“ಬಾಬ್ರಿ ಮಸೀದಿ ಧ್ವಂಸದಲ್ಲಿ ಭಾಗಿಯಾಗಿದ್ದ ಬಲ್ಬೀರ್ ಸಿಂಗ್ ಈಗ ನೂರು ಮಸೀದಿ ಕಟ್ಟಿಸಿದ್ದಾರೆ…”
“ಹಿಂದುತ್ವಕ್ಕೆ ಅಂಬೇಡ್ಕರ್ ವಾದವೇ ಪರ್ಯಾಯ” ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಭಿಪ್ರಾಯಪಟ್ಟರು.
ಬೆಂಗಳೂರಿನ ಗಾಂಧಿ ಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ “ನವೀನ್ ಸೂರಿಂಜೆ ಅವರು ಬರೆದಿರುವ ’ಮಹೇಂದ್ರ ಕುಮಾರ್- ನಡುಬಗ್ಗಿಸದ ಎದೆಯ ದನಿ’ ಕೃತಿ ಬಿಡುಗಡೆ ಕಾರ್ಯಕ್ರಮ”ದಲ್ಲಿ ಅವರು ಮಾತನಾಡಿದರು.
ಬಿಜೆಪಿ ಮತ್ತು ಆರ್ಎಸ್ಎಸ್ ಅನ್ನು ಬೈದುಕೊಂಡು ಇದ್ದರೆ ಒಂದು ಲೆಕ್ಕದವರೆಗೆ ಸರಿ ಎನಿಸಬಹುದು. ಆದರೆ ನಮ್ಮದೇ ಆದ ನರೇಷನ್ ಬೇಕು. ಅದಕ್ಕೊಬ್ಬರು ಹೀರೋ ಬೇಕು. ಕಥೆ ಬರೆಯುವುದಕ್ಕೆ ಒಬ್ಬ ಹೀರೋ ಇರಬೇಕಾಗುತ್ತದೆ. ಈ ಹಿಂದುತ್ವವಾದಕ್ಕೆ ಪರ್ಯಾಯವಾಗಿ ಯಾವುದಾದರೂ ವಾದ ಇದ್ದರೆ ಅದು ಅಂಬೇಡ್ಕರ್ವಾದ ಎಂದು ತಿಳಿಸಿದರು.
ಆರ್ಎಸ್ಎಸ್ನಲ್ಲಿರುವ ನಮ್ಮ ಸ್ನೇಹಿತರ ಜೊತೆಯಲ್ಲಿ ನಾನು ಸಾಕಷ್ಟು ಸಲ ಮಾತನಾಡುತ್ತೇನೆ. ತಪ್ಪು ವಿಚಾರಗಳನ್ನು ಪದೇ ಪದೇ ಅವರಿಗೆ ಹೇಳಿಕೊಡಲಾಗುತ್ತದೆ. ನಾವು ಅಂಬೇಡ್ಕರ್ ಸಾಹೇಬರನ್ನು ಮಾರ್ಕೆಟಿಂಗ್ ಮಾಡುವುದರಲ್ಲಿ ಎಡವಿದ್ದೇವೆ ಎಂಬುದು ನನ್ನ ಅಭಿಪ್ರಾಯ. ಅಂಬೇಡ್ಕರ್ ಅವರು ಕೇವಲ ಎಸ್ಸಿ, ಎಸ್ಟಿಗೆ ನಾಯಕರಲ್ಲ. ಈ ದೇಶದ ಪ್ರತಿಯೊಬ್ಬ ಹೆಣ್ಣುಮಕ್ಕಳಿಗಾಗಿ ಕಾನೂನು ಮಾಡಿದ್ದು ಬಾಬಾ ಸಾಹೇಬರು ಮಾತ್ರ. ಕೇವಲ ಎಸ್ಸಿ ಎಸ್ಟಿ ಜನಾಂಗದವರಿಗಾಗಿ ಕಾನೂನು ಮಾಡಿಲ್ಲ” ಎಂದರು.
“ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಸಾಹೇಬರ ಕುರಿತು ಗಟ್ಟಿದನಿಯಲ್ಲಿ ಹೇಳಬೇಕು. ನನ್ನ ಸಮೀತ ಕಲಿಕೆಯಲ್ಲಿ ಹೇಳುತ್ತಾನೆ. ಈ ಹಿಂದೂ ಕೋಡ್ ಬಿಲ್ ಮೂಲಕ ಕೋಮುವಾದಿ ನರೇಷನ್ ಹತ್ತಿಕ್ಕಬಹುದು” ಎಂದು ಹೇಳಿದರು.
“ಅಸ್ಸಾಂ ಮುಖ್ಯಮಂತ್ರಿ ಮೊನ್ನೆ, ‘ಶೂದ್ರರು ಇನ್ನಾದರೂ ಕ್ಷತ್ರಿಯರ, ಬ್ರಾಹ್ಮಣರ, ವೈಶ್ಯರ ಕೆಲಸಗಳನ್ನು ಮಾಡಿಕೊಡಬೇಕು’ ಎಂದಿದ್ದಾರೆ. ಈ ರೀತಿಯ ಮನಸ್ಥಿತಿ ಈಗಲೂ ಇದೆ. ಬಸವಣ್ಣನವರು ಶೂದ್ರರನ್ನು, ಅಸ್ಪೃಶ್ಯರನ್ನು ಮೇಲೆ ತರಲು ಯತ್ನಿಸಿದರು. ಬಸವಣ್ಣನವರನ್ನು ನಮ್ಮ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿತು. ಬಸವಣ್ಣನವರ ವಿಚಾರಗಳನ್ನು ಗಟ್ಟಿಯಾಗಿ ನಮ್ಮ ಜನರತ್ತ ತೆಗೆದುಕೊಂಡು ಹೋಗಬೇಕು ಎಂದು ಆಶಿಸಿದರು.
