ಕೇಂದ್ರಿಯ ವಿವಿ ಬರಲು ನಡೆಸಿದ ಹೋರಾಟ ಕಣ್ಣ ಮುಂದಿದೆ. ಖರ್ಗೆ ಸಾಹೇಬರ ಪರಿಶ್ರಮ ಅಪರಿಮಿತವಾಗಿದೆ. ಇಲ್ಲಿನ ಪರಿಸ್ಥಿತಿ ಗಮನಿಸಿದರೆ ಇಲ್ಲಿನ ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿದಿಲ್ಲ. ಇದನ್ನು ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ. ಜಾತಿ, ಧರ್ಮದ ಆಧಾರದ ಮೇಲೆ ಸಮಾಜವನ್ನು ಇಬ್ಭಾಗಿಸುವವರೇ ನಿಜವಾದ ದೇಶದ್ರೋಹಿಗಳು ಎಂದು ಗ್ರಾಮಿಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಆಳಂದ ತಾಲೂಕಿನ ಕಡಗಂಚಿಯ ಕೇಂದ್ರಿಯ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಎಸ್ಸಿ/ಎಸ್ಟಿ ನೌಕರರ ಕಲ್ಯಾಣ ಸಂಘ ಏರ್ಪಡಿಸಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಸಂವಿಧಾನದ ತತ್ವಗಳು ವಿಚಾರಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಚಾರ ಸಂಕಿರಣ ಏರ್ಪಡಿಸಲು ವಿವಿಯ ರಿಜಿಸ್ಟ್ರಾರ್ ಅವರ ಹಾಕಿರುವ ಷರತ್ತುಗಳ ಪತ್ರ ಪ್ರದರ್ಶಿಸಿ ಕಟುವಾಗಿ ಟೀಕಿಸಿದ ಸಚಿವರು, “ಶೈಕ್ಷಣಿಕ ಸಮಗ್ರತೆಗೆ ಧಕ್ಕೆ ತರದಂತೆ ಕಾರ್ಯಕ್ರಮ ನಡೆಸಬೇಕೆನ್ನುವ ಷರತ್ತು ಖಂಡನೀಯ. ಇಂದಿನ ಕಾರ್ಯಕ್ರಮದಲ್ಲಿ ಜನರಿಂದ ಆಯ್ಕೆಯಾದ ಈ ಕ್ಷೇತ್ರದ ಶಾಸಕರು ಹಾಗೂ ಸರ್ಕಾರದ ಭಾಗವಾಗಿರುವ ನಾನು ಭಾಗವಹಿಸುವ ಕಾರ್ಯಕ್ರಮಕ್ಕೆ ಇಷ್ಟೊಂದು ಷರತ್ತು ಹಾಗೂ ಪೊಲೀಸ್ ಭದ್ರತೆ ಹಾಕುವ ಅವಶ್ಯಕತೆ ಏನಿತ್ತು?. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯೊಂದಿಗೆ ಚರ್ಚಿಸಿ ವಿವಿಯ ಕುಲಪತಿ ಅಥವಾ ರಿಜಿಸ್ಟ್ರಾರ್ಗೆ ಪತ್ರ ಬರೆಯಲು ಕೋರುತ್ತೇನೆ” ಎಂದರು.
“ವಿವಿಯಲ್ಲಿ ಸಂವಿಧಾನ ವಿರೋಧಿ ಚಟುವಟಿಕೆಗಳು ನಡೆದರೆ ಅದನ್ನು ಕಾನೂನಿನ ಅಡಿಯಲ್ಲಿ ಪ್ರಶ್ನಿಸಿ ನಾನು ನಿಮ್ಮೊಂದಿಗೆ ಇದ್ದೇನೆ, ಇರುತ್ತೇನೆ. ವಿವಿಗೆ ಬರದಂತೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಾನು ಪದೇ ಪದೆ ಬರುತ್ತೇನೆ. ಒಟ್ಟಿನಲ್ಲಿ ಉಸಿರುಕಟ್ಟುವ ವಾತಾವರಣ ನಿರ್ಮಾಣವಾಗದಂತೆ ತಡೆಯಬೇಕು” ಎಂದರು.
ವಿವಿಯಲ್ಲಿ ವಿದ್ಯಾರ್ಥಿಗಳ ವಿರುದ್ಧ ಒಟ್ಟು 25 ಕೇಸುಗಳು ದಾಖಲಾಗಿರುವ ಬಗ್ಗೆ ಪೊಲೀಸರೊಂದಿಗೆ ವೇದಿಕೆಯಿಂದಲೇ ಮಾತನಾಡಿದ ಸಚಿವರು, ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಕೇಸುಗಳ ವಿವರವನ್ನು ನಾಳೆ ನನಗೆ ತಿಳಿಸಬೇಕು” ಎಂದು ಸ್ಥಳದಲ್ಲಿದ್ದ ಡಿಎಸ್ಪಿಗೆ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ʼಕೊನೆಯವರೆಗೆ ಬಯಲು ಸೀಮೆಗೆ ನೀರು ಕೊಡಿʼ ಎಂದು ಹೋರಾಡಿದವರು ಪರಮಶಿವಯ್ಯ: ಆಂಜನೇಯ ರೆಡ್ಡಿ
“ಭಾರತ ಪ್ರಪಂಚದ ಅತಿದೊಡ್ಡ ಪ್ರಜಾತಂತ್ರ ರಾಷ್ಟ್ರವಾಗಿ ಉಳಿದಿರುವುದಕ್ಕೆ ಕಾರಣವೇ ಸಂವಿಧಾನವಾಗಿದೆ. ಭಾರತದ ಸಂವಿಧಾನ ರಚನೆಯ ಸಂದರ್ಭದಲ್ಲಿ ಸಾಕಷ್ಟು ಚರ್ಚೆಗಳು ನಡೆದು ಕೊನೆಗೆ ಮಹಾತ್ಮಾ ಗಾಂಧಿ ಅವರು ಡಾ ಬಾಬಾಸಾಹೇಬರಿಗೆ ಆ ಜವಾಬ್ದಾರಿ ವಹಿಸಿದರು. ಅದರಂತೆ ಏಳು ಮಂದಿ ಸದಸ್ಯರ ಸಮಿತಿ ರಚಿಸಲಾಯಿತು” ಎಂದು ವಿವರಿಸಿದರು.
ಮಾಹಿತಿ :ಸಹಜೀದ್
