- ‘ಕಳೆದ 15 ವರ್ಷಗಳಿಂದ ಟಿಕೆಟ್ಗಾಗಿ ಕಾದಿರುವೆ’
- ಬಿಜೆಪಿಯಿಂದ ಮೋಸವಾಗಿದೆ ಎಂದ ಮಾಜಿ ಶಾಸಕ
ಬಿಜೆಪಿ ನಾಯಕರು ನನ್ನಿಂದ ಹಣ ಪಡೆದು ಟಿಕೆಟ್ ತಪ್ಪಿಸಿದ್ದಾರೆ ಎಂದು ಆರೋಪಿಸಿರುವ ಮಾಜಿ ಶಾಸಕ ಗಂಗಾಧರ ಭಟ್ ಅವರು ಪಕ್ಷದ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆ ಹೊತ್ತಲ್ಲೇ ಬಿಜೆಪಿಯಲ್ಲಿ ಬಂಡಾಯ ಅಭ್ಯರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಗಂಗಾಧರ ಭಟ್ ಅವರು ಕಾರವಾರದ ಹಾಲಿ ಶಾಸಕಿ, ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ.
ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ನಾನು 2004ರಲ್ಲಿ ಕಾರವಾರ ಜೊಯಿಡಾ ಕ್ಷೇತ್ರ ಇದ್ದಾಗ ಮೊದಲ ಬಾರಿಗೆ ಬಿಜೆಪಿಗೆ ಜಯ ತಂದುಕೊಟ್ಟಿದ್ದೆ. ಅಲ್ಲಿಂದ ನನಗೆ ಮೂರು ಬಾರಿ ನನಗೆ ಟಿಕೆಟ್ ವಂಚಿಸಲಾಗಿದೆ” ಎಂದು ಅಸಮಾಧಾನ ಹೊರಹಾಕಿದ್ದಾರೆ.
“ಮೂರು ತಿಂಗಳ ಹಿಂದೆ ಪಕ್ಷ ನನಗೆ ಟಿಕೆಟ್ ನೀಡುವುದಾಗಿ ಭರವಸೆ ನೀಡಿತ್ತು. ನಾನು ಸಹ ಲಕ್ಷಾಂತರ ರೂ. ಪಾರ್ಟಿ ಫಂಡ್ ಕೊಟ್ಟು ಬಂದಿದ್ದೆ. ಈಗ ನೋಡಿದರೆ ನನಗೆ ಟಿಕೆಟ್ ಕೊಟ್ಟಿಲ್ಲ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ವರಿಷ್ಠರು ಸೂಚಿಸಿದರೆ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಎಂದ ಸಂಸದೆ ಸುಮಲತಾ
“ಪಕ್ಷದಲ್ಲಿ ಏನಾಗುತ್ತಿದೆ ಎಂಬುದೇ ನನಗೆ ತಿಳಿಯುತ್ತಿಲ್ಲ. ಅಟಲ್ ಬಿಹಾರಿ ವಾಜಪೇಯಿ ಕಾಲದ ಬಿಜೆಪಿ ಈಗ ಇಲ್ಲ. ನನ್ನ ನಂಬಿಸಿ, ಹಣ ಪಡೆದು ಟಿಕೆಟ್ ತಪ್ಪಿಸಲಾಗಿದೆ” ಎಂದು ಆರೋಪಿಸಿದ್ದಾರೆ.
“ಇದು ನನ್ನ ಕೊನೆಯ ಚುನಾವಣೆ. ನಾನು ಬಿಜೆಪಿಯನ್ನು ಬಿಟ್ಟು ಬೇರೆಲ್ಲೂ ಹೋಗುವುದಿಲ್ಲ. ಆದರೆ, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿರುವೆ” ಎಂದಿದ್ದಾರೆ.
“2004ರಲ್ಲಿ ನಾನು ಬಿಜೆಪಿ ಶಾಸಕನಾಗಿದ್ದಾಗ ನಮಗೆ 40 ತಿಂಗಳು ಮಾತ್ರ ಅಧಿಕಾರವಿತ್ತು. ನಂತರ ನಡೆದ ಚುನಾವಣೆಯಲ್ಲಿ ಟಕೆಟ್ ತಪ್ಪಿಸಲಾಯಿತು. ನಂತರ ನಾನು ಟಿಕೆಟ್ಗಾಗಿ ಕಾದೆ” ಎಂದು ಹೇಳಿದ್ದಾರೆ.
“15 ವರ್ಷಗಳಿಂದ ಟಿಕೆಟ್ಗಾಗಿ ಕಾದೆ. ಆದರೆ ಪಕ್ಷದಲ್ಲಿ ನನ್ನ ಕೆಲಸ ಪಡೆದು, ಹಣ ಪಡೆದು ಮೂಲೆಗುಂಪು ಮಾಡಿದರು” ಎಂದು ಬೇಸರ ಹೊರಹಾಕಿದ್ದಾರೆ.