ನಮ್ಮ ಸಂವಿಧಾನವನ್ನು ಉಳಿಸುವುದು ನಮ್ಮ ಕೆಲಸವಾಗಿದ್ದು, ಬಹುದೊಡ್ಡ ಜವಾಬ್ದಾರಿಯಾಗಿದೆ. ಏನೂ ಅರಿಯದ ತಳ ಸಮುದಾಯದವರನ್ನು ಜಾತಿ-ಕೋಮುಗಳ ಸಂಘರ್ಷಗಳಲ್ಲಿ ಸಿಲುಕಿಸುತ್ತಿದ್ದಾರೆ. ಇವೆಲ್ಲವನ್ನು ತಡೆಗಟ್ಟಲು ನಾವು ನಾಗರಿಕರಾಗಿ ಈ ಚುನಾವಣೆಯಲ್ಲಿ ಪ್ರಜಾಪ್ರಭುತ್ವ ಉಳಿಸಬೇಕು. ಸಂವಿಧಾನವನ್ನು ಉಳಿಸಬೇಕು ಎಂದು ವೀರಸಂಗಯ್ಯ ಹೇಳಿದರು.
ವಿಜಯನಗರ ಜಿಲ್ಲೆ ಹೊಸಪೇಟೆ ನಗರದ ಡಾ ಬಿ ಆರ್ ಅಂಬೇಡ್ಕರ ಭವನದಲ್ಲಿ ಎದ್ದೇಳು ಕರ್ನಾಟಕದಿಂದ ಹಮ್ಮಿಕೊಂಡಿದ್ದ ನಾಗರಿಕ ಅಭಿಯಾನ-2024 ಕಾರ್ಯಕ್ರಮದಲ್ಲಿ ಮಾತನಾಡಿದರು.
“ಈ ದಿನ.ಕಾಮ್ ವಿಧಾನಸಭೆಯಲ್ಲಿ ಸಮೀಕ್ಷೆಯಲ್ಲಿ ಉತ್ತಮ ಫಲಿತಾಂಶ ಕೊಟ್ಟಿದೆ. ಸಿದ್ದರಾಮಯ್ಯ ಅವರಿಗಾಗಲಿ, ಡಿ ಕೆ ಶಿವಕುಮಾರ್ ಅವರಿಗಾಗಲಿ ಸಮೀಕ್ಷೆಯ ಒಳ ಅರಿವು ಗೊತ್ತಿರಲಿಲ್ಲ. ಈ ದಿನ.ಕಾಮ್ ಸಮೀಕ್ಷೆ ಬಳಿಕ ಅವರಿಗೆ ಗೊತ್ತಾಗಿದೆ. ದೇಶ ಉಳಿಯಬೇಕೆಂದರೆ, ಸಂವಿಧಾನ ಉಳಿಸಬೇಕು” ಎಂದರು.
ಮಹಮದ್ ಯೂನಿಸ್ ಮಾತನಾಡಿ, ಭ್ರಷ್ಟಾಚಾರ ಮುಕ್ತ ಭಾರತ ಮಾಡುತ್ತೇವೆಂದು ಮೋದಿಯವರು ಹೇಳಿದ್ದರು. ಅಣ್ಣ ಅಝ಼ಾರೆ ಅವರನ್ನ ಮನೆಗೆ ಕಳಿಸಿದ್ದಾರೆ. ಅಚ್ಛೇ ದಿನ್ ಆಯಾಂಗೆ ಎಂದು ಹೇಳಿದ್ದರು, ಬೇಟಿ ಬಚಾವೋ, ಬೇಟಿ ಪಡಾವೋ ಎಂದು ಹೇಳಿದ್ದಾರೆ. ಆದರೆ ನಮ್ಮ ಭಾರತ ದೇಶದಲ್ಲಿ ಹತ್ತು ವರ್ಷದಲ್ಲಿ 15 ಲಕ್ಷ ಮಹಿಯರು ಕಾಣೆಯಾಗಿದ್ದಾರೆ. ಹಾಗಾದರೆ ಮೋದಿ ರಾಜಕಾರಣ ಎಲ್ಲಿ ಹೋಗಿದೆ. ಇವುಗಳ ಬಗ್ಗೆ ಗಮನಿಸದ ಕೆಲವರು ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆಂದು ಹೇಳುತ್ತಾರೆ” ಎಂದರು.
