ಮಹಿಳೆಯೊಬ್ಬರು ಮನೆಯ ಶೌಚಾಲಯ ಸ್ವಚ್ಚಗೊಳಿಸಲು ಬಸ್ನಲ್ಲಿ ಆ್ಯಸಿಡ್ ತೆಗೆದುಕೊಂಡು ಹೋಗುವ ವೇಳೆ ಆ್ಯಸಿಡ್ ಬಾಟಲಿ ಸಿಡಿದು ಐದಾರು ಜನರು ಗಾಯಗೊಂಡಿರುವ ಘಟನೆ ಬುಧವಾರ ಸಂಜೆ ತುಮಕೂರಿನ ಗೂಳೂರು ಸಮೀಪದ ಪೋದಾರ್ ಶಾಲೆಯ ಬಳಿ ನಡೆದಿದೆ.
ತುಮಕೂರಿನ ಮರಳೂರು ದಿಣ್ಣೆಯ ಜನತಾ ಕಾಲೋನಿಯಲ್ಲಿ ವಾಸವಾಗಿರುವ ಶಕೀಲ ಭಾನು ಎಂಬ ಮಹಿಳೆ, ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ಬಳಿ ಕುಣಿಗಲ್ನಿಂದ ತುಮಕೂರಿಗೆ ಬರುವ ಗಣೇಶ್ ಬಸ್
ಹತ್ತಿದ್ದು, ಅವರ ಬಳಿ ಬ್ಯಾಗೊಂದು ಇತ್ತು. ಬಸ್ಸಿನ ಡ್ರೈವರ್ ಸೀಟಿನ ಹಿಂಬದಿಯಲ್ಲಿ ಕುಳಿತಿದ್ದರು. ಬಸ್ಸು ಹೊನ್ನುಡಿಕೆಯಿಂದ ಗೂಳೂರು ದಾಟಿ ಪೋದಾರ್ ಶಾಲೆಯ ಬಳಿ ಬರುವ ವೇಳೆಗೆ ಒತ್ತಡಕ್ಕೆ ಒಳಗಾಗಿ ಬ್ಯಾಗಿನಲ್ಲಿ ಇರಿಸಿದ್ದ ಆ್ಯಸಿಡ್ ಇದ್ದ ಬಾಟಲಿ ಸಿಡಿದು ಆಕೆಯ ಅಕ್ಕಪಕ್ಕ ಕುಳಿತಿದ್ದ ಭಾಗ್ಯಮ್ಮ ಸೇರಿದಂತೆ ಐದಾರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ವಿ, ನಗರ ಡಿವೈಎಸ್ಪಿ ಚಂದ್ರಶೇಖರ್, ಗ್ರಾಮಾಂತರ ಇನ್ಸ್ಪೆಕ್ಟರ್ ಮೋಹನ್ ಅವರುಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಲ್ಲದೆ, ಗಾಯಾಳು ಚಿಕಿತ್ಸೆ ಪಡೆಯುತ್ತಿರುವ ಸರ್ಕಾರಿ ಆಸ್ಪತ್ರೆಗೂ ಭೇಟಿ ನೀಡಿ ಗಾಯಾಳುಗಳಿಂದ ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ.
ಘಟನೆ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ವಿ ಸುದ್ದಿಗಾರರೊಂದಿಗೆ ಮಾತನಾಡಿ, “ಖಾಸಗಿ ಬಸ್ಸೊಂದು ಕುಣಿಗಲ್ನಿಂದ ತುಮಕೂರಿಗೆ ಬರುವ ವೇಳೆ ಗೂಳೂರು ಸಮೀಪದ ಪೋದಾರ್ ಶಾಲೆಯ ಬಳಿ ಬಾಟಲಿಯಿಂದ ಹೊರ ಚಲ್ಲಿದ ಆ್ಯಸಿಡ್ ಸಿಡಿದು ಐದಾರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹೊನ್ನುಡಿಕೆ ಗುಜರಿ ಶಾಫ್ನಲ್ಲಿ ಕೆಲಸ ಮಾಡುವ ಶಕೀಲಭಾನು ಎಂಬ ಮಹಿಳೆ ಮನೆಯಲ್ಲಿನ ಶೌಚಾಲಯ ಸ್ವಚ್ಚಗೊಳಿಸಲು ಅರ್ಧ ಲೀಟರ್ ಪ್ಲಾಸ್ಟಿಕ್ ಕೂಲ್ ಡ್ರಿಂಕ್ಸ್ ಬಾಟಲಿಯಲ್ಲಿ ತೆಗೆದುಕೊಂಡು ಹೋಗುವಾಗ ಈ ಘಟನೆ ನಡೆದಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಸೊಳ್ಳೆಗಳ ನಿಯಂತ್ರಣಕ್ಕೆ ಔಷಧಿ ಸಿಂಪಡಣೆ, ಚರಂಡಿಗಳ ಹೂಳೆತ್ತಲು ಕ್ರಮಕ್ಕೆ ಮನವಿ
“ಆಕೆಯಿಂದ ಆ್ಯಸಿಡ್ ತುಂಬಿದ್ದ ಬಾಟಲಿ ವಶಪಡಿಸಿಕೊಳ್ಳಲಾಗಿದೆ. ಪ್ರಥಮ ಚಿಕಿತ್ಸೆಗಾಗಿ
ಎಲ್ಲ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ, ಆ್ಯಸಿಡ್ ತೆಗೆದುಕೊಂಡು ಹೋಗುತ್ತಿದ್ದ ಮಹಿಳೆಯ ಪೂರ್ವಾಪರ ಹುಡುಕುವ ಪ್ರಯತ್ನ ನಡೆದಿದೆ. ಕೈಗಾರಿಕಾ ಉದ್ದೇಶಕ್ಕಾಗಿ ಆ್ಯಸಿಡ್ ಬಳಕೆಯಾಗುತ್ತಿರುವ ಮಾಹಿತಿ ಇದೆ. ಸ್ಕ್ರಪ್ ಅಂಗಡಿಗೆ ಆ್ಯಸಿಡ್ ಬಳಕೆಗೆ ಪರವಾನಗಿ ಇತ್ತೇ
ಎಂಬುದನ್ನೂ ಕೂಡ ನಮ್ಮ ಅಧಿಕಾರಿಗಳು ಪರಿಶೀಲನೆ ನಡೆಸುತಿದ್ದಾರೆ” ಎಂದು ವಿವರ ನೀಡಿದರು.
