ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ಓದುವುದು ಹೊಸ ದೇಶಕ್ಕೆ ಪ್ರವೇಶಿಸಿದಂತೆ ಹಾಗೂ ಮಾನವೀಯತೆಯನ್ನು ಅಧ್ಯಯನ ಮಾಡಿದಂತೆ ಎಂದು ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ ಮಹದೇವಪ್ಪ ಹೇಳಿದ್ದಾರೆ.
ಮೈಸೂರಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಆಯೋಜಿಸಿದ್ದ ‘ಅಂಬೇಡ್ಕರ್ ಅವರ ಅಭಿವೃದ್ಧಿ ದೃಷ್ಟಿಕೋನ ಮತ್ತು ಸಮಕಾಲಿನ ಜಗತ್ತು’ ವಿಷಯ ಕುರಿತ ಅಂತಾರಾಷ್ಟ್ರೀಯ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
“ಬಾಬಸಾಹೇಬರು ದೇಶಕಟ್ಟಲು, ಜನರನ್ನು ಬೆಸೆಯಲು, ಸಾಂಸ್ಕೃತಿಕವಾದ ಬದುಕಿನ ನಿರೂಪಣೆಗೆ ನೀಡಿರುವ ಸತ್ವಭರಿತ ಅನೇಕ ಕೊಡುಗೆಯ ಬಗ್ಗೆ ಎಲ್ಲರೂ ಚಿಂತನೆ ಮಾಡಬೇಕಿದೆ. ಅಸಮಾನತೆಯನ್ನು ತೊರೆದು ಸಮಸಮಾಜದ ಸಾಧನೆಯ ಗುರಿಯ ಕಡೆಗೆ ಹೆಜ್ಜೆ ಇಡಬೇಕಿದೆ” ಎಂದು ಹೇಳಿದರು.
“ಅಭಿವೃದ್ಧಿ ವಿಚಾರದಲ್ಲಿ ಐರೋಪ್ಯ ರಾಷ್ಟ್ರಗಳು ಮುಂಚೂಣಿಯಲ್ಲಿವೆ. ನಾವು ಹಿಂದುಳಿದಿದ್ದೇವೆ. ಎಡಪಂಥೀಯ ಚಿಂತನೆಗಳು ಪ್ರಶ್ನಿಸುವ, ಆರೋಗ್ಯ ಕ್ಷೇತ್ರ ಸುಧಾರಣೆ, ಬಡತನ ನಿರ್ಮೂಲನೆ ಸೇರಿದಂತೆ ಸುಖೀ ರಾಜ್ಯ ಕಟ್ಟಲು ಬಯಸಿದರೆ, ಬಲಪಂಥೀಯ ಚಿಂತನೆಗಳು ಜನರನ್ನು ಭಾವನಾತ್ಮಕ ವಿಚಾರಗಳಿಗೆ ಒಳಪಡಿಸಿ ಅಧಿಕಾರಕ್ಕೇರಿ ಅಭಿವೃದ್ಧಿಗೋಲನ್ನು ಹಿಂದೆ ತಳ್ಳುತ್ತಿವೆ. ಇಂದು ನಮ್ಮ ಬಹುತ್ವ ಅಪಾಯದಲ್ಲಿದೆ. ಅಲ್ವಸಂಖ್ಯಾತರು ಭಯಗ್ರಸ್ಥರಾಗಿ ಬದುಕುವ ವಾತಾವರಣ ನಿರ್ಮಾಣವಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು.
“ಸಂವಿಧಾನ ಕುರಿತು ಜನರಲ್ಲಿ ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ. ಅದರಂತೆ ವಿಶ್ವವಿದ್ಯಾಲಯಗಳಲ್ಲಿ ಸಂವಿಧಾನ ಕುರಿತು ಸಮಗ್ರವಾದ ಅಧ್ಯಯನ ನಡೆಯಬೇಕಿದೆ. ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಸಂವಿಧಾನದ ಆಶಯಗಳನ್ನು ಬಿತ್ತಬೇಕಿದೆ. ಈ ಮೂಲಕ ಅಂಬೇಡ್ಕರರ ಕನಸಾದ ಸಮೃದ್ಧ ಭಾರತದ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ” ಎಂದು ಕರೆ ನೀಡಿದರು.
“ಮಾಧ್ಯಮಗಳು ವೈಚಾರತೆ ಮತ್ತು ವೈಜ್ಞಾನಿಕವಾದ ನಿಲುವುಗಳನ್ನು ಬಲಪಡಿಸುವಂತೆ ಕಾರ್ಯನಿರ್ವಹಿಸಬೇಕಿದೆ. ಸತಿಸಹಾಗಮನ ಪದ್ಧತಿ ಪಾಲಿಸಿದವರು ಇಂದು ಸಂವಿಧಾನದ ಮೇಲೆ ಸವಾರಿ ಮಾಡುತ್ತಿದ್ದಾರೆ. ಸಾಮಾಜಿಕ ಹಾಗೂ ಅರ್ಥಿಕ ಸಮಾನತೆವಿಲ್ಲದ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ. ಭಾರತದ ಎಲ್ಲಾ ಜನರನ್ನು ಸಂರಕ್ಷಣೆ ಮಾಡುವ ಸಂವಿಧಾನವನ್ನು ಬಾಬಸಾಹೇಬರು ನೀಡಿದ್ದಾರೆ. ನಮಗೆ, ನಮ್ಮ ಮಕ್ಕಳಿಗೆ, ಮಹಿಳೆಯರಿಗೆ, ರೈತರಿಗೆ, ಕಾರ್ಮಿಕರಿಗೆ ನೆಮ್ಮದಿಯ ಬದುಕು ಸಂವಿಧಾನದ ಸಮರ್ಪಕ ಜಾರಿಯಲ್ಲಿದೆ” ಎಂದು ತಿಳಿಸಿದರು.
ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್ ಮಾತನಾಡಿ, “ಶಿಕ್ಷಣವು ಸುಲಭವಾಗಿ ಕೈಗೆಟುಕದ ಸಂದರ್ಭದಲ್ಲಿ ವರ್ಣಭೇದ, ಜಾತಿಭೇದ ವ್ಯವಸ್ಥೆ ನಡುವೆ ಸ್ವಾತಂತ್ರ್ಯಪೂರ್ವದಲ್ಲಿ ವಿದೇಶದಲ್ಲಿ ಉನ್ನತ ಪದವಿ ಪಡೆದವರು ಡಾ.ಬಿ.ಆರ್.ಅಂಬೇಡ್ಕರ್ ಅವರಾಗಿದ್ದಾರೆ. ಈ ದೇಶದ ಜಾತಿ ಪದ್ಧತಿ, ಅಸ್ಪೃಶ್ಯತೆ ತೊಲಗಿಸಲು ಅವರು ನೀಡಿರುವ ಸಂವಿಧಾನ ಪ್ರಪಂಚಕ್ಕೆ ಮಾದರಿಯಾಗಿದೆ” ಎಂದರು.
“ಅಂಬೇಡ್ಕರ್ ಅವರು ಸಂವಿಧಾನ ಕರ್ತೃ ಮಾತ್ರವಲ್ಲ, ಆರ್ಥಿಕ ತಜ್ಞ, ಶಿಕ್ಷಣ ತಜ್ಞ, ಸಾಮಾಜಿಕ ಚಿಂತಕ, ಕ್ರಾಂತಿಕಾರಿ ನಾಯಕ, ತತ್ವಜ್ಞಾನಿ ಹಾಗೂ ಮಾನವತಾವಾದಿ. ಈ ನಿಟ್ಟಿನಲ್ಲಿ 21ನೇ ಶತಮಾನದಲ್ಲಿ ಬಾಬಾಸಾಹೇಬರ ದೂರದೃಷ್ಟಿತ್ವದ ಅಭಿವೃದ್ಧಿ ವಿಚಾರಗಳು ಹೇಗೆ ಪ್ರತಿಧ್ವನಿಸುತ್ತಿದೆ ಎಂಬುದನ್ನು ಅರಿಯಬೇಕಿದೆ” ಎಂದರು.
“ಬಾಬಸಾಹೇಬರು ಶಿಕ್ಷಣದ ಬಗ್ಗೆ ತೋರಿದ ಕಾಳಜಿಯಿಂದ ಇಂದು ಭಾರತ ಶಿಕ್ಷಣ ವ್ಯವಸ್ಥೆ ಪ್ರತಿಯೊಬ್ಬರ ಹಕ್ಕಾಗಿ ಮಾರ್ಪಟ್ಟಿದೆ. ಸಮಾಜದ ಬದಲಾವಣೆಗೆ ಶಿಕ್ಷಣವು ಪ್ರಬಲ ಅಸ್ತ್ರವೆಂದು ಅವರು ಭಾವಿಸಿದ್ದರು. ಪ್ರತಿಯೊಬ್ಬರಿಗೂ ಶಿಕ್ಷಣ ದೊರಕುವಲ್ಲಿ ಸಾವಿತ್ರಿ ಬಾಯಿ ಫುಲೆ ಅವರ ಚಿಂತನೆಗಳನ್ನು ಬಾಬಸಾಹೇಬರೂ ಪ್ರತಿಪಾದಿಸಿದ್ದರು” ಎಂದು ತಿಳಿಸಿದರು.
“ಅಂಬೇಡ್ಕರ್ ವಿದ್ವತ್ತು, ಪಾಂಡಿತ್ಯ ಮೆಚ್ಚಿ ಅಂದಿನ ಪ್ರಧಾನಿ ನೆಹರೂ ಅವರು ತಮ್ಮ ಸಂಪುಟದಲ್ಲಿ ಕಾನೂನು ಸಚಿವರನ್ನಾಗಿಸಿದ್ದರು. ಭಾರತದ ಜನಜಾಗೃತಿಯ ಸಂಕೇತ ಅವರಾಗಿದ್ದಾರೆ. ಭಾರತವೂ ಸೇರಿದಂತೆ ಜಗತ್ತಿನ ಸಮಸ್ಯೆಯನ್ನು ನೋಡುವ ರೀತಿಯ ಭಿನ್ನವಾಗಿತ್ತು. ಜಾತಿವ್ಯವಸ್ಥೆಯಲ್ಲಿ ಸಿಲುಕಿ ನಲುಗಿದ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯಕ್ಕೆ ಹೋರಾಟ ಮಾಡಿದರು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಕುಲಸಚಿವ ಪ್ರೊ.ಕೆ.ಎಲ್.ಎನ್.ಮೂರ್ತಿ, ಪರಿಕ್ಷಾಂಗ ಕುಲಸಚಿವ ಪ್ರೊ.ಪ್ರವೀಣ್, ಪ್ರೊ.ಎನ್.ಲಕ್ಷ್ಮಿ, ಡಾ.ಶಿವಕುಮಾರಸ್ವಾಮಿ, ವ್ಯವಸ್ಥಾಪನ ಮಂಡಳಿ ಸದಸ್ಯ ಬಿ.ಜಿ.ಪಾಟೀಲ್, ಬಾಲಕ ತೇಜಸ್ವಿ ಚಕ್ರವರ್ತಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.