ಫಾದರ್ ಸಂಸ್ತಿ ಬೆಂಗಳೂರು ಮಾತನಾಡಿ, “ಎಲ್ಲ ಸಮುದಾಯವನ್ನು ಒಗ್ಗೂಡಿಸುವ ಕೆಲಸವನ್ನು ಎದ್ದೇಳು ಕರ್ನಾಟಕ ಮಾಡುತ್ತಿದೆ. ಈ ಬಾರಿ ಕ್ರೈಸ್ತ ಧರ್ಮದವರು ಬಿಜೆಪಿಗೆ ಮತ ಹಾಕಬಾರದೆಂದು ಕರ್ನಾಟಕದ ಎಲ್ಲ ಚರ್ಚ್ಗಳಲ್ಲಿ ನಿರ್ಧಾರ ಮಾಡಿದೆ. ಏಕೆಂದರೆ ಕ್ರೈಸ್ತ ಧರ್ಮದ ಮೇಲೆ ಸಾಕಷ್ಟು ಹಲ್ಲೆಗಳಾಗುತ್ತಿವೆ. ದಲಿತ ಮತ್ತು ಬುಡಕಟ್ಟು ಸಮುದಾಯದ 131 ಸೀಟುಗಳಿವೆ. ಶೇ.13ರಷ್ಟು ದಲಿತರ ಮೇಲೆ ಹಲ್ಲೆಗಳಾಗಿವೆ” ಎಂದು ತಿಳಿಸಿದರು.
“ಮಾನವ ಜಾತಿ ತಾನೊಂದೆವಲಂ’ ಎಂದು ಸಾವಿರ ವರ್ಷದ ಹಿಂದೆ ನಮ್ಮ ಆದಿಕವಿ ಪಂಪ ಸಾರಿದ್ದಾರೆ. ‘ನಮ್ಮದು ಸರ್ವಜನಾಂಗದ ಶಾಂತಿಯ ತೋಟ’ವೆಂದು ಕೊಂಡಾಡಿದವರು ಕುವೆಂಪು. ಇಂಥ ನಾಡಿನಲ್ಲಿ ಬೌದ್ಧ, ಜೈನ, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ, ಸಿಖ್ ಮೊದಲಾದ ಧಾರ್ಮಿಕ ಪರಂಪರೆಗಳು ಭಯವಿಲ್ಲದೆ ಬೆಳೆದವು. ಸುಮಾರು 72 ಭಾಷೆಗಳಿರುವ ನಮ್ಮ ರಾಜ್ಯದಲ್ಲಿ ಹಲವು ಸಮುದಾಯಗಳು ಸೌಹಾರ್ದಯುತವಾಗಿ ಬಾಳಿ ಬದುಕಿದ ಪರಂಪರೆ ನಮ್ಮದು” ಎಂದು ಹೇಳಿದರು.
“ಭವ್ಯ ಭಾರತದಲ್ಲಿ ಇಂದು ಜನರ ನಡುವೆ ವಿಷಬೀಜ ಬಿತ್ತಲಾಗುತ್ತಿದೆ. ದ್ವೇಷ ಭಾಷಣಗಳು ಎಗ್ಗಿಲ್ಲದೆ ಮುಂದುವರೆಯುತ್ತಿವೆ. ಈ ಬಿಕ್ಕಟ್ಟಿನಲ್ಲಿ ನಮ್ಮ ನಾಡು ದೀರ್ಘ ಉಸಿರೆಳೆದುಕೊಂಡು ಮತ್ತೆ ಚೇತರಿಸಿಕೊಳ್ಳುತ್ತದೆಯೋ ಇಲ್ಲವೋ ಎಂಬುದನ್ನು ನಡೆಯಲಿರುವ ಲೋಕಸಭಾ ಚುನಾವಣೆ ನಿರ್ಧರಿಸುತ್ತದೆ” ಎಂದು ಹೇಳಿದರು.
