ಸಮಾಜದ, ಆಡಳಿತಗಾರರ ಅಂಕು, ಡೊಂಕುಗಳನ್ನು ತಿದ್ದಲು, ಅವರನ್ನು ನಿದ್ದೆಯಿಂದ ಎಚ್ಚರಿಸಲು ಚುಟುಕು ಕವನಗಳು ಉತ್ತಮ ಅಸ್ತ್ರವಾಗಿವೆ. ಚುಟುಕು ಕವನಗಳು ಕೆಂಪು ಇರುವೆ ಕಚ್ಚಿದಂತೆ ಸಂಬಂಧಿತರಿಗೆ ಇರುಸು ಮುರಿಸು ಉಂಟು ಮಾಡುತ್ತದೆ ಎಂದು ಸಾಹಿತಿ ಜೆ.ಕಲೀಂಬಾಷಾ ಹೇಳಿದರು.
ದಾವಣಗೆರೆ ಜಿಲ್ಲೆಯ ಹರಿಹರ ನಗರದ ಸಿದ್ದೇಶ್ವರ ಪ್ಯಾಲೇಸ್ನ ಹೆಳವನಕಟ್ಟೆ ಗಿರಿಯಮ್ಮ, ಪ್ರೊ.ಬಿ.ಕೃಷ್ಣಪ್ಪ ವೇದಿಕೆಯಲ್ಲಿ ಮಂಗಳವಾರ ನಡೆದ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಲೇಖನಿಯು ಖಡ್ಗಕ್ಕಿಂತ ಹರಿತ ಎಂಬ ಗಾದೆ ಮಾತಿ ನಂತೆ ಚುಟುಕು ಕವನಗಳು ಸಾಹಿತ್ಯ ಕ್ಷೇತ್ರದ ಪ್ರಭಾವಿ ಪ್ರಕಾರವಾಗಿದೆ. ಬಂಡಾಯ ಸಾಹಿತಿಗಳ ಬೀಡಾಗಿದ್ದರಿಂದ ಹಿರಿಯ ಸಾಹಿತಿ ಚಂಪಾ ರವರಿಗೆ ಹರಿಹರ ನೆಚ್ಚಿನ ಊರಾಗಿತ್ತು. ಇಲ್ಲಿನ ಬಂಡಾಯ ಸಾಹಿತಿ, ಕವಿಗಳಿಂದ ರಚಿಸಲ್ಪಟ್ಟ ಕವನಗಳು, ಲೇಖನಗಳು ನಾಡಿನಾದ್ಯಂತ ಪ್ರಚಲಿತ ವಾಗಿದ್ದವು ಎಂದರು.
ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಯುವ ಕವಿಗಳು ಕೃಷಿ ಮಾಡಬೇಕು, ಮಕ್ಕಳಿಗಾಗಿ ಬರೆದರೆ ನಾಳೆಗಾಗಿ ಬರೆದಂತೆ. ಈ ಗೋಷ್ಠಿಯಲ್ಲಿ ವಾಚಿಸಿದ ಕವಿಗಳ ಕವನಗಳು ಉತ್ತಮವಾಗಿವೆ. ಇನ್ನಷ್ಟು ಸಾಹಿತ್ಯ ಕೃಷಿ ಮಾಡಿದರೆ ಇನ್ನಷ್ಟು ಉತ್ತಮ, ಇನ್ನೂ ಕೆಲವರದ್ದು ಇನ್ನಷ್ಟು ಕೃಷಿ ಮಾಡಲು ಸೂಚಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ದಾವಣಗೆರೆಯ ಕವಿ ಕೆ.ಪಿ. ತಾರೇಶ್ ಅಣಬೇರು ಆಶಯ ನುಡಿಗಳನ್ನಾಡಿ, ಕವಿತೆಗಳು ಮಾತನಾಡಬೇಕೆ ಹೊರತು, ಕವಿಯಲ್ಲ, ಕವಿಯಾಗಿ ಬೆಳೆಯುತ್ತಿರುವ ಇನ್ನೊಬ್ಬರನ್ನು ನೋಡಿ ಅಸೂಯೆಯಿಂದ ಕವನ ರಚಿಸುವುದಕ್ಕಿಂತ, ಕವನ ರಚನೆಯು ಮನಸ್ಸಿನಾಳದಿಂದ, ಅನುಭಾವದಿಂದ ಸಹಜವಾಗಿ ಹುಟ್ಟಬೇಕೆಂದು ಹೇಳಿದರು.
ಕವಿಗಳಾದ ಸಿ.ಕೆ. ಪುಟ್ಟನಾಯ್, ರಾಧಾ ಹನುಮಂತಪ್ಪ ಟಿ, ಕೆ.ಎಂ. ರೇಣುಕಾ, ಡಿ.ಜಿ. ಆನಂದ್, ಟಿ.ಎಚ್. ಸಾವಿತ್ರಮ್ಮ, ಡಾ.ನಮಿತಾ ಸತೀಶ್, ಪಿ.ಜಯರಾಮನ್, ಸತೀಶ್ ಎ, ಕೆ.ಬಸವರಾಜ್, ಮನೋಜ್ ಕುಮಾರ್ ಬಿ, ನೂರ್ ಜಹಾನ್, ಗಾಯತ್ರಿ ಜಿ.ಎಸ್, ಅಪ್ಪಾಜಿ ಮುನ್ನೂರು, ಶಿವಲೀಲಾ ಜಕ್ಕಾಲಿ, ಎ.ಬಿ. ಬಸವರಾಜಪ್ಪ, ಉಷಾ ಇ, ಮಲೆಬೆನ್ನೂರು ಸಾಬಿರ್ ಅಲಿ, ಜಿಗಳಿ ರಂಗನಾತ್, ಜ್ಯೋತಿ ಉಪಾಧ್ಯ, ಕೃಷ್ಣಪ್ಪ ಕವನ ವಾಚಿಸಿದರು.
ವೇದಿಕೆಯಲ್ಲಿ ಸಮ್ಮೇಳನದ ಅಧ್ಯಕ್ಷ ಪ್ರೊ. ಸಿ.ವಿ.ಪಾಟೀಲ್, ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಕಸಾಪ ತಾಲೂಕು ಘಟಕ ಅಧ್ಯಕ್ಷ ಡಿ.ಎಂ.ಮಂಜುನಾಥಯ್ಯ, ಕವಿಗಳಾದ ಹುಲಿಕಟ್ಟಿ ಚನ್ನಬಸಪ್ಪ, ಕುಂದೂರು ಮಂಜಪ್ಪ, ಬಿ.ಹಾಲೇಶಪ್ಪ, ರಹಮತ್ ಉರ್ ರಹಮಾನ್, ಕೆ.ವಿ.ಮೌನೇ ಶಾಚಾರ್, ಬಿ.ಮಂಜುಳ, ಕಾಂತರಾಜ್ ಎಂ, ಜಿ.ವಿ. ಬಸವರಾಜ್, ಶಾರದ ಕಣಗೊಟಗಿ, ನಾಗರಾಜ್ ಕತ್ತಿಗೆ, ನ್ಯಾಮತಿ ಯ ಡಿ.ಎಂ. ಹಾಲಾರಾಧ್ಯ, ಚನ್ನಗಿರಿಯ ಎಲ್.ಜಿ. ಮಧುಕುಮಾರ್ ಉಪಸ್ಥಿತರಿದ್ದರು.
