ಸುಮಾರು 20-25 ವರ್ಷಗಳಿಂದ ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದಲ್ಲಿ 25ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳು ಗುಡಿಸಲು ಗಟ್ಟಿಕೊಂಡು ಯಾವುದೇ ಮೂಲ ಸೌಕರ್ಯವಿಲ್ಲದೆ ಜೀವನ ಸಾಗಿಸುತ್ತಿರುವುದು ಮನ ಕಲಕುವ ವಿಚಾರವಾಗಿದೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕು ವ್ಯಾಪ್ತಿಗೆ ಬರುವ ಸುಲೇಪೇಟ ಗ್ರಾಮ ಸೇಡಂ ವಿಧಾನಸಭಾ ಕ್ಷೇತ್ರಕ್ಕೆ ಸೇರಿದೆ. ಹಾಗಾಗಿ ಸುಲೇಪೇಟ ಮತದಾರರ ಮತಗಳು ಸೇಡಂ ವ್ಯಾಪ್ತಿಗೆ ಸೇರುತ್ತವೆ. ಸುಲೇಪೇಟ ಗ್ರಾಮದಲ್ಲಿರುವ ಅಲೆಮಾರಿ ಕುಟುಂಬಗಳು ವಾಸವಾಗಿ ಸುಮಾರು ವರ್ಷಗಳೇ ಕಳೆದರು ಕೆಲವು ಅಲೆಮಾರಿ ಕುಟುಂಬಗಳಿಗೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ರೇಷನ್ ಕಾರ್ಡ್, ವೋಟರ್ ಐಡಿ ಸೇರಿದಂತೆ ಯಾವುದೇ ದಾಖಲೆಗಳೂ ಕೂಡ ಇರಲಿಲ್ಲ.
ಸಾಮಾಜಿಕ ಕಾರ್ಯಕರ್ತ ಮಾರುತಿ ಗಂಜಗಿರಿ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ದಾಖಲೆಗಳು ಇಲ್ಲದಿರುವ ಕುರಿತು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆಯವರು ಚಿಂಚೋಳಿ ತಾಲೂಕಿಗೆ ಭೇಟಿ ನೀಡಿದಾಗ ಘೇರಾವ್ ಹಾಕುವುದಾಗಿ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಿಯಾಂಕ್ ಖರ್ಗೆ ಅವರ ಆದೇಶದ ಮೇರೆಗೆ ಎಲ್ಲರಿಗೂ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಐಡಿ ಕಾರ್ಡ್ ದೊರಕಿವೆ” ಎಂದು ತಿಳಿಸಿದರು.
ಅಲೆಮಾರಿ ಪೋಚಮ್ಮ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ನಮಗೆ ವಯಸ್ಸಾಗಿದೆ. ಈಗಲೂ ಕೂಡಾ ಗುಡಿಸಲಲ್ಲಿಯೇ ವಾಸವಾಗಿದ್ದೇವೆ. ಯಾರಿಗೆ ವೋಟು ಹಾಕಿದರೂ ಯಾವುದೇ ಪ್ರಯೋಜನವಾಗಿಲ್ಲ. ಯಾರಿಂದಲೂ ಏನೂ ಸಹಾಯ ಕಂಡಿಲ್ಲ. ಸಣ್ಣ ಸಣ್ಣ ಮಕ್ಕಳನ್ನು ಕಟ್ಟಿಕೊಂಡು ಗುಡಿಸಲಲ್ಲಿ ಇದ್ದೇವೆ. ಕತ್ತಲಲ್ಲಿ, ಮಳೆ, ಚಳಿಯಲ್ಲಿ ಜೀವನ ಮಾಡಿತ್ತಿದ್ದೀವಿ ಬೇಡಿಕೊಂಡು ಹಳಸಿದ ಅನ್ನ ತಿಂತೀವಿ, ಬೇರೆಯವರು ಉಟ್ಟು ಬಿಟ್ಟ ಬಟ್ಟೆ ಉಡ್ತೀವಿ. ಇಂತಹ ಪರಿಸ್ಥಿತಿಯಲ್ಲಿ ಬದುಕುತಿದ್ದರೂ ಕೂಡಾ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ನಮನ್ನು ಓಡಿಸುತ್ತಿದ್ದಾರೆ. ಯಾವುದೇ ಸೂಕ್ತ ನೆಲೆ ಇಲ್ಲದೇ ಕಂಗಲಾಗಿದ್ದೀವಿ. ನಮಗೆ ಒಂದು ಮನೆ ದೊರಕಿಸಿಕೊಟ್ಟರೆ ಸಾಕು” ಎಂದು ಮನವಿ ಮಾಡಿದರು.