“ಸ್ವಾತಂತ್ರ್ಯ ನಂತರದ ಇತಿಹಾಸದಲ್ಲೇ ಕಂಡಿಲ್ಲದ ಕೆಡುಕಿನ ದಿನಗಳನ್ನು ಕಳೆದ ನಾಲ್ಕು ವರ್ಷಗಳಲ್ಲಿ ಕರ್ನಾಟಕ ಕಂಡಿದೆ. ಜನಮತವಿಲ್ಲವಾದರೂ ಅನೈತಿಕವಾಗಿ ಶಾಸಕರನ್ನು ಖರೀದಿಸಿ ಅಧಿಕಾರ ಕಬಳಿಸಿದ ಸರ್ಕಾರ ಈ ನಾಡಿಗೆ ತಂದದ್ದು ಅವನತಿ ಮಾತ್ರ. ಡಬಲ್ ಎಂಜಿನ್ ಸರ್ಕಾರ ಖಜಾನೆಗೆ ಡಬಲ್ ಕನ್ನ ಹಾಕಿದೆ. ಎಂದೆಂದೂ ಕಾಣದಂತಹ ಭ್ರಷ್ಟಾಚಾರ, ಸಾಮಾನ್ಯರ ಬದುಕ ಹಿಂಡುವ ಬೆಲೆ ಏರಿಕೆ, ಶಿಕ್ಷಣ- ಆರೋಗ್ಯದ ಹೆಸರಿನಲ್ಲಿ ಹಗಲು ದರೋಡೆ, ದುಡಿಯುವವರನ್ನು ಅನಾಥರಾಗಿಸಿದ ಸಾಲು ಸಾಲು ಕಾಯ್ದೆಗಳು, ಯುವಜನರ ಕನಸು ಕಮರಿಸುವ ನಿರುದ್ಯೋಗ, ದಿಕ್ಕುಕಾಣದಾಗಿರುವ ಮಾರುಕಟ್ಟೆ, ಕುಸಿದಿರುವ ವಹಿವಾಟು, ಮೂಗುಮಟ್ಟ ತಲುಪಿರುವ ಸಾಲಗಳು, ಮಿತಿಮೀರಿ ಹೆಚ್ಚಾಗಿರುವ ಮಹಿಳೆಯರ ಮೇಲಿನ ಹಿಂಸೆ, ಜಾತಿ ಹೆಸರಿನಲ್ಲಿ ದೌರ್ಜನ್ಯ – ದಂಡ ಬಹಿಷ್ಕಾರಗಳು, ಸಿಕ್ಕದ ಪಾಲಿಗಾಗಿ ಜಾತಿಜಾತಿಗಳ ನಡುವೆ ಪೈಪೋಟಿ, ಅಸ್ಪೃಶ್ಯರಾಗುತ್ತಿರುವ ಅಲ್ಪಸಂಖ್ಯಾತರು, ಬಾಯಿಬಿಟ್ಟರೆ ಧಾರ್ಮಿಕ ದ್ವೇಷದ ದುರ್ಗಂಧ ಇವೆಲ್ಲಾ ಈ ಸರ್ಕಾರದ ಆಳ್ವಿಕೆಯ ಫಲಗಳು” ಎಂದರು.
“ಈ ದುರಂತಮಯ ವಾತಾವರಣದಿಂದ ಕರ್ನಾಟಕವನ್ನು ಹೊರತರುವ ಒಂದು ಸಾಧ್ಯತೆ ಈಗ ನಾಡಿನ ಮುಂದಿದೆ. ಮುಂಬರುವ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲುತ್ತದೆ ಎಂಬುದಕ್ಕಿಂತ ಈ ಸುಲಿಗೆ ಸರ್ಕಾರ ಮೊದಲು ಸೋಲಬೇಕು, ಆಮೇಲೆ ಗೆದ್ದವರ ಜೊತೆ ಜನಹಿತದ ಮರುಸ್ಥಾಪನೆಗಾಗಿ ಗುದ್ದಾಡಬೇಕು. ಇದೇ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವ ವಿಧಾನವಾಗಿದೆ” ಎಂದು ತಿಳಿಸಿದರು.
