ದೇಶದಲ್ಲಿ ಸಂವಿಧಾನವನ್ನು ದುರುಪಯೋಗ ಮಾಡಿಕೊಂಡ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಎಂದು ಮಾಜಿ ಮುಖ್ಯಮಂತ್ರಿ, ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಗದಗ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. “ಕಾಂಗ್ರೆಸ್ ತನ್ನನ್ನು ತಾನು ಸಂವಿಧಾನ ರಕ್ಷಕವೆಂದು ಹೇಳಿಕೊಳ್ಳುತ್ತದೆ. ಆದರೆ, ಸಂವಿಧಾನ ದುರುಪಯೋಗ ಮಾಡಿಕೊಂಡು ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ್ದು ಇದೇ ಕಾಂಗ್ರೆಸ್. ತುರ್ತು ಪರಿಸ್ಥಿತಿ ಹೇರಿ ನಾಗರಿಕರು ಮತ್ತು ಮಾಧ್ಯಮಗಳ ಹಕ್ಕುಗಳನ್ನು ಮೊಟಕುಗೊಳಿಸಿತು” ಎಂದು ಹರಿಹಾಯ್ದರು.
“ಅದೇ ರೀತಿ, ಹೆಣ್ಣುಮಗಳೊಬ್ಬಳು ವಿವಾಹ ವಿಚ್ಛೇದನ ಪಡೆದು ಜೀವನಾಂಶ ಕೋರಿ ಸುಪ್ರೀಂ ಕೋರ್ಟ್ನ ಮೊರೆಹೋದಳು. ಆದರೆ, ಕೋರ್ಟ್ ತೀರ್ಪು ಬಂದ ನಂತರ ಅಲ್ಪಸಂಖ್ಯಾತರನ್ನು ಓಲೈಸುವ ಸಲುವಾಗಿ ಕಾಂಗ್ರೆಸ್ನವರು ಸಂವಿಧಾನಕ್ಕೆ ತಿದ್ದುಪಡಿ ತಂದರು. ಹೆಣ್ಣುಮಗಳ ಮೇಲೆ ಪ್ರಹಾರ ಮಾಡಲು ಸಂವಿಧಾನ ದುರುಪಯೋಗ ಮಾಡಿಕೊಂಡರು. ಇದು ಕಾಂಗ್ರೆಸ್ ನೀತಿ. ಅವರಿಗೆ ಸಂವಿಧಾನದ ಬಗ್ಗೆ ಮಾತನಾಡುವ ಹಕ್ಕಿಲ್ಲ” ಎಂದು ಕಿಡಿಕಾರಿದರು.
“ಸುಳ್ಳಿಂದ ಹುಟ್ಟಿರುವ ಕಾಂಗ್ರೆಸ್ನಿಂದ ಯಾವುದೇ ಸತ್ಯದ ಕಾರ್ಯ ಮಾಡಲು ಸಾಧ್ಯವಿಲ್ಲ. ಇನ್ನೊಮ್ಮೆ ಮೋದಿ ಪ್ರಧಾನಿಯಾಗುವುದು ನೂರಕ್ಕೆ ನೂರು ಸತ್ಯ. ಕಾಂಗ್ರೆಸ್ನವರು ಕಾಮಾಲೆ ಕಣ್ಣುಗಳನ್ನು ಪಕ್ಕಕ್ಕಿಟ್ಟು, ದೇವರು ಕೊಟ್ಟಿರುವ ಕಣ್ಣುಗಳಿಂದ ನೋಡಿದರೆ ಮೋದಿ ಈ ದೇಶಕ್ಕಾಗಿ ಏನು ಮಾಡಿದ್ದಾರೆಂಬುದು ಕಾಣುತ್ತದೆ. ಭಾರತ ಬದಲಾಗುತ್ತಿದೆ. ಶ್ರೇಷ್ಠ ಭಾರತ ಆಗುತ್ತಿದೆ. ಅದಕ್ಕಾಗಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು” ಎಂದು ಹೇಳಿದರು.
