ಒಂದೇ ದಿನ ಇಬ್ಬರು ನ್ಯಾಯಮೂರ್ತಿಗಳಿಗೆ ಸೈಬರ್ ವಂಚಕ ಗುಂಪೊಂದು ಬೆದರಿಕೆ ಕರೆ ಮಾಡಿ, ಹಣ ವಸೂಲಿ ಯತ್ನಿಸಿದೆ ಎಂದು ವರದಯಾಗಿದೆ. ಈ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಪೊಲೀಸರ ಸೋಗಿನಲ್ಲಿ ಕರೆ ಮಾಡಿದ ಸೈಬರ್ ವಂಚಕರು ನ್ಯಾಯಮೂರ್ತಿಗಳೊಂದಿಗೆ ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ನಿಮ್ಮ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಬೆದರಿಸಿ ಹಣ ನೀಡುವಂತೆ ಕೇಳಿದ್ದಾರೆ. ಕೂಡಲೇ ಎಚ್ಚೆತ್ತ ಇಬ್ಬರು ನ್ಯಾಯಮೂರ್ತಿಗಳು ಇದು ಸೈಬರ್ ವಂಚನೆ ಎಂದು ಭಾವಿಸಿ ಪೊಲೀಸ್ ಠಾಣೆಗೆ ದೂರು ನೀಡಲು ಸೂಚನೆ ನೀಡಿದ್ದಾರೆ.
ನ್ಯಾಯಮೂರ್ತಿಗಳ ನಿರ್ದೇಶನದ ಮೇರೆಗೆ ಹೈಕೋರ್ಟ್ ಭದ್ರತಾ ಪೊಲೀಸ್ ಅಧಿಕಾರಿಗಳು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಹೈಕೋರ್ಟ್ ಭದ್ರತಾ ಅಧಿಕಾರಿಗಳಾದ ಇನ್ಸ್ಪೆಕ್ಟರ್ ಜಿ ಶೋಭಾ ಮತ್ತು ಸಬ್ ಇನ್ಸ್ಪೆಕ್ಟರ್ ಎ.ಆರ್ ರಘುನಾಯ್ಕ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ವಿಧಾನಸೌಧ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಏನಿದು ಪ್ರಕರಣ?
ಇಬ್ಬರು ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಸೈಬರ್ ವಂಚಕರು ಮಾರ್ಚ್ 15ರಂದು ಕ್ರಮವಾಗಿ ಬೆಳಿಗ್ಗೆ 9 ಗಂಟೆ ಮತ್ತು ಸಂಜೆ ಕರೆ ಮಾಡಿದ್ದಾರೆ. ನ್ಯಾಯಮೂರ್ತಿಗಳೊಂದಿಗೆ ಮಾತನಾಡಿದ ವಂಚಕ, ‘ತಾನು ಡಿಒಪಿಟಿ ಇಲಾಖೆಯಿಂದ ಕರೆ ಮಾಡುತ್ತಿದ್ದೇನೆ’ ಎಂದು ಪರಿಚಯ ಮಾಡಿಕೊಂಡಿದ್ದಾನೆ.
“ನಿಮ್ಮ ಒಂದು ಸಿಮ್ ಕಾರ್ಡ್ನಿಂದ ಕಾನೂನುಬಾಹಿರವಾಗಿ ಜಾಹೀರಾತು ಹಾಗೂ ಆಕ್ಷೇಪಾರ್ಹ ಮೆಸೇಜ್ ಹಾಕುತ್ತಿದ್ದೀರಿ. ಇದರಿಂದ ನಿಮ್ಮ ಮೇಲೆ ಮುಂಬೈನ ಅಂದೇರಿ ಈಸ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ” ಎಂದು ವಂಚಕ ಹೇಳಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕ್ಷಿಪ್ರ ಕಾರ್ಯಾಚರಣೆ; ಕಾವೇರಿ ನೀರು ಸರಬರಾಜಿನಲ್ಲಿ ಎದುರಾಗಿದ್ದ ಸಮಸ್ಯೆ ಸರಿಪಡಿಸಿದ ಜಲಮಂಡಳಿ
ನಿಮಗೆ ಅನುಮಾನ ಇದ್ದರೇ, ಈ ಕರೆಯನ್ನು ಪೊಲೀಸರಿಗೆ ವರ್ಗಾವಣೆ ಮಾಡುತ್ತೇನೆ ಎಂದು ಈ ಕರೆಯನ್ನು ಇನ್ನೊಬ್ಬನಿಗೆ ವರ್ಗಾವಣೆ ಮಾಡಿದ್ದಾನೆ. ಆ ವ್ಯಕ್ತಿ ತನ್ನನ್ನು ಪೊಲೀಸ್ ಎಂದು ಹೇಳಿಕೊಂಡು ಇಬ್ಬರು ನ್ಯಾಯಮೂರ್ತಿಗಳ ಜತೆಗೆ ಏರು ಧ್ವನಿಯಲ್ಲಿ ಮಾತನಾಡಿದ್ದಾನೆ. ನೀವು ದುಡ್ಡು ಕೊಟ್ಟರೆ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾನೆ. ಬಳಿಕ ಇಬ್ಬರು ನ್ಯಾಯಮೂರ್ತಿಗಳು ಕರೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ.
ಬೆದರಿಕೆ ಹಾಕಿ ಹಣ ಪಡೆದು ವಂಚನೆ ಮಾಡುವ ಗುಂಪು ಇರಬಹುದು ಎಂಬ ಶಂಕೆ ವ್ಯಕ್ತಪಡಿಸಿದ ಇಬ್ಬರು ನ್ಯಾಯಮೂರ್ತಿಗಳು ಭದ್ರತಾ ಅಧಿಕಾರಿಗೆ ದೂರು ನೀಡಲು ನಿರ್ದೇಶನ ನೀಡಿದ್ದಾರೆ.