ಬೀದಿ ನಾಯಿಗಳಿಗೆ ಅನ್ನ ಹಾಕಿದ ಕಾರಣಕ್ಕೆ ದಲಿತ ಮಹಿಳೆಗೆ ಪ್ರಬಲ ಜಾತಿಯ ಚಂದ್ರಕಾಂತ್ ಭಟ್ಟ ಎಂಬಾತ ಮಾರಾಣಾಂತಿಕ ಹಲ್ಲೆ ನಡೆಸಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಘಟನೆಯನ್ನು ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸಿದೆ.
ಉಡುಪಿ ತಾಲೂಕಿನ ಇಂದ್ರಾಳಿ ರೈಲ್ವೇ ಸ್ಟೇಷನ್ ಪಕ್ಕದಲ್ಲಿ ವಾಸಿಸುತ್ತಿದ್ದ ದಲಿತ ಮಹಿಳೆ ಬೇಬಿ ಎನ್ನುವವರು ನಿತ್ಯವೂ ಬೀದಿ ನಾಯಿಗಳಿಗೆ ಅನ್ನ ಹಾಕುತ್ತಿದ್ದರು. ಬುಧವಾರವೂ ಕೂಡ ತನ್ನ ದೈನಂದಿನ ದಿನಚರಿಯಂತೆ ಬೀದಿ ನಾಯಿಗಳಿಗೆ ಅನ್ನಹಾಕಿ ಸಲಹಿ ತನ್ನ ಪ್ರಾಣಿ ಪ್ರೀತಿ ಔದಾರ್ಯ ಮೆರೆಯುತ್ತಿದ್ದ ಬೇಬಿಯವರು ಇಂದ್ರಾಳಿಯಲ್ಲಿ ಬೀದಿ ನಾಯಿಗಳಿಗೆ ಅನ್ನ ಹಾಕುತ್ತಿದ್ದ ಸಂದರ್ಭದಲ್ಲಿ ಚಂದ್ರಕಾಂತ ಭಟ್ಟ ಎನ್ನುವವರು ರೀಪಿನಿಂದ ತಲೆಗೆ ಹೊಡೆದಿದ್ದು, ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ. ಕೊಲೆ ಮಾಡುವ ಉದ್ದೇಶದಿಂದಲೇ ಹೊಡೆದಿದ್ದು, ಬೇಬಿಯವರ ತಲೆಗೆ ತೀವ್ರವಾದ ಪೆಟ್ಟಾಗಿದೆ. ಅಜ್ಜರಕಾಡು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬುದ್ಧಿವಂತರ ಜಿಲ್ಲೆ ಎಂದು ಕರೆಯಲ್ಪಡುವ ಉಡುಪಿ ಜಿಲ್ಲೆಯಲ್ಲೂ ಮೇಲ್ವರ್ಗದವರ ಊಳಿಗಮಾನ್ಯ ಪದ್ದತಿಯ ಮನಸ್ಥಿತಿ ಹಾಗೇ ಮುಂದುವರಿದಿದೆ ಎನ್ನುವುದು ಮತ್ತೊಮ್ಮೆ ಸಾಬಿತಾಗಿದೆ.
ಘಟನೆಯ ಸುದ್ಧಿ ತಿಳಿದ ಕೂಡಲೇ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ನೇತ್ರತ್ವದಲ್ಲಿ ದಸಂಸ ನಿಯೋಗ ಆಸ್ಪತ್ರೆಗೆ ಭೇಟಿ ನೀಡಿದ್ದು, ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿ ಘಟನೆಯ ಮಾಹಿತಿ ಪಡೆದರು.
ದಲಿತ ಸಂಘರ್ಷ ಸಮಿತಿಯು ಹಲ್ಲೆಯನ್ನು ತೀವ್ರವಾಗಿ ಖಂಡಿಸಿದ್ದು, “ಆರೋಪಿಗೆ ಯಾವ ಕಾರಣಕ್ಕೂ ಜಾಮೀನು ಸಿಗಬಾರದು. ಮೇಲ್ವರ್ಗದವರ ಗೂಂಡಾಗಿರಿ ದಲಿತರ ಮೇಲೆ ನಿರಂತರವಾಗಿ ನಡೆಯುತ್ತಿದೆ. ಈಗ ಉಡುಪಿಯ ಪೊಲೀಸ್ ವ್ಯವಸ್ಥೆ ತೀರಾ ಹದಗೆಟ್ಟಿದ್ದು, ದಲಿತರಿಗೆ ರಕ್ಷಣೆಯೇ ಇಲ್ಲವಾಗಿದೆ. ಆರೋಪಿಗೆ ಸರಿಯಾದ ಶಿಕ್ಷೆ ಆಗಬೇಕು” ಎಂದು ಆಗ್ರಹಿಸಿದರು.
“ತಲೆಗೆ ಹೊಡೆದು ಕೊಲೆಗೆ ಪ್ರಯತ್ನಿಸಿದ ಆರೋಪಿಗೆ ಸಣ್ಣ ಪುಟ್ಟ ಕೇಸುಗಳನ್ನು ಹಾಕಿ ಆತನಿಗೆ ಜಾಮೀನು ಸಿಗುವಂತೆ ಪ್ರಯತ್ನಿಸಿದರೆ ದಸಂಸ ದೊಡ್ಡ ಪ್ರತಿಭಟನೆಗೆ ಕರೆ ಕೊಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಅನೈತಿಕ ಪೊಲೀಸ್ಗಿರಿ; ಮುಸ್ಲಿಂ ಯುವಕನಿಗೆ ಥಳಿಸಿದ ಹಿಂದೂ ಯುವಕರ ಗುಂಪು
ದಸಂಸ ಪದಾಧಿಕಾರಿಗಳಾದ ಸುಂದರ್ ಮಾಸ್ತರ್, ಮಂಜುನಾಥ ಗಿಳಿಯಾರು, ಶ್ಯಾಮರಾಜ್ ಬಿರ್ತಿ, ವಾಸುದೇವ ಮುದೂರು, ಭಾಸ್ಕರ್ ಮಾಸ್ತರ್, ಪರಮೇಶ್ವರ ಉಪ್ಪೂರು, ಶ್ಯಾಮಸುಂದರ್ ತೆಕ್ಕಟ್ಟೆ, ಶ್ರೀಪತಿ ಕುಂಜಿಬೆಟ್ಟು, ಶ್ರೀಧರ್, ರಾಜು ಬೆಟ್ಟಿನಮನೆ, ಮಂಜುನಾಥ್ ಬಾಳ್ಕದ್ರು, ಉಡುಪಿ ನಗರ ಸಭಾ ಸದಸ್ಯ ರಾಜು ಇದ್ದರು.