ತುಮಕೂರು ನಗರದ ಡಿಸಿ ಕಚೇರಿ ಬಳಿಯ ಶತಮಾನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೂಲ ಸೌಕರ್ಯ ಕಲ್ಪಿಸಲು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಎಐಡಿಎಸ್ಒ ಸಂಘಟನೆಯಿಂದ ಎನ್ಎಸ್ಎಪಿ ವಿಭಾಗದ ಸಹ ನಿರ್ದೇಶಕಿ ಸವಿತಾರವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
“ಶಾಲೆಗೆ ಸರಿಯಾದ ಕಾಂಪೌಂಡ್ ಇಲ್ಲದೆ ಅನೈತಿಕ ಕೃತ್ಯಗಳ ತಾಣವಾಗಿದೆ. ಸರಿಯಾದ ಕಟ್ಟಡ ಹಾಗೂ ಮೇಲ್ಛಾವಣಿ ವ್ಯವಸ್ಥೆ ಇಲ್ಲ, ಶೌಚಾಲಯಗಳು ಹಾಳಾಗಿವೆ. ಶಾಲಾ ಆವರಣದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕಲ್ಲುಗಳು ಮತ್ತು ಕಸದ ಗುಂಡಿಗಳಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ಶೈಕ್ಷಣಿಕ ನಗರಿ ತುಮಕೂರು ನಗರದ ಹೃದಯ ಭಾಗದ ಡಿಸಿ ಕಚೇರಿ ಹತ್ತಿರದಲ್ಲೇ ಇರುವ ಶತಮಾನದ ಇತಿಹಾಸ ಬರೆದಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂದು ಕನಿಷ್ಟ ಮೂಲ ಸೌಕರ್ಯಗಳ ಕೊರತೆಯಿಲ್ಲದೆ ನಲುಗುತ್ತಿದೆ. ನಗರದಲ್ಲೇ ಇಂತಹ ದುಃಸ್ಥಿತಿಯಲ್ಲಿರುವ ಶಾಲೆಗಳು ಬಹಳಷ್ಟಿರುವುದು ಶೋಚನೀಯ ಸಂಗತಿ” ಎಂದರು.
“ಪತ್ರಿಕೆಯಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಈಗಾಗಲೇ ತುಮಕೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶಾಲೆಗೆ ಭೇಟಿ ನೀಡಿರುತ್ತಾರೆ. ಆದರೆ ಇದು ಕೇವಲ ಭೇಟಿಗೆ ಸೀಮಿತವಾಗದೆ ಈ ಕೂಡಲೇ ಶಾಲೆಗೆ ಮೂಲ ಸೌಕರ್ಯ ಕಲ್ಪಿಸಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಪೂರಕವಾದ ವಾತಾವರಣ ನಿರ್ಮಿಸಬೇಕು” ಎಂದು ಎಐಡಿಎಸ್ಒ ತುಮಕೂರು ಜಿಲ್ಲಾ ಸಮಿತಿ ಆಗ್ರಹಿಸಿದೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಲೋಕಸಭಾ ಚುನಾವಣೆ: ಜಗದೀಶ್ ಶೆಟ್ಟರ್ ವಿರುದ್ಧ ಬ್ಯಾನರ್ ಅಳವಡಿಕೆ
ಇದೇ ಸಂದರ್ಭದಲ್ಲಿ ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ ಸಿ ಬಿ, ಜಿಲ್ಲಾ ಸೆಕ್ರಟೆರಿಯೇಟ್ ಸದಸ್ಯರುಗಳಾದ ಭರತ್ ಎಸ್, ಸಚಿನ್ ಹಾಗೂ ಕೌನ್ಸಿಲ್ ಸದಸ್ಯ ದಂಡಪ್ಪ ಇದ್ದರು.