“ನಾಡಿಗೆ ಮತ್ತು ನಾಡಿನ ಜನತೆಗೆ ಅಪಾರ ಸಂಕಟ ತಂದ ಈ ಸರ್ಕಾರ ತೊಲಗಬೇಕು ಎಂಬುದರಲ್ಲಿ ಬಹುತೇಕ ಜನರಿಗೆ ಸಹಮತವಿದೆ. ಆದರೆ ಯಾರಿಗೆ ಮತ ಹಾಕಬೇಕು? ಎಂಬ ಗೊಂದಲವಿದೆ. ಈ ಗೊಂದಲದಿಂದ ಹೊರಬಂದು ಖಚಿತ ತೀರ್ಮಾನ ತೆಗೆದುಕೊಳ್ಳಬೇಕಿದೆ. ಮತ ವಿಭಜನೆಯಾದರೆ ಒಡೆದಾಳುವ ಪಕ್ಷಕ್ಕೇ ಲಾಭವಾಗುತ್ತದೆ. ಹಾಗಾಗಿ ಜವಬ್ದಾರಿಯುತ ನಾಗರಿಕರಾದ ನಾವು ಮೂರು ಮೂಲ ಸೂತ್ರಗಳನ್ನಾಧರಿಸಿ ಖಚಿತ ನಿಲುವನ್ನು ತಾಳಬೇಕಿದೆ” ಎಂದು ಹೇಳಿದರು.
“ವೋಟು ವ್ಯರ್ಥವಾಗಬಾರದು, ಬಿಜೆಪಿಯನ್ನು ಸೋಲಿಸಬಲ್ಲ ಅಭ್ಯರ್ಥಿಗೆ ಮಾತ್ರವೇ ಮತ ಹಾಕಬೇಕು. ಮತ ವಿಭಜನೆಯಾಗಬಾರದು, ಬಿನ್ನಾಭಿಪ್ರಾಯವಿದ್ದರೆ ಕೂತು ಮಾತನಾಡಿಕೊಂಡು ಒಮ್ಮತದ ತೀರ್ಮಾನಕ್ಕೆ ಬಂದು ಏಕ ಚಿತ್ತದ ಮತದಾನ ಮಾಡಬೇಕೆಂದು ನಾಡಿನ ಬಾಂಧವರಿಗೆ ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತಿದ್ದೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ಸಂವಿಧಾನಕ್ಕೆ ತಿದ್ದುಪಡಿ ತರಲು ಬಿಜೆಪಿ 400 ಸೀಟು ಗೆಲ್ಲಬೇಕು: ಸಂಸದ ಹೆಗಡೆ
“ಈ ಸುಲಿಗೆ ಸರ್ಕಾರ ತೊಲಗಿ ಹೊಸ ವ್ಯವಸ್ಥೆ ತೆರೆದುಕೊಳ್ಳಬೇಕಾದರೆ ಮರೆಯದೆ ಮತದಾನದ ಈ ಮೂರು ಸೂತ್ರಗಳನ್ನು ಪಾಲಿಸೋಣ. ಪ್ರತಿಯೊಬ್ಬರೂ ಮತದಾನ ಮಾಡಬೇಕು. ಬಿಜೆಪಿಯನ್ನು ಸೋಲಿಸಬಲ್ಲವರಿಗೇ ಮತ ಹಾಕಬೇಕು. ಸೋಲಿಸಬಲ್ಲವರು ಯಾರೆಂಬ ಕುರಿತು ಚರ್ಚಿಸಿ ಏಕ ಧೃಡ ತೀರ್ಮಾನಕ್ಕೆ ಬರಬೇಕು” ಎಂದು ಹೇಳಿದರು.