ದ್ಯಾವಮ್ಮ ಮಾತನಾಡಿ, “35 ವರ್ಷದಿಂದ ನಾನು ಇಲ್ಲೇ ವಾಸವಾಗಿದ್ದೇನೆ. ಅಂದಿನಿಮದಲೂ ಮನೆ ಮಾಡಿಕೊಡುವುದಾಗಿ ಬರೀ ಸುಳ್ಳು ಅಶ್ವಾಸನೆ ಕೊಡುತ್ತಾರೆ. ನನ್ನ ಮಗಳು 22 ವರ್ಷದವಳಾಗಿ ಮದುವೆಯಾಗಿದೆ. ಆದರೆ ಈವರೆಗೂ ಅದೇ ಸುಳ್ಳು ಭರವಸೆ ಕೊಡುತ್ತಿದ್ದಾರೆ. ಗುಡಿಸಲಲ್ಲಿ ಇನ್ನು ಎಷ್ಟು ದಿನ ಹೀಗೆ ಬಾಳಬೇಕು. ಇಷ್ಟು ವರ್ಷ ಆದರೂ ಕೂಡಾ ಯಾರೊಬ್ಬರೂ ನಮ್ಮ ಬಗ್ಗೆ ಕಾಳಜಿ ವಹಿಸುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ರಸ್ತೆ ಇಲ್ಲದೇ ಮಳೆಗಾಲದಲ್ಲಿ ಕೊಚ್ಚೆಯಲ್ಲಿ ಮಲಗಿದ್ದೇವೆ. ಅಧಿಕಾರಿಗಳು, ಜನಪ್ರತಿನಿಧಿಗಳು ಗುಡಿಸಲಲ್ಲಿ ಒಂದು ದಿನ ಕಳೆದು ನೋಡಿದರೆ ನಮ್ಮ ಪರಿಸ್ಥಿತಿ ಏನು? ಎಂಬುದು ತಿಳಿಯುತ್ತದೆ. ದಯಮಾಡಿ ಈಗಲಾದರೂ ನಮಗೆ ಮನೆಮಾಡಿ ಕೊಡಿ. ನಮಗೆ ರೋಗ ರುಜಿನಗಳು ಬರುತ್ತಿವೆ. ಒಂದು ಮನೆ ಮಾಡಿ ಕೊಟ್ಟರೆ ಆ ಮನೆಯಲ್ಲಿ ನೀರು ಕುಡಿದು ಜೀವನ ಸಾಗಿಸುತ್ತೇವೆ” ಎಂದು ಮನವಿ ಮಾಡಿದರು.
ಅಲೆಮಾರಿ ರಾಮುಲು ಮಾತನಾಡಿ, “ನಮ್ಮನ್ನು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಿಸುತ್ತಾರೆ. ನಾವು ಎಷ್ಟು ದಿನ ಅಂತ ಹೀಗೆ ಅಲೆದಾಡಬೇಕು. ನಮಗೆ ಒಂದು ನೆಲೆ ಕಲ್ಪಿಸಿಕೊಡಬೇಕು. ಒಂದು ಮನೆ ಮಾಡಿ ಕೊಡಿ” ಎಂದು ಬೇಡಿಕೊಂಡರು.
ಈ ಸುದ್ದಿ ಓದಿದ್ದೀರಾ? ತುಮಕೂರನ್ನು ʼಸ್ಮಾರ್ಟ್ ಸಿಟಿʼಗೆ ಸೇರಿಸಿದ್ದು ನಾನು: ಮುದ್ದಹನುಮೇಗೌಡ
ನರಸಿಂಹ ಮಾತನಾಡಿ, “ನಾವುಗಳು ವೋಟು ಹಾಕಿ ಏನು ಪ್ರಯೋಜನ? ನಮಗೆ ಯಾವ ಮೂಲ ಸೌಕರ್ಯಗಳೂ ಸಿಕ್ಕಿಲ್ಲ. ಸಣ್ಣ ಸಣ್ಣ ಮಕ್ಕಳನ್ನು ಕಟ್ಟಿಕೊಂಡು ನಾವು ಎಲ್ಲೆಂದರಲ್ಲಿ ತಿರುಗಾಡಬೇಕು. ಏನಾದರೂ ಅನಾಹುತ ಆದರೆ ಯಾರು ಹೊಣೆ? ನಮ್ಮ ಬಗ್ಗೆ ಯಾರೊಬ್ಬರಿಗೂ ಕನಿಕರ ಕಾಳಜಿ ಇಲ್ಲ” ಎಂದು ತಮ್ಮ ದುಃಖವನ್ನು ವ್ಯಕ್ತಪಡಿಸಿದರು.

ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.