ಕಾರ್ಲ್ ಮಾರ್ಕ್ಸ್ ರವರ 141ನೇ ಸ್ಮರಣಾ ದಿನಾಚರಣೆ ಕಾರ್ಯಕ್ರಮವನ್ನು ಎಸ್ಯುಸಿಐ (ಕಮ್ಯುನಿಸ್ಟ್) ಪಕ್ಷವು ಧಾಡವಾಡದಲ್ಲಿ ನಡೆಸಿದೆ. ಕಾರ್ಯಕ್ರಮದಲ್ಲಿ ಎಸ್ಯುಸಿಐ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ ಜಡಗಣ್ಣವರ ಧ್ವಜಾರೋಹಣ ನೆರವೇರಿಸಿ, ಕಾರ್ಲ್ ಮಾರ್ಕ್ಸ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಕಾರ್ಲ್ ಮಾರ್ಕ್ಸ್ ರವರು ತಮ್ಮ 17ನೇ ವಯಸ್ಸಿನಲ್ಲಿ ಬರೆದ ಲೇಖನದಲ್ಲಿ, ನಮ್ಮ ಜೀವನದಲ್ಲಿ ನಾವೆಲ್ಲರೂ ಮನುಕುಲಕ್ಕಾಗಿ ಶ್ರಮಿಸುವುದನ್ನು ಆರಿಸಿಕೊಂಡರೆ, ನಮ್ಮನ್ನು ಯಾವ ಭಾರವೂ ಕುಸಿಯುವಂತೆ ಮಾಡಲಾರದು, ಏಕೆಂದರೆ ಅವುಗಳು ಎಲ್ಲರ ಹಿತಕ್ಕಾಗಿ ಮಾಡಿದ ಬಲಿದಾನಗಳು. ಆಗ ನಾವು ಸಣ್ಣತನದ, ಸೀಮಿತವಾದ, ಸ್ವಾರ್ಥದಿಂದ ಕೂಡಿದ, ಸಂತೋಷವನ್ನು ಅನುಭವಿಸುವುದಿಲ್ಲ. ಬದಲಾಗಿ ನಮ್ಮ ಸಂತೋಷ ಲಕ್ಷಾಂತರ ಜನರಿಗೆ ಸೇರುತ್ತದೆ. ನಮ್ಮ ಕೆಲಸಗಳು ಸದ್ದು ಮಾಡುವುದಿಲ್ಲ. ಆದರೆ, ಶಾಶ್ವತವಾಗಿರುತ್ತವೆ ಮತ್ತು ನಮ್ಮ ಸಮಾಧಿಯ ಮೇಲೆ ಉದಾತ್ತ ಚೇತನಗಳ ಬಿಸಿ ಕಂಬನಿಗಳು ಬೀಳುತ್ತವೆ ಎಂದು ಹೇಳಿದ್ದನ್ನು ಸ್ಮರಿಸಿದರು.
ಇಂದು, ಭಾರತ ಸೇರಿದಂತೆ ಪ್ರಪಂಚದಾದ್ಯಂತ ಆರ್ಥಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ತೀವ್ರವಾದ ಬಿಕ್ಕಟ್ಟನ್ನು ಕಾಣುತ್ತಿದ್ದೇವೆ. ಜನಸಾಮಾನ್ಯರ, ದುಡಿಯುವ ಜನಗಳ ಬದುಕು ಬೀದಿಗೆ ಬಂದಿದೆ. ಮಾರುಕಟ್ಟೆ ವಿಸ್ತರಣೆಗೋಸ್ಕರ ಯುದ್ಧಗಳು ನಡೆಯುತ್ತಿವೆ. ಕೊಳೆತ ಬಂಡವಾಳಶಾಹಿ ವ್ಯವಸ್ಥೆಯ ಹುಟ್ಟುಹಾಕಿರುವ ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ವಿಶ್ವದ ದುಡಿಯುವ ಜನರ ವಿಮೋಚನೆಗೆ ಮಾರ್ಕ್ಸ್ ವಾದ ಒಂದು ಅಸ್ತ್ರವಾಗಿದೆ ಎಂದರು.
ಮಾರ್ಕ್ಸ್ ರವರ ಸ್ಮರಣ ದಿನವನ್ನು ಕೇವಲ ಸಾಂಪ್ರದಾಯಿಕವಾಗಿ ಆಚರಿಸದೆ ನಮ್ಮ ದೇಶದಲ್ಲಿಯೂ ಶೋಷಣಾಯುಕ್ತ ಬಂಡವಾಳಶಾಹಿ ವ್ಯವಸ್ಥೆಯನ್ನು ಕಿತ್ತೊಗೆದು ಶೋಷಣಾರಹಿತ ಸಮಾಜವಾದಿ ವ್ಯವಸ್ಥೆಯನ್ನು ಸ್ಥಾಪಿಸಲು ಮಾರ್ಕ್ಸ್ ವಾದವನ್ನು ಸರಿಯಾದ ನೆಲೆಗಟ್ಟಿನಲ್ಲಿ ಅರ್ಥೈಸಿಕೊಂಡು ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ ನೆರವೇರಿಸಲು ಸಂಕಲ್ಪ ತೊಡುವುದು ನಾವು ಮಾರ್ಕ್ಸ್ ರವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್ಯುಸಿಐ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಗಂಗಾಧರ ಬಡಿಗೇರ, ಜಿಲ್ಲಾ ಸಮಿತಿ ಸದಸ್ಯ ಭುವನಾ, ಶರಣು ಗೋನುವಾರ, ಮಧುಲತಾ ಗೌಡರ, ಭವಾನಿಶಂಕರ ಸೇರಿದಂತೆ ಪಕ್ಷದ ಸದಸ್ಯರು ಕಾರ್ಯಕರ್ತರು ಭಾಗವಹಿಸಿದ್ದರು.