ಪಂಚ ಗ್ಯಾರಂಟಿ ಯೋಜನೆಗಳ ಮೂಲಕ 1 ಕೋಟಿ 10 ಲಕ್ಷ ಜನರನ್ನು ಬಡತನ ರೇಖೆಯಿಂದ ಮೆಲೇತ್ತುವ ಮೂಲಕ ಕ್ರಾಂತಿಕಾರಕ ಕ್ರಮ ಕೈಗೊಳ್ಳಲಾಗಿದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ ಹೇಳಿದರು.
ಮುಂಡರಗಿ ತಾಲೂಕ ಆಡಳಿತದಿಂದ ಮಂಗಳವಾರ ಡಂಬಳ ತೋಂಟದಾರ್ಯ ಮಠದಲ್ಲಿ ಜರುಗಿದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
“ಸಮಾವೇಶದಲ್ಲಿ ದೊಡ್ಡ ಮಟ್ಟದಲ್ಲಿ ಮಹಿಳೆಯರು ಸೇರಿದ್ದು ಸಂತಸ ತಂದಿದೆ. ಸರ್ಕಾರದ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಶಕ್ತಿ ಬಂದಿದ್ದು, ಮಹಿಳೆಯರಲ್ಲಿ ಮನೆ ನಡೆಸಿಕೊಂಡು ಹೋಗುವ ಆತ್ಮವಿಶ್ವಾಸ ಗ್ಯಾರಂಟಿ ಯೋಜನೆಯಿಂದ ಮೂಡಿದೆ” ಎಂದರು.
“ಗ್ಯಾರಂಟಿ ಯೋಜನೆಯಿಂದ ಸರ್ಕಾರವು ದಿವಾಳಿ ಆಗುತ್ತದೆಂದು ಹಲವರು ಬೊಬ್ಬೆ ಹೊಡೆದರು. ಲೋಕಸಭಾ ಚುನಾವಣೆ ನಡೆದ ತಕ್ಷಣ ಗ್ಯಾರಂಟಿ ನಿಲ್ಲುತ್ತೆ ಎಂದು ಸುಳ್ಳು ಸುದ್ದಿ ಬಿತ್ತುತ್ತಾರೆ. ಅದಕ್ಕೆ ಗಮನ ಕೊಡಬಾರದು. ಹಾಗೂ ಗ್ಯಾರಂಟಿ ಯೋಜನೆಗೆ ಬೇಕಾದ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ನಲ್ಲಿ ಮೀಸಲಿಟ್ಟಿದ್ದಾರೆ” ಎಂದರು.
“ಗ್ಯಾರಂಟಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದರ ಮೂಲಕ ಜಿಲ್ಲೆ ಉತ್ತಮ ಸ್ಥಾನದಲ್ಲಿದೆ. ಮುಂಡರಗಿ ತಾಲೂಕಿನಲ್ಲಿ ಅನ್ನಭಾಗ್ಯ ಯೋಜನೆಯೂ ಪ್ರತಿಶತ 98, ಗೃಹ ಲಕ್ಷ್ಮಿ 97, ಜ್ಯೋತಿ 100, ಯುವನಿಧಿ ನೋಂದಾಯಿತರೆಲ್ಲರಿಗೂ ಜಾರಿ ಮಾಡಲಾಗಿದೆ. ಶಕ್ತಿ ಯೋಜನೆ ಮೂಲಕ ಜೂನ್ನಿಂದ ಈವರೆಗೆ 49.60 ಲಕ್ಷ ಮಂದಿ ಮಹಿಳೆಯರು ಪ್ರಯಾಣ ಮಾಡಿ ಗ್ಯಾರಂಟಿ ಯೋಜನೆಯ ಸದುಯೋಗ ಪಡೆದುಕೊಂಡಿದ್ದಾರೆ” ಎಂದರು.
“ಗದಗ ಜಿಲ್ಲೆಯಲ್ಲಿ ಅನ್ನಬಾಗ್ಯ ಯೋಜನೆಯನ್ನು ಪ್ರತಿಶತ 93, ಗೃಹ ಲಕ್ಷ್ಮೀ 99, ಗೃಹಜ್ಯೋತಿ 100, ಶಕ್ತಿ ಯೋಜನೆ ಮೂಲಕ 3.78 ಕೋಟಿ ಮಂದಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಈ ಪ್ರಮಾಣದಲ್ಲಿ ಯೋಜನೆಗಳ ಲಾಭ ನೇರವಾಗಿ ತಲುಪಿದೆ. ರಾಷ್ಟ್ರದಲ್ಲೇ ಗ್ಯಾರಂಟಿ ಯೊಜನೆಗಳು ಬಡವರ ಬಾಳಲ್ಲಿ ಆರ್ಥಿಕ ಅಭಿವೃದ್ಧಿ ಜತೆಗೆ ಕ್ರಾಂತಿಕಾರಿ ಬದಲಾವಣೆ ತಂದಿದೆ. ಯೊಜನೆಗಳ ಅನುಷ್ಠಾನದಲ್ಲಿ ಸಂಪೂರ್ಣವಾಗಿ ಸೋರಿಕೆ ತಡೆದು, ಭ್ರಷ್ಟಾಚಾರ ರಹಿತವಾಗಿ ನೇರವಾಗಿ ಅರ್ಹರಿಗೆ ತಲುಪಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ” ಎಂದರು.
“ವಿಧಾನಸಭಾ ಚುನಾವಣೆ ವೇಳೆ ಗ್ಯಾರಂಟಿ ಕಾರ್ಡ್ಗಳನ್ನು ಪ್ರತಿ ಮನೆ ಮನೆಗೆ ತಲುಪಿಸಿದ್ದೆವು. ಅದೇ ತರ ಸರ್ಕಾರ ರಚನೆಯಾದ ಮೇಲೆ ಯೋಜನೆಗಳ ಲಾಭ ಮನೆ ಮನೆಗೆ ತಲುಪಿಸಿದ್ದೇವೆ. ನುಡಿದಂತೆ ನಡೆಯುವ ಮೂಲಕ ಜನರ ವಿಶ್ವಾಸ ಉಳಿಸಿಕೊಂಡಿದ್ದೇವೆ” ಎಂದು ಹೇಳಿದರು.
“ಶಾಸಕ ಜಿ ಎಸ್ ಪಾಟೀಲ ಅವರು ಸಹ ಗ್ಯಾರಂಟಿ ಅನುಷ್ಠಾನ ಮಾಡುವಲ್ಲಿ ಮುತುವರ್ಜಿಯಿಂದ ಕಾರ್ಯ ನಿರ್ವಹಿಸಿ ಗ್ಯಾರಂಟಿ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಿದ್ದಾರೆ. ಆಡಳಿತ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯನ್ನು ತಂದಿದೆ. ಜಾಲವಾಡಿಗಿ ಏತ ನಿರಾವರಿಗೆ ಚಾಲನೆ ನೀಡಲಾಗಿದೆ” ಎಂದು ಸಚಿವ ಡಾ ಎಚ್ ಕೆ ಪಾಟೀಲ ತಿಳಿಸಿದರು.
“ರಾಜ್ಯದ ಖನಿಜ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ರೋಣ ಶಾಸಕ ಜಿ ಎಸ್ ಪಾಟೀಲ ಅವರು ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಸರ್ಕಾರ ಈಗಾಗಲೇ ಚುನಾವಣೆಯಲ್ಲಿ ತಮ್ಮೆಲ್ಲರಿಗೂ ನೀಡಿದ ಭರವಸೆಗಳನ್ನು ಈಡೇರಿಸಿ, ತಮ್ಮ ವಿಶ್ವಾಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದ ಸರ್ಕಾರ ಉಳಿಸಿಕೊಂಡಿದೆ. ಇಂದು ಗ್ಯಾರಂಟಿ ಸಮಾವೇಶ ಮೂಲಕ ಯೋಜನೆಗಳು ತಲುಪಿದ ಬಗ್ಗೆ ಖಚಿತ ಮಾಡಿಕೊಂಡು, ಅರ್ಹರಿಗೆ ಯೋಜನೆ ತಲುಪಿಸಲು ಸಮಾವೇಶ ಮಾಡಲಾಗುತ್ತಿದೆ” ಎಂದರು.
ಗ್ಯಾರಂಟಿ ಯೋಜನೆಗಳ ಲಾಭ ಶೇ.99ರಷ್ಟು ಜನರಿಗೂ ತಲುಪಲು ಕಾರಣೀಕರ್ತರಾದ ಸಚಿವ ಎಚ್ ಕೆ ಪಾಟೀಲ್ ಹಾಗೂ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಅವರಿಗೆ ಅಭಿನಂದನೆ ತಿಳಿಸಿದರು.
“ಗ್ಯಾರಂಟಿ ಯೋಜನೆಗಳು ನಿರಂತರವಾಗಿ ನಡೆಯಲಿವೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಇನ್ನು ಹೆಚ್ಚಿನ ಬಡವರ ಸೇವೆ ಮಾಡಲು ನಿರಂತರವಾಗಿ ನಿಮ್ಮ ಆಶೀರ್ವಾದವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ನೀಡಬೇಕು” ಎಂದು ಕೋರಿದರು
ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಮಾತನಾಡಿ, “ಸರ್ಕಾರದ ಯೋಜನೆಗಳ ಲಾಭವನ್ನು ಅರ್ಹರಿಗೆ ತಲುಪಿಸಿದ್ದೇವೆ. ಯೋಜನೆಗಳಿಂದ ನಿಮ್ಮ ಕುಟುಂಬದ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಿ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬಿಡದಿ ಫಾರ್ಮ್ಹೌಸ್ನಲ್ಲಿ 25 ತಲೆಬುರುಡೆ, ಮೂಳೆಗಳು ಪತ್ತೆ
ಮಹಿಳೆಯರಿಗಾಗಿ ಪ್ರಮುಖವಾಗಿ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿಮಾಡಿದೆ. ಶಕ್ತಿ ಯೋಜನೆಯಲ್ಲಿ 3.78 ಕೋಟಿ ಮಹಿಳೆಯರು ಜಿಲ್ಲೆಯಲ್ಲಿ ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯ ಯೋಜನೆ, ಗೃಹ ಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ ಉತ್ತಮ ಆರ್ಥಿಕ ಅಭಿವೃದ್ಧಿ ಹೊಂದಲು ಸಹಕಾರಿಯಾಗಿವೆ. ಮಕ್ಕಳ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಜಿ ಪಂ ಅಧ್ಯಕ್ಷೆ ಸುಜಾತ ದೊಡ್ಡಮನಿ, ತಹಶೀಲ್ದಾರ್ ಧನಂಜಯ ಮಾಲಗಿತ್ತಿ, ಉಪವಿಭಾಗಾಧಿಕಾರಿ ಡಾ.ವೆಂಕಟೇಶ ನಾಯ್ಕ, ವಿವಿಧ ಇಲಾಖೆ ಅಧಿಕಾರಿಗಳು, ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರು, ಸಿಬ್ಬಂದಿಗಳು, ಫಲಾನುಭವಿಗಳು ಇದ್ದರು.