ಮಹಿಳೆಯರ ಕೌಶಲ್ಯ ವೃದ್ಧಿಸಿ, ಅಸಮಾನತೆಯನ್ನು ತೊಡೆದು ಹಾಕಿ. ಮಹಿಳೆಯರನ್ನು ಮುಖ್ಯವಾಹಿನಿಗೆ ತರುವ ಮೂಲಕ ಸಮಾಸಮಾಜದ ನಿರ್ಮಾಣವಾಗಬೇಕಿದೆ ಎಂದು ಮಹಿಳಾ ವಿವಿಯ ಕುಲಪತಿ ಪ್ರೊ. ಬಿ.ಕೆ.ತುಳಸಿ ಮಾಲಾ ಹೇಳಿದರು.
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಹಾಗೂ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ ಸಂಶೋಧನಾ ಹಾಗೂ ಅಧ್ಯಯನ ಕೇಂದ್ರ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ʼಮಹಿಳಾ ಸಾಂಸ್ಕೃತಿಕ ಹಬ್ಬ-2024ʼರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರು ಏಕಕಾಲದಲ್ಲಿ ಹಲವಾರು ಕಾರ್ಯಗಳನ್ನು ಮಾಡುವ ಸಾಮರ್ಥ್ಯ ಹೊಂದಿದ್ದು ಉತ್ತಮ ತರಬೇತಿ ನೀಡುವ ಮೂಲಕ ಅವರನ್ನು ಬೆಳಕಿಗೆ ತರುವ ಕೆಲಸವಾಗಬೇಕಿದೆ. ಇದರಿಂದ ಮಹಿಳಾ ಕೇಂದ್ರಿತ ಅಭಿವೃದ್ಧಿಯಾಗುವುದರ ಜೊತೆಗೆ ರಾಷ್ಟ್ರದ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ. ಸುಸ್ಥಿರ ಸಾಮಾಜಿಕ ಆಯಾಮದಿಂದ ಮಹಿಳೆಯರ ದಕ್ಷತೆಯನ್ನು ಪಕ್ವ ಮಾಡಬೇಕಾಗಿದ್ದು, ಮಹಿಳಾ ಅಭಿವೃದ್ಧಿಗೆ ಮತ್ತು ಮಹಿಳಾ ಸಾಮರ್ಥ್ಯವನ್ನು ಹೊರತರಲು ಸರ್ಕಾರ ಹೆಚ್ಚು ಹೂಡಿಕೆ ಮಾಡಿ ರಾಜಕೀಯ ರಂಗ ಸೇರಿದಂತೆ ಪ್ರತಿಯೊಂದು ರಂಗದಲ್ಲಿಯೂ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನೀಡುವ ನಿಜವಾದ ಮಹಿಳಾ ಸಬಲೀಕರಣಕ್ಕೆ ಮುನ್ನಡೆ ಬರೆಯಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.
ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ಮಹಿಳಾ ದೌರ್ಜನ್ಯಗಳು ಹೆಚ್ಚುತ್ತಿದ್ದು, ಅವುಗಳಿಗೆ ಕಡಿವಾಣ ಹಾಕಬೇಕಿದೆ. ಸರ್ಕಾರದ ಕಾನೂನುಗಳು ಕಠಿಣಗೊಳಿಸುವ ಮೂಲಕ ಮಹಿಳೆಯರ ಮೇಲಿನ ಆಸಿಡ್ ಹಾಗೂ ದೌರ್ಜನ್ಯಗಳನ್ನು ಹೋಗಲಾಡಿಸಬೇಕು ಎಂದರು.
ಇನ್ನು ಸಮಾಜದ ಪ್ರತೀ ರಂಗದಲ್ಲಿಯೂ ಮಹಿಳೆ ತನ್ನದೇ ಆದ ಸಾಧನೆ ಮಾಡುವ ಮೂಲಕ ಗುರುತಿಸಿಕೊಂಡಿದ್ದಾಳೆ. ಹಾಗೆಯೆ ಅವಳಿಗೂ ಸಹ ಸಮನಾದ ಬದುಕುವ ಹಕ್ಕು ನೀಡಬೇಕಿದೆ ಮತ್ತು ರಾಜಕೀಯ ಸೇರಿದಂತೆ ಎಲ್ಲ ವಿಭಾಗಗಳಲ್ಲಿಯೂ ಅವಳಿಗೆ ಸಮನಾದ ಸ್ಥಾನಮಾನ ದೊರಕಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ವಿಜಯಪುರ ಮಹಾನಗರ ಪಾಲಿಕೆಯ ಮೇಯರ್ ಮೇಹಜಬೀನ್ ಹೊರ್ತಿ ಮಾತನಾಡಿ, ನಮ್ಮ ಊರಲ್ಲಿಯೇ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾನಿಲಯ ಇರುವುದು ನಮ್ಮ ಹೆಮ್ಮೆ, ಅದರಂತೆ ನೀವೆಲ್ಲರೂ ಸಹ ಈ ನಿಮ್ಮ ಬದುಕಿನಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ವಿಶ್ವವಿದ್ಯಾನಿಲಯದ ಕೀರ್ತಿ ಹೆಚ್ಚಿಸಬೇಕು ಮತ್ತು ನಮ್ಮತ್ತ ಇಡೀ ರಾಜ್ಯವೇ ತಿರುಗಿ ನೋಡುವಂತೆ ಮಾಡಬೇಕು ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲ ಸಚಿವ ಪ್ರೊ. ಎಚ್. ಎಂ. ಚಂದ್ರಶೇಖರ, ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿನಿಯರು ಮತ್ತಿತರರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಹಿಳಾ ಸಾಂಸ್ಕೃತಿಕ ಹಬ್ಬ-2024ರ ಅಧ್ಯಕ್ಷೆ ಲಕ್ಷ್ಮೀದೇವಿ.ವೈ ಸ್ವಾಗತಿಸಿದರು. ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಪಕಿ ಡಾ. ಕಲಾವತಿ ಕಾಂಬಳೆ ವಂದಿಸಿದರು. ದೈಹಿಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕಿ ಜ್ಯೋತಿ ಉಪಾಧ್ಯಕ್ಷ ನಿರೂಪಿಸಿದರು.
ಮ್ಯಾರಥಾನ
ಮಹಿಳಾ ಸಾಂಸ್ಕೃತಿಕ ಹಬ್ಬ-2024 ಪ್ರಯುಕ್ತ ಮಂಗಳವಾರ (ಮಾ.5) ಬೆಳಗ್ಗೆ 6ಗಂಟೆಗೆ ನಗರದ ಬಿ. ಎಲ್.ಡಿ.ಇ, ಗೊಲಗುಂಬಜ, ಜಿಲ್ಲಾ ನ್ಯಾಯಾಲಯ ಹಾಗೂ ಸೈನಿಕ ಶಾಲೆ ಹೀಗೆ ನಾಲ್ಕು ದಿಕ್ಕಿನಿಂದ ಆರಂಭವಾದ ಮ್ಯಾರಥಾನ್ನಲ್ಲಿ ವಿದ್ಯಾರ್ಥಿನಿಯರು ಮಹಿಳಾ ಘೋಷವಾಕ್ಯಗಳ ಜೊತೆಗೆ ಕರಪತ್ರಗಳನ್ನು ಹಂಚಿ ಸಾರ್ವಜನಿಕರ ಗಮನ ಸೆಳೆದರು.
ಮ್ಯಾರಥಾನ್ನಲ್ಲಿ ಮಹಿಳಾ ವಿವಿ ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್.ಎಂ. ಚಂದ್ರಶೇಖರ್ ಹಾಗೂ ಕ್ರೀಡಾ ವಿಭಾಗದ ಮುಖ್ಯಸ್ಥ ಹಾಗೂ ನಿರ್ದೇಶಕರಾದ ಪ್ರೊ. ಸಕ್ಸಲ್ ಹೂವಣ ಹಾಗೂ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.