ್ಕೃತ ನೀತಿ ಘೋಷಿಸಿದೆ. ಇಂದಿರಾಗಾಂಧಿ ಅವರು ಹಲವಾರು ಆಣೆಕಟ್ಟೆಗಳನ್ನು ಕಟ್ಟಿಸಿ ಹಸಿರು ಕ್ರಾಂತಿಯನ್ನು ಮಾಡಿದ್ದರು. ಸಾವಯವ ಕೃಷಿಯತ್ತ ಇಂದಿನ ಯುವಕರು ಹೆಚ್ಚಿನ ಒಲವು ತೋರಿಸಬೇಕು. ಇಂದು ಸಣ್ಣ-ಸಣ್ಣ ಮಕ್ಕಳಿಗೂ ಹಲವಾರು ಕಾಯಿಲೆಗಳು ಬರುತ್ತಿವೆ. ನಮ್ಮ ಆಹಾರ ಜೀವನ ಶೈಲಿ ಕೂಡ ಇದಕ್ಕೆ ಕಾರಣವಾಗಿದೆ” ಎಂದು ಹೇಳಿದರು.

ಕೇಂದ್ರ ನೂತನ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಖಾತೆ ಸಹ ಸಚಿವರಾದ ಭಗವಂತ ಖೂಬಾ ಅವರು ಮಾತನಾಡಿ, “ನಾವು ಚಿಕ್ಕವರಿದ್ದಾಗ ಸಿರಿಧಾನ್ಯ ಎಲ್ಲರ ಮನೆಯಲ್ಲಿ ಉಪಯೋಗಿಸುತ್ತಿದ್ದರು. ಅನ್ನವನ್ನು ಅಂದು ಶ್ರೀಮಂತರು ಮಾತ್ರ ಊಟ ಮಾಡುತ್ತಿದ್ದರು. ರೈತರು ದೇಶದ 140 ಕೋಟಿ ಜನವರಿ ಹೊಟ್ಟೆ ತುಂಬಿಸುವ ಕೆಲಸ ಮಾಡುವದರ ಜೊತೆಗೆ ಶೆ. 30 ಪ್ರತಿಶತ ಆಹಾರವನ್ನು ವಿದೇಶಕ್ಕೆ ರಪ್ತು ಮಾಡುತ್ತಾರೆ” ಎಂದರು.
“ಅನ್ನದಾತ ಕಷ್ಟಪಟ್ಟು ನಮ್ಮೆಲ್ಲರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಾನೆ. ಉತ್ತಮ ಆಹಾರ ನಮ್ಮ ನಾಗರಿಕತೆಯಲ್ಲಿ ರಕ್ತಗತವಾಗಿ ಬಂದಿದೆ. ಹಿಂದೆ ಸಿರಿಧಾನ್ಯಗಳಿಗೆ ಬೇಡಿಕೆ ಇರಲಿಲ್ಲ ಈಗ ದೊಡ್ಡ- ದೊಡ್ಡ ಹೋಟೆಲ್ಗಳಲ್ಲಿ ಅದರ ಬೇಡಿಕೆ ಹೆಚ್ಚಾಗಿದೆ. ಕಡಿಮೆ ನೀರಿನಲ್ಲಿ ಈ ಬೆಳೆಗಳನ್ನು ಬೆಳೆಯಬಹುದಾಗಿದೆ” ಎಂದು ಹೇಳಿದರು.
ಕೃಷಿ ಇಲಾಖೆಯ ಜಂಟಿ ನಿರ್ದೆಶಕರಾದ ರತೇಂದ್ರನಾಥ ಸೂಗೂರ ಪ್ರಾಸ್ತಾವಿಕವಾಗಿ ಮಾತನಾಡಿ, “ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯ ಒಳ್ಳೆಯದು. ಇಂದಿನ ವೈಜ್ಞಾನಿಕ ಯುಗದಲ್ಲಿ ಯುವ ಪೀಳಿಗೆ ದೇಶಿಯ ಆಹಾರವಾದ ಸಿರಿಧಾನ್ಯ ಉಳಿಸಿ ಬೆಳೆಸಿಕೊಂಡು ಹೋಗಬೇಕು. ಇದರಿಂದ ಸಾಕಷ್ಟು ರೋಗ ರುಜಿನಿಗಳು ದೂರ ಮಾಡಬಹುದು. ಸಿರಿಧಾನ್ಯಗಳನ್ನು ಬರಗಾಲದ ಮಿತ್ರ ಎಂದು ಕರೆಯುತ್ತಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಪರೀಕ್ಷೆಯಲ್ಲಿ ಸುಳ್ಳು ಮಾಹಿತಿ; ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು
ಕಾರ್ಯಕ್ರಮದಲ್ಲಿ ನಗರ ಸಭೆ ಅಧ್ಯಕ್ಷರಾದ ಮೊಹ್ಮದ ಗೌಸ್. ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮಯ್ಯ ಸ್ವಾಮಿ, ಕರ್ನಾಟಕ ರಾಜ್ಯ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ವಿಶ್ವನಾಥ ಪಾಟೀಲ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್., ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ., ತೋಟಗಾರಿಕೆ ಮಹಾವಿದ್ಯಾಲಯ ಬೀದರ. ಡೀನ್. ಡಾ.ಎಸ್.ವಿ.ಪಾಟೀಲ್. ಕೃಷಿ ವಿಜ್ಞಾನ ಕೇಂದ್ರ ಬೀದರ ಡಾ.ಸುನಿಲ್ ಕುಮಾರ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ. ಜಿಲ್ಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರ ಕುಮಾರ ಗಂಧಗೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೆಶಕರಾದ ಸುರೇಖಾ, ಬೀದರ ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ರೈತರು, ಕೃಷಿ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.