“ಗದಗ ಜಿಲ್ಲೆಯಲ್ಲಿರುವುದು ಸಂಘರ್ಷದ ರಾಜಕಾರಣ. ತತ್ವ, ಸಿದ್ಧಾಂತಕ್ಕಾಗಿ ಗಟ್ಟಿ ಮತ್ತು ದಿಟ್ಟ ನಿಲುವು ತಳೆದಿರುವ ಇಲ್ಲಿನ ಜನರನ್ನು ವಿಶೇಷವಾಗಿ ಅಭಿನಂದಿಸುವೆ. ಬಿಜೆಪಿ ಸರ್ಕಾರ ಇದ್ದ ಸಂದರ್ಭಗಳಲ್ಲಿ ಮಾತ್ರ ಗದಗ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳಾಗಿವೆ. ಬರುವ ದಿನಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ಪುಷ್ಠಿ ಕೊಟ್ಟು, ಅದರ ಶ್ರೇಯಸ್ಸನ್ನು ಗದಗ ಬೆಟಗೇರಿ ಜನತೆಗೆ ಕೊಡುವೆ. ಅದಕ್ಕಾಗಿ ಎಲ್ಲರೂ ಒಂದಾಗಿ ಮನೆಮನೆಗೆ ಹೋಗಿ ಮೋದಿ ಮಾಡಿರುವ ಕೆಲಸ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿರುವ ಅಹಿತಕರ ಘಟನೆಗಳ ಬಗ್ಗೆ ತಿಳಿಸಬೇಕು. ಸಂಸದನಾಗಿ ಏನು ಕೆಲಸ ಕಾರ್ಯಗಳನ್ನು ಮಾಡಬೇಕೋ ಅದನ್ನು ನಾನು ಮಾಡಿಕೊಡುತ್ತೇನೆ. ನಿಮ್ಮ ಗೆಲುವಿನಲ್ಲಿ ನಾನಿರುವೆ” ಎಂದು ಘೋಷಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರ ಮಾತನಾಡಿ, “ರಾಷ್ಟ್ರೀಯ ನಾಯಕರು ಹಾವೇರಿ ಗದಗ ಲೋಕಸಭಾ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು 10 ವರ್ಷಗಳ ಆಡಳಿತಾವಧಿಯಲ್ಲಿ ದೇಶದ ಜನತೆಗೆ ನೀಡಿರುವ ಯೋಜನೆಗಳು ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಶ್ರೀರಕ್ಷೆ ಆಗಲಿವೆ. ಬೊಮ್ಮಾಯಿ ಅವರು ಈ ಬಾರಿ 2.50 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಗದಗ ಕ್ಷೇತ್ರದಿಂದ 15 ಸಾವಿರಕ್ಕೂ ಹೆಚ್ಚು ಮತಗಳಿಂದ ಅವರನ್ನು ಗೆಲ್ಲಿಸಿಕೊಡಬೇಕು” ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಶಾಸಕ ಸಿ ಸಿ ಪಾಟೀಲ ಮಾತನಾಡಿ, “ಪ್ರಧಾನಿ ಮೋದಿಯವರು ಮತ್ತೆ ಸ್ವಂತ ಬಲದ ಮೇಲೆ ಪ್ರಧಾನಿಯಾಗಲು ಈ ಬಾರಿ 370 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಿದೆ. ಆದರೆ, ಈ ಬಾರಿ ಬಿಜೆಪಿಯ ಗುರಿ 400 ಕ್ಷೇತ್ರಗಳಾಗಿದ್ದು, ರಾಜ್ಯದಲ್ಲಿರುವ 28 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡುವ ಸಂಕಲ್ಪ ಮಾಡಬೇಕಿದೆ” ಎಂದು ಹೇಳಿದರು.
“ಪ್ರಧಾನಿ ಮೋದಿ ಅವರು ಯಾವುದೇ ಜಾತಿ ಧರ್ಮ ನೋಡದೇ ಎಲ್ಲರಿಗೂ ಸವಲತ್ತುಗಳನ್ನು ಒದಗಿಸಿಕೊಟ್ಟಿದ್ದಾರೆ. ಅವರು ಮೂರನೇ ಬಾರಿಗೆ ಪ್ರಧಾನಿಯಾದರೆ ಜಗತ್ತಿನ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವನ್ನು ಮೂರನೇ ಸ್ಥಾನಕ್ಕೆ ತಂದು ನಿಲ್ಲಿಸುವರು” ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಫಲಪ್ರದ ನೀಡದ ಆರ್ ಅಶೋಕ್ ಭೇಟಿ; ಕಾಂಗ್ರೆಸ್ನತ್ತ ಜೆ ಸಿ ಮಾಧುಸ್ವಾಮಿ!
ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕುರಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಮುಖಂಡರುಗಳಾದ ಅರವಿಂದ್ ಬೆಲ್ಲದ, ಕಾಂತಿಲಾಲ ಬನ್ಸಾಲಿ, ಡಾ ಶೇಖರ್ ಸಜ್ಜನರ, ಎಂ ಎಸ್ ಕರಿಗೌಡ್ರ, ಅನಿಲ್ ಅಬ್ಬಿಗೇರಿ, ಉಷಾ ದಾಸರ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.