“ಕೋಮು ಸೌಹಾರ್ದಕ್ಕೆ ಘರ್ ವಾಪಸಿ ಆದವರು ಮಹೇಂದ್ರ ಕುಮಾರ್. ಅಂತೆಯೇ ಸುಧೀರ್ ಕುಮಾರ್ ಮುರೊಳ್ಳಿ, ನಿಕೇತ್ ರಾಜ್ ಮೌರ್ಯ ಕೂಡ ಘರ್ ವಾಪ್ಸಿ ಆದವರು. ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದವರಲ್ಲಿ ಒಬ್ಬನಾದ ಪುಣ್ಯಾತ್ಮ ಬಲ್ಬೀರ್ ಸಿಂಗ್ನನ್ನು ಜನ ಮರೆತ್ತಿದ್ದಾರೆ. ಆ ಬಲ್ಬೀರ್ ಸಿಂಗ್ ಇಂದು ನೂರು ಮಸೀದಿಗಳನ್ನು ಕಟ್ಟಿಸಿದ್ದಾರೆ” ಎಂದು ನೆನೆದರು.
ಪಾಪ, ಬಲ್ಬೀರ್ಸಿಂಗ್ನನ್ನು ಅವರು ರಾಮಮಂದಿರ ಉದ್ಘಾಟನೆಗೆ ಕರೆಯಲಿಲ್ಲ. ಇಂತಹ ನೂರಾರು ಉದಾಹರಣೆಗಳಿವೆ. ಆದರೆ ನಾವು ಕಷ್ಟಕಾಲದಲ್ಲಿ ಸಿಲುಕಿದ್ದೇವೆ. ಅಂಬೇಡ್ಕರ್, ಬಸವಣ್ಣನವರ ವಿಚಾರಗಳನ್ನು ಹೇಳಬೇಕಿದೆ ಎಂದು ಮನವರಿಕೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ನಟ ಪ್ರಕಾಶ್ ರಾಜ್ ಅವರು ರಿಯಲ್ ಲೈಫ್ನಲ್ಲಿ ಹೀರೋ ಆಗಿದ್ದಾರೆ. ಅವರು ಇಟ್ಟಿರುವ ಹೆಜ್ಜೆ ಸುಲಭದ್ದಲ್ಲ. ಕಷ್ಟಕರವಾಗಿದೆ. ಸೂರಿಂಜೆ ಅವರು ತಮ್ಮ ನಾಲ್ಕನೇ ಪುಸ್ತಕದಲ್ಲಿ ಮಹೇಂದ್ರ ಕುಮಾರ್ ಅವರ ಕುರಿತು ತಿಳಿಸಿದ್ದಾರೆ. ಕೋಮುವಾದಿ ಸಂಘಟನೆಯವರು ಯುವಕರನ್ನು ಹೇಗೆ ಮಿಸ್ಯೂಸ್ ಮಾಡುತ್ತಾರೆ ಎಂಬುದನ್ನು ಈ ಕೃತಿಯಲ್ಲಿ ತೆರೆದಿಟ್ಟಿದ್ದಾರೆ ಎಂದು ಶ್ಲಾಘಿಸಿದರು.
ಜಪಾನ್ ಇಂದು ಬಾಹ್ಯಾಕಾಶ ಪ್ರವಾಸೋದ್ಯಮದ ಬಗ್ಗೆ ಮಾತನಾಡುತ್ತದೆ. ಮಂಗಳ, ಚಂದ್ರನಲ್ಲಿ ಹೋಗಬೇಕೆಂದು ಯೋಚಿಸುತ್ತಿದೆ. ಚೀನಾ ದೇಶವು ’ತ್ರಿ ಗಾರ್ಜಸ್ ಡ್ಯಾಮ್’ ಕಟ್ಟಿದೆ. ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರ ಇದೆಕ್ಕೆಲ್ಲ ಎಷ್ಟು ಹಣ ಖರ್ಚು ಮಾಡುತ್ತಿದ್ದಾರೆ. ನಮ್ಮನ್ನು ಅವರೊಂದಿಗೆ ಹೋಲಿಕೆ ಮಾಡಿಕೊಂಡರೆ ಉತ್ತರ ಸಿಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ನಟ ಪ್ರಕಾಶ್ ರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃತಿಯ ಲೇಖಕರಾದ ನವೀನ್ ಸೂರಿಂಜೆ, ಹೋರಾಟಗಾರರಾದ ಮನೀರ್ ಕಾಟಿಪಳ್ಳ, ಹೈಕೋರ್ಟ್ ವಕೀಲರಾದ ಎಸ್.ಬಾಲನ್, ಶಾಸಕಿ ನಯನಾ ಮೋಟಮ್ಮ, ಕಾಂಗ್ರೆಸ್ ನಾಯಕರು ಹಾಗೂ ಮಹೇಂದ್ರ ಕುಮಾರ್ ಒಡನಾಡಿಗಳಾದ ಸುಧೀರ್ ಕುಮಾರ್ ಮುರೊಳ್ಳಿ, ನಿಕೇತ್ ರಾಜ್ ಮೌರ್ಯ ಕಾರ್ಯಕ್ರಮದಲ್ಲಿ ಹಾಜರಿದ್ದರು. ಹೋರಾಟಗಾರ್ತಿ ನಜ್ಮಾ ಚಿಕ್ಕನೇರಳೆ ಅವರು ಕಾರ್ಯಕ್ರಮ ನಿರೂಪಿಸಿದರು.
