ಚುನಾವಣಾ ಸಂದರ್ಭದಲ್ಲಿ ಪ್ರತಿ ಮನೆ ಮನೆಗೆ ಗ್ಯಾರಂಟಿ ಕಾರ್ಡ್ಗಳನ್ನು ನೀಡಲಾಗಿತ್ತು. ಚುನಾವಣಾ ನಂತರ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಚುನಾವಣಾ ಪೂರ್ವ ನೀಡಿದ ಗ್ಯಾರಂಟಿ ಭರವಸೆಗಳನ್ನು ಸಮರ್ಪಕವಾಗಿ ಈಡೇರಿಸಿದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ ಹೇಳಿದರು.
ಗದಗ ಲಕ್ಷ್ಮೇಶ್ವರ ರಸ್ತೆಯ ಮುಳಗುಂದದ ಆರ್ ಎನ್ ದೇಶಪಾಂಡೆ ಅವರ ಜಮೀನಿನಲ್ಲಿ ಬುಧವಾರ ಏರ್ಪಡಿಸಿದ ಗದಗ ತಾಲೂಕು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಪಂಚ ಗ್ಯಾರಂಟಿಗಳ ಅನುಷ್ಟಾನದಲ್ಲಿ ದಲ್ಲಾಳಿಗಳ ಹಾವಳಿಗೆ ಸಂಪೂರ್ಣ ನಮ್ಮ ಸರ್ಕಾರ ಕಡಿವಾಣ ಹಾಡಿದೆ. ಪಾರದರ್ಶಕ ಆಡಳಿತ ನೀಡುವ ಮೂಲಕ ಬಡವರ ದೀನ ದಲಿತರ ಪರವಾಗಿ ಹಗಲಿರುಳು ಕೆಲಸ ಮಾಡುತ್ತಿದೆ. ಬಡವರ ಸರ್ಕಾರಕ್ಕೆ ಜನಾಶೀರ್ವಾದ ನಿರಂತರವಾಗಿ ಇರಲೆಂದು ಕೋರಿದರು.
“ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನದಿಂದ ಅಭಿವೃದ್ಧಿಯ ಪ್ರಗತಿ ಪರ್ವ ನಿರಂತರವಾಗಿ ಮುನ್ನಡೆದಿದೆ. ಬಡವರ ಆರ್ಥಿಕ ಬದುಕು ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಪಂಚ ಗ್ಯಾರಂಟಿಗಳು ಕ್ರಾಂತಿಕಾರಕ ಹೆಜ್ಜೆಯನ್ನಿರಿಸಿವೆ. ರಾಜ್ಯದ 1.10 ಕೋಟಿ ಮಂದಿ ಜನರನ್ನು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೂಲಕ ಬಡತನದಿಂದ ಮೇಲೆ ತರಲಾಗಿದೆ. ಪಂಚ ಗ್ಯಾರಂಟಿಗಳಿಂದ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು ₹5000ದಷ್ಟು ಆರ್ಥಿಕ ಅನುಕೂಲವಾಗಲಿದೆ. ವರ್ಷಕ್ಕೆ ₹60,000 ಪ್ರತಿ ಕುಟುಂಬಕ್ಕೆ ಗ್ಯಾರಂಟಿಗಳ ಅನುಷ್ಠಾನದಿಂದ ಅನುಕೂಲವಾಗಲಿದೆ. ಜಗತ್ತಿನಲ್ಲಿಯೇ ಗ್ಯಾರಂಟಿ ಯೋಜನೆಗಳಂತಹ ಕಾರ್ಯಕ್ರಮಗಳನ್ನು ಎಲ್ಲಿಯೂ ಕಾಣಸಿಗಲಾರವು” ಎಂದರು.
ರಾಜ್ಯ ಖನಿಜ ನಿಗಮದ ಅಧ್ಯಕ್ಷರು ಹಾಗೂ ರೋಣ ಶಾಸಕ ಜಿ ಎಸ್ ಪಾಟೀಲ ಮಾತನಾಡಿ, “ಬೆಲೆ ಏರಿಕೆಯಿಂದ ಬಸವಳಿದ ಜನಸಾಮಾನ್ಯರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರವು ಚುನಾವಣಾ ಪೂರ್ವ ನೀಡಿದ ಭರವಸೆಗಳಾದ ಪಂಚ ಗ್ಯಾರಂಟಿ ಅನುಷ್ಠಾನ ಮಾಡುವ ಮೂಲಕ ಬಡವರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಿದೆ” ಎಂದರು.
“ಪಂಚ ಗ್ಯಾರಂಟಿ ಯೋಜನೆಗಳನ್ನು ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಹಾಗೂ ಜಿಲ್ಲಾಡಳಿತದ ಎಲ್ಲ ಅಧಿಕಾರಿಗಳ ನಿರಂತರ ಶ್ರಮದಿಂದ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆ. ಯೋಜನೆಗಳ ಅನುಷ್ಠಾನದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಶ್ರಮವೂ ಅಡಗಿದ್ದು, ಎಲ್ಲರಿಗೂ ಅಭಿನಂದನೆಗಳು” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಜಿಲ್ಲಾಸ್ಪತ್ರೆಯ ಮೇಲ್ಛಾವಣಿ ಪದರ ಕುಸಿತ; ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯದ ಆರೋಪ
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಿ ಆರ್ ಪಾಟೀಲ, ಗದಗ ಜಿಲ್ಲಾ ಮಟ್ಟದ ಗ್ಯಾರಂಟಿ ಸಮಿತಿಯ ಜಿಲ್ಲಾಧ್ಯಕ್ಷ ಬಿ ಬಿ ಅಸೂಟಿ, ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ಗಣ್ಯರುಗಳಾದ ಎಸ್ ಎನ್ ನೀಲಗುಂದ, ಎಂ ಟಿ ಬಟ್ಟೂರ, ಬಸವರಾಜ ಕಡೆಮನಿ, ನೀಲವ್ವ ಬೋಳೆಣ್ಣವರ, ಹನುಮಂತಪ್ಪ ಪೂಜಾರ, ಶಕುಂತಲಾ ಅಕ್ಕಿ, ಶ್ರೀನಿವಾಸ ಹುಯಿಲಗೋಳ, ಮಹಾಂತೇಶ, ಉಮಾ ಮಟ್ಟಿ, ನಾಗರಾಜ ದೇಶಪಾಂಡೆ, ಉಪವಿಭಾಗಾಧಿಕಾರಿ ಡಾ ವೆಂಕಟೇಶ ನಾಯ್ಕ, ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ, ತಾ ಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ ಹಿರಾಲಾಲ ಜಿನಗಿ ಹಾಗೂ ಹಲವು